ಸಂಕ್ರಾಂತಿಯ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ‘ಸುಗ್ಗಿ-ಹುಗ್ಗಿ:

ವಾರಾಂತ್ಯದಲ್ಲಿ ಸುಗ್ಗಿಯ ಸವಿಯುಂಡ ನಾಗರೀಕರು :

ಬ್ಯಾಟರಾಯನಪುರ :ಸಂಕ್ರಾಂತಿಯ ಪ್ರಯುಕ್ತ ಕೆಬಿಜಿ ಸ್ವಯಂ ಸೇವಕರು ಮತ್ತು ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಹಭಾಗಿತ್ವದಲ್ಲಿ ಜಕ್ಕೂರು ಮೈದಾನದಲ್ಲಿ ಏರ್ಪಡಿಸಿದ್ದ ಅಪ್ಪಟ ಜಾನಪದ ಸೊಗಡಿನ ನಾಲ್ಕನೇ ವರ್ಷದ ‘ಸುಗ್ಗಿ ಹುಗ್ಗಿ 2025’ ಕಾರ್ಯಕ್ರಮ ಅಸಂಖ್ಯಾತ ಜನರ ಪಾಲ್ಗೊಳ್ಳುವಿಕೆಯ ಮೂಲಕ ವೈಭವಕ್ಕೆ ಸಾಕ್ಷಿಯಾಯಿತು.

‘ಸುಗ್ಗಿ ಹುಗ್ಗಿ’ ಕಾರ್ಯಕ್ರಮದ ಪ್ರಯುಕ್ತ ಭಾರತೀಯ ಪರಂಪರೆಯ ಕ್ರೀಡೆಗಳಾದ ಕಬಡ್ಡಿ, ಟಗ್ ಆಫ್ ವಾರ್, ಜನಪದ ನೃತ್ಯ, ಚಿತ್ರಕಲೆ, ರಂಗೋಲಿ ಮುಂತಾದ ಭಾರತೀಯ ಪರಂಪರೆಯ ಹಲವು ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾನುವಾರ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಯುವ ಪ್ರತಿಭೆಗಳಿಗೆ ಕಂದಾಯ ಸಚಿವರು, ಕಾರ್ಯಕ್ರಮದ ರುವಾರಿಗಳಾದ ಕೃಷ್ಣಬೈರೇಗೌಡ ಅವರು ಸನ್ಮಾನಿಸಿ ಗೌರವಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಡೊಳ್ಳುಕುಣಿತ, ಪಟದ ಕುಣಿತ, ವೀರಗಾಸೆ, ಯಕ್ಷಗಾನ ಮುಂತಾದ ಜಾನಪದ ಕಲೆಗಳ ಪ್ರದರ್ಶನ ವಿಶೇಷ ಗಮನ ಸೆಳೆಯಿತು.

ಸುಮಾರು 150 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಗೃಹೋಪಯೋಗಿ ವಸ್ತುಗಳು, ಸಿರಿಧಾನ್ಯ, ಮಣ್ಣಿನ ಮಡಕೆಗಳು, ಬಟ್ಟೆ, ಬೊಂಬೆಗಳು, ಕೃತಕ ಆಭರಣಗಳು, ಅಲಂಕಾರಿಕ ವಸ್ತುಗಳು, ತಿಂಡಿ-ತಿನಿಸುಗಳು, ಬೃಹತ್ ವಸ್ತು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಏರ್ಪಡಿಸಲಾಗಿತ್ತು. ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಪ್ರದರ್ಶಿಸಲಾದ ಎತ್ತುಗಳು, ಕುರಿಗಳು, ಸಾಂಪ್ರದಾಯಿಕ ಕೃಷಿ ಸಲಕರಣೆಗಳು, ಅವರೇಮೇಳ, ಬೆಲ್ಲದ ಪರಿಷೆ, ಧಾನ್ಯದ ರಾಶಿ ಹೆಚ್ಚು ಗಮನ ಸೆಳೆಯಿತು.

ವಾರಾಂತ್ಯದಲ್ಲಿ ನಡೆದ ಸುಗ್ಗಿಯ ಸೊಬಗನ್ನು ಸಾರಿದ ಸುಗ್ಗಿ ಹುಗ್ಗಿ ಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಸುಗ್ಗಿ ಹುಗ್ಗಿಯಲ್ಲಿ ಪಾಲ್ಗೊಂಡು, ಟಲಕ್ಕಿ ಡಿಪ್ ಮೂಲಕ ಆಯ್ಕೆಯಾದ ವರಿಗೂ ಸಹ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಸಂಗೀತ ರಸಸಂಜೆ, ಸೋನು ವೇಣುಗೋಪಾಲ್ ಅವರ ವಿಶೇಷ ಹಾಸ್ಯ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿತ್ತು. ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಹಲವು ಶಾಲೆಗಳ ಅಸಂಖ್ಯಾತ ವಿದ್ಯಾರ್ಥಿಗಳು ನೃತ್ಯ, ಗಾಯನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಅನಾವರಣ ಮಾಡಿದರು.

ಸುಗ್ಗಿಯ ವಿಶೇಷತೆಯಾಗಿ ಈ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡ ನಾಗರೀಕರಿಗೆ ಪೊಂಗಲ್, ಬೇಯಿಸಿದ ಅವರೇಕಾಯಿ, ಗೆಣಸು, ಎಳ್ಳುಬೆಲ್ಲ, ಕಬ್ಬು ವಿತರಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಕುರಿತು ಸಚಿವ ಕೃಷ್ಣಬೈರೇಗೌಡ ಮಾತನಾಡಿ ‘ನಗರೀಕರಣ ಪ್ರಭಾವದಿಂದಾಗಿ ನಾವು ನಮ್ಮ ಸಂಸ್ಕೃತಿ, ನಮ್ಮ ಆಚರಣೆಗಳನ್ನು ಮರೆಯುತ್ತಿದ್ದೇವೆ. ಕೃಷಿ ಭಾರತೀಯರ ಮೂಲವೃತ್ತಿ, ಸಂಕ್ರಾಂತಿಯ ವೇಳೆಯಲ್ಲಿ ನಮ್ಮ ಕೃಷಿಕರು ತಾವು ಬೆಳೆದ ಧಾನ್ಯ ಮತ್ತು ಇನ್ನಿತರ ಬೆಳೆಗಳನ್ನು ಹಸನು ಮಾಡಿ ರಾಶಿಹಾಕಿ, ಕೃಷಿಯಲ್ಲಿ ತಮಗೆ ನೆರವಾದವರಿಗೆ ದಾನ ನೀಡುವುದು ಅನಾದಿ ಕಾಲದಿಂದಲೂ ನಡೆದು ಬಂದಿರುವ ಸತ್ಸಂಪ್ರದಾಯ, ಸುಗ್ಗಿಯ ಸವಿಯ ಈ ಸಂಕ್ರಾಂತಿಯನ್ನು ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಇಂತಹ ಅಪ್ಪಟ ಗ್ರಾಮೀಣ ಬದುಕಿನ ಚಿತ್ರಣವನ್ನು ನಗರದ ಜನತೆಗೆ ಪರಿಚಯಿಸುವುದು ‘ಸುಗ್ಗಿ ಹುಗ್ಗಿ’ ಕಾರ್ಯಕ್ರಮದ ಧ್ಯೇಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಮೀನಾಕ್ಷಿ ಕೃಷ್ಣಬೈರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶ್ರೀನಿವಾಸಯ್ಯ, ಎನ್ ಕೆ ಮಹೇಶ್ ಕುಮಾರ್, ಜಯಗೋಪಾಲ್, ಮಾಜಿ ಜಿ.ಪಂ.ಅಧ್ಯಕ್ಷ ಜಕ್ಕೂರು ರವಿಕುಮಾರ್, ಮಾಜಿ ಬಿಬಿಎಂಪಿ ಸದಸ್ಯ ಪಾರ್ಥಿಬರಾಜನ್, ಕಾಂಗ್ರೆಸ್ ಮುಖಂಡರಾದ ಆರ್.ಎಂ.ಶ್ರೀನಿವಾಸ್, ಸಂಪಿಗೆಹಳ್ಳಿ ಶಿವಕುಮಾರ್, ಪಳನಿ ವೆಂಕಟೇಶ್, ಗೌರೀಶ್, ಸಂತೋಷ್ ರಾಜನ್, ದಿಲೀಪ್(ತಿಂಡ್ಲು), ಜಾಲ ಹೋಬಳಿಯ ಕಾಂಗ್ರೆಸ್ ಮುಖಂಡರಾದ ಜೈಕುಮಾರ್, ಮಧುಗೌಡ, ಮಾರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಪಿ.ರಾಹುಲ್, ಶೆಟ್ಟಿಗೆರೆ ಚೇತನ್ ಕುಮಾರ್, ಚನ್ನಹಳ್ಳಿ ಶಿವಕುಮಾರ್, ಪ್ರದೀಪ್(ಮುತ್ತು), ಮುರಳಿ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *