



ಪಬ್ಲಿಕ್ ಪವರ್:
ಬಂಗಾರಪೇಟೆ ; ಸಮಾಜದಲ್ಲಿದ್ದಂತಹ ಜಾತಿ,ಮತ, ಕುಲ ತಾರತಮ್ಯವೆಂಬ ಅಜ್ಞಾನದ ಕತ್ತಲೆಯ ಕಾರ್ಮೋಡಸರಿಸಿ ಸಾಮರಸ್ಯ- ಸಮಾನತೆಯ ಮೂಲಕ ಜ್ಞಾನವೆಂಬ ಬೆಳಕನ್ನು ಚೆಲ್ಲಿದ ಸಂತ ಕನಕದಾಸರು, ಎಂದು ಕರ್ನಾಟಕ ನಗರಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕು ಪ್ರದೇಶ ಕುರುಬ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 14ನೇ ಶತಮಾನದಲ್ಲಿ ತಿಮ್ಮಪ್ಪ ನಾಯಕನಾಗಿ ಹಾವೇರಿ ಜಿಲ್ಲೆಯಲ್ಲಿ ಜನಿಸಿದ ಕನಕದಾಸರು, ಜಾತಿ ವ್ಯವಸ್ಥೆ ಮತ್ತು ಭಕ್ತಿಯ ಹೆಸರಿನಲ್ಲಿ ನಡೆಸುತ್ತಿದ್ದ ತಾರತಮ್ಯಗಳ ವಿರುದ್ಧ ಸಮರಸಾರಿ ತನ್ನ ಕೀರ್ತನೆಗಳ ಮೂಲಕ ಸಮ- ಸಮಾಜದ ಕ್ರಾಂತಿ ಸಾರಿದ ಸಂತ ಎಂದರು.
ಕನ್ನಡ ಸಾಹಿತ್ಯ ಪರಂಪರಕ್ಕೆ ಅನನ್ಯ ಕೊಡುಗೆ:
ಕನಕದಾಸರು ಸಮಾಜ ಸುಧಾರಕರು ಮಾತ್ರವಲ್ಲ ಒಬ್ಬ ದಾರ್ಶನಿಕರಾಗಿ ಕನ್ನಡ ಭಾಷೆಯಲ್ಲಿ ಹರಿಭಕ್ತಸಾರ, ರಾಮಧ್ಯಾನ ಚರಿತ್ರೆ , ನಲ ಚರಿತ್ರೆ ಮೋಹನ ತರಂಗಿಣಿ ಎಂಬ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ.
ಪ್ರೇರಣೆಯಿಂದ ಭವನ ನಿರ್ಮಾಣಕ್ಕೆ ನಿವೇಶನ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬ ಸಮುದಾಯದಲ್ಲಿ ಜನಿಸಿದರೂ ಸಹ ಸರ್ವ ಜನಾಂಗದ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ, ಅವರ ಪ್ರೇರಣೆಯೊಂದಿಗೆ ಕಾರಹಳ್ಳಿ ಗ್ರಾಮದ ಸರ್ವೆ ನಂಬರ್ 197ರಲ್ಲಿ ಕುರುಬ ಸಮುದಾಯವನ್ನು ಒಳಗೊಂಡಂತೆ ಎಲ್ಲಾ ವರ್ಗ ಸಮುದಾಯಗಳಿಗೆ ತಲಾ 10 ಗುಂಟೆ, ನಿವೇಶನವನ್ನು ಮಂಜೂರು ಮಾಡಲಾಗಿದೆ ಆದರೆ ಕೆಲವರು ಹಂಚಿಕೆಯಾದ ನಿವೇಶನವನ್ನು ಒತ್ತುವರಿ ಮಾಡಿಕೊಂಡಿದ್ದಾರೆ, 10 ದಿನಗಳ ಒಳಗಾಗಿ ತಹಸೀಲ್ದಾರ್ ಮುಖೇನ ಒತ್ತುವರಿ ಸ್ಥಳವನ್ನು ತೆರವುಗೊಳಿಸಲಾಗುವುದು ಎಂದರು.
ಸ್ವಂತ ಹಣದಲ್ಲಿ ಪುತ್ಥಳಿ ನಿರ್ಮಾಣ:
ಪುರಸಭೆ ವೃತ್ತದಲ್ಲಿ ಸಮುದಾಯದ ಬೇಡಿಕೆಯಂತೆ ಸ್ವಂತ ಹಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಮತ್ತು ಕನಕದಾಸರ ಪುತ್ಥಳಿ ನಿರ್ಮಾಣ ಮಾಡಲಾಗುವುದು.
ಒಗ್ಗಟ್ಟಿನ ಕೊರತೆ ರಾಜಕೀಯ ಅಸ್ಥಿರತೆಗೆ ಕಾರಣ:
ಹಿಂದೆ ಕುರುಬ ಸಮುದಾಯದವರನ್ನು ಪುರಸಭೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಮತ್ತು ಅನೇಕ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಸಹಕರಿಸಲಾಗಿತ್ತು, ವಿಪರ್ಯಾಸ ತದನಂತರದ ದಿನಗಳಲ್ಲಿ ಕುರುಬ ಸಮುದಾಯಲ್ಲಿ ಬಿರುಕು ಉಂಟಾದ ಕಾರಣ ಮತ್ತು ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ ಅಸ್ಥಿರತೆ ಉಂಟಾಗಿದೆ , ಮುಂದಿನ ದಿನಗಳಲ್ಲಿ ವಲಗಮಾದಿ ಮುನಿರಾಜು ರವರನ್ನು ಜಿಲ್ಲಾ ಪಂಚಾಯಿತಿ ಸದಸ್ಯರನ್ನಾಗಿ ಮಾಡುವ ಗುರಿ ಹೊಂದಿದ್ದು ಎಲ್ಲರೂ ಐಕ್ಯತೆಯೊಂದಿಗೆ ಸಹಕರಿಸಬೇಕು ಎಂದರು.
ಮತದಾನದ ಆಧಾರದ ಮೇಲೆ ರಾಜಕಾರಣ ಮಾಡುವುದಿಲ್ಲ ಕುರುಬ ಸಮುದಾಯ ನನಗೆ ಮತ ಹಾಕಲಿ ಅಥವಾ ಬಿಡಲಿ ಸದಾ ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಆಹಾರ ಗುತ್ತಿಗೆದಾರರು ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡರಾದ ಚಿಕ್ಕ ವಲಗಮಾದಿ ಆರ್. ಮುನಿರಾಜು, ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷ ಚಂದ್ರವೇಣಿ, ಜಿಲ್ಲಾ ಪ್ರಾಥಮಿಕ ಸಂಘದ ಅಧ್ಯಕ್ಷ ಅಪ್ಪಯ್ಯ ಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ,ವಿ, ನಾಗರಾಜು, ಕುರುಬರ ಸಂಘದ ಅಧ್ಯಕ್ಷ ರಾಮಕೃಷ್ಣ (ಎಲ್.ಆರ್.ಕೆ), ಚಂದು, ಕಾರಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಂ.ನಾರಾಯಣಸ್ವಾಮಿ, ದೋಣಿ ಮಡುಗು ಗ್ರಾ.ಪಂ. ಅಧ್ಯಕ್ಷ ಮಂಜುಳಾ ಜಯಣ್ಣ,
ತಹಸೀಲ್ದಾರ್ ವೆಂಕಟೇಶಪ್ಪ, ಇ ಓ ರವಿಕುಮಾರ್, ಬಿಇಓ ಗುರುಮೂರ್ತಿ, ಪೊಲೀಸ್ ಇನ್ಸ್ಪೆಕ್ಟರ್ ದಯಾನಂದ್ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಪಿಡಬ್ಲ್ಯೂಡಿ ಅಧಿಕಾರಿ ರವಿ, ತೋಟಗಾರಿಕಾ ಅಧಿಕಾರಿ ಶಿವಾರೆಡ್ಡಿ, ಸಿ ಡಿ ಪಿ ಓ ಮುನಿರಾಜು, ಸಮಾಜ ಕಲ್ಯಾಣ ಇಲಾಖೆ ಅಂಜಲಿ ದೇವಿ, ಕೃಷಿ ಇಲಾಖೆ ಪ್ರತಿಭ, ಭಾಗ್ಯಮ್ಮ, ಚಿನ್ನಕೋಟೆ ಅಂಬರೀಶ್, ಚಿಕ್ಕ ವಲಗಮಾದಿ ಚೌಡಪ್ಪ, ಚಲಪತಿ, ದೊಡ್ಡಪ್ಪ, ಯುವರಾಜ್, ಸುಹೇಲ್ ,ಸಾದಿಕ್, ರಫೀಕ್, ಇತರರು ಉಪಸ್ಥಿತರಿದ್ದರು.