



ಕ.ಸಾ.ಪ ಯಲಹಂಕ ವಿಧಾನಸಭಾ ಕ್ಷೇತ್ರ ವತಿಯಿಂದ ಕನ್ನಡ ರಾಜ್ಯೋತ್ಸವ :
ನೂತನ ಪದಾಧಿಕಾರಿಗಳ ಪದಗ್ರಹಣ :
ಯಲಹಂಕ : ಕನ್ನಡ ಸಾಹಿತ್ಯ ಪರಿಷತ್ತು, ಯಲಹಂಕ ವಿಧಾನಸಭಾ ಕ್ಷೇತ್ರ, ವತಿಯಿಂದ ಯಲಹಂಕದ ಲಯನ್ಸ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕಾರ್ಯಕಾರಿಣಿ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶಾಸಕ ಎಸ್.ಆರ್.ವಿಶ್ವನಾಥ್ ಉದ್ಘಾಟಿಸಿದರು.
ಇದೇ ವೇಳೆ ಶಾಸಕರು ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ಬಾಲ್ಯದ ದಿನಗಳಿಂದಲೂ ನಾನು ಕನ್ನಡ ಪ್ರೇಮಿಯಾಗಿದ್ದೇನೆ. ಹುಡುಗನಿದ್ದಾಗ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿದ್ದೆ. ಗ್ರಾಮಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವುದು, ಕನ್ನಡ ನಾಡು, ನುಡಿಯ ವಿಷಯದಲ್ಲಿ ಸಂಘರ್ಷಾತ್ಮಕ ಘಟನೆಗಳು ನಡೆದಾಗ ನಾಡು, ನುಡಿಯ ಪರ ಹೋರಾಟ ಮಾಡಿದ್ದೇನೆ. ನಾನಿಂದು ಸಮಾಜದಲ್ಲಿ ಒಂದಿಷ್ಟು ಸಾಧನೆ ಮಾಡಿದ್ದರೆ, ಅದಕ್ಕೆ ತಾಯಿ ಭುವನೇಶ್ವರಿಯ ಕೃಪಾಶೀರ್ವಾದವೇ ಕಾರಣ ಎಂದರು.
ಹೆಬ್ಬಾಳದ ಸುಮಂಗಲಿ ಸೇವಾಶ್ರಮದ ಡಾ ಸುಶೀಲಮ್ಮ ಮಾತನಾಡಿ ‘ಕನ್ನಡ ಉಳಿಸಿ ಬೆಳೆಸುವ ಕಾರ್ಯ ಪ್ರಾಥಮಿಕ ಶಿಕ್ಷಣದಿಂದಲೆ ಆರಂಬವಾಗಬೇಕು, ಏಕೆಂದರೆ ಬಾಲ್ಯದಲ್ಲಿ ಕಲಿತದ್ದು ಬದುಕಿನುದ್ದಕ್ಕೂ ಉಳಿಯುತ್ತದೆ ಎಂದರು.
ಯಲಹಂಕ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಎಸ್. ಹರೀಶ್ ಮಾತನಾಡಿ ಕನ್ನಡ ನಾಡು-ನುಡಿ,ನೆಲ-ಜಲ, ಗಡಿ ಸಂರಕ್ಷಣೆ ಯಂತಹ ವಿಷಯಗಳಲ್ಲಿ ಬದ್ಧತೆಯೊಂದಿಗೆ ಕಾರ್ಯಮಗ್ನನಾಗುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಯಲಹಂಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಗೀತಾ ಎನ್., ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯ ಸಮರ್ಥ, ಜೈನ್ ಸ್ಕೂಲ್ ನ ನಿರ್ದೇಶಕಿ ಅರ್ಚನಾ ವಿಶ್ವನಾಥ್ ಸೇರಿದಂತೆ ಯಲಹಂಕ ಕ.ಸಾ.ಪ. ಕಾರ್ಯಕಾರಿಣಿ ಸಮಿತಿಯ ಸದಸ್ಯರಿದ್ದರು.