ಕನ್ನಡವೆಂಬುದು ಸಂಭ್ರವಾಗದೆ ಆಚರಣೆಯಾಗಲಿ : ಪ್ರಮೋದ್ ಮರವಂತೆ

ಬಿಎಂಎಸ್ ತಾಂತ್ರಿಕ, ವ್ಯವಸ್ಥಾಪನಾ ಮಹಾವಿದ್ಯಾಲಯ ದಲ್ಲಿ 69ನೇ ಕನ್ನಡ ರಾಜ್ಯೋತ್ಸವ :

ಯಲಹಂಕ : ಕನ್ನಡ ವೆಂಬುದು ಕೇವಲ ಒಂದು ದಿನದ ಸಂಭ್ರಮವಾಗದೆ ನಿರಂತರವಾದ ಆಚರಣೆಯಾಗಬೇಕು ಎಂದು ಕನ್ನಡ ಚಿತ್ರರಂಗದ ಖ್ಯಾತ ಗೀತೆ ರಚನೆಕಾರ ಪ್ರಮೋದ್ ಮರವಂತೆ ಅಭಿಪ್ರಾಯಪಟ್ಟರು.

ಯಲಹಂಕದ ಬಿಎಂಎಸ್ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ ದಲ್ಲಿ ಶನಿವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಬಿಎಂಎಸ್ ಕಾಲೇಜಿನಂಥ ತಾಂತ್ರಿಕ ಶಿಕ್ಷಣದ ಕಾಲೇಜು ಆವರಣದಲ್ಲಿ ಅತ್ಯಂತ ವಿಶಿಷ್ಟ ಮತ್ತು ಪ್ರಾಮಾಣಿಕ ಕಾಳಜಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಪರಿ ನೋಡಿ ಹೆಮ್ಮೆ ಮತ್ತು ಸಂತೋಷವಾಯಿತು ಎಂದರು.

ಸೋಲೈಝ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪ್ರಕಾಶ್ ಎಂ.ಆರ್. ಮಾತನಾಡಿ ‘ಬಿಎಂಎಸ್ ಕಾಲೇಜು ಆವರಣದಲ್ಲಿ ಕನ್ನಡೇತರ ವಿದ್ಯಾರ್ಥಿಗಳು ಸಹ ಅತ್ಯಂತ ಉತ್ಸುಕತೆಯಿಂದ ತಮ್ಮದೆಂಬಂತೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದನ್ನು ಕಂಡು ಕನ್ನಡ ಭಾಷೆ ಮುಂದೆಯೂ ಸಹ ಸಹಸ್ರಾರು ವರ್ಷಗಳ ಕಾಲ ಹೀಗೆಯೇ ವಿರಾಜಮಾನವಾಗಿ ಮುಂದುವರಿಯಲಿದೆ ಎಂಬ ಭರವಸೆ ಮೂಡಿಸಿತು ಎಂದರು.

ಚಂದನ ವಾಹಿನಿಯ ಖ್ಯಾತ ನಿರೂಪಕ, ಗಜಲ್ ಗಾಯಕ ವಿಜಯೇಂದ್ರ ಅಥಣೀಕರ್ ಮಾತನಾಡಿ ‘ಬಿಎಂಎಸ್ ಕಾಲೇಜು ಆವರಣದಲ್ಲಿ ಇರುವ ಕನ್ನಡದೆಡೆಗಿನ ಆಸಕ್ತಿ, ಅಸ್ಮಿತೆ, ಕಾಳಜಿ ನಿಜಕ್ಕೂ ಮಂತ್ರಮುಗ್ಧನಾಗುವಂತೆ ಮಾಡಿದೆ, ವೀರಗಾಸೆ, ಡೊಳ್ಳುಕುಣಿತದಂತಹ ಅಪ್ಪಟ ಕನ್ನಡ ಸೊಗಡಿನ ಜಾನಪದ ಕಲಾತಂಡಗಳ ಪ್ರದರ್ಶನ ನಿಬ್ಬೆರಗು ಮೂಡಿಸಿತು, ಬಿಎಂಎಸ್ ಕಾಲೇಜಿನಲ್ಲಿ ಕನ್ನಡದ ಬಗೆಗಿನ ಕಾಳಜಿ, ಕಂಪು ಹೀಗೆಯೇ ಇರಲಿ ಎಂದರು.

ಬಿಎಂಎಸ್ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸಂಜಯ್ ಎಚ್.ಎ.ಮಾತನಾಡಿ ‘ಬೆಂಗಳೂರು ನಗರದಲ್ಲಿ ಅನ್ಯಭಾಷಿಕರೊಂದಿಗೆ ಕನ್ನಡದಲ್ಲೇ ಮಾತನಾಡುವ ಬದ್ಧತೆಯನ್ನು ಕನ್ನಡಿಗರಾದ ನಾವು ತೋರಿದರೆ ಕನ್ನಡವೂ ಬೆಳೆಯುತ್ತದೆ, ಅನ್ಯ ಭಾಷಿಕರು ಸಹ ಕನ್ನಡ ಕಲಿಯಲು ಅವಕಾಶ ನೀಡಿದಂತಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಬಿಎಂಎಸ್ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ.ಅನಿಲ್, ಡಾ.ಅಂಬಿಕಾ ಆರ್., ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ಸಹಸ್ರಾರು ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *