
ಸಂಕ್ರಾಂತಿಯ ಸುಗ್ಗಿ
ಹಬ್ಬ ಎಂದರೆ ಮನುಷ್ಯನಿಗೆ ಸಂತೋಷ, ನೆಮ್ಮದಿ, ಉಲ್ಲಾಸ, ಸಡಗರವನ್ನು ಸಂಪೂರ್ಣವಾಗಿ ನೀಡುವುದರ ಜೊತೆಗೆ ಎಲ್ಲರನ್ನೂ ಸಾಮೂಹಿಕವಾಗಿ ಒಂದು ಗೂಡಿಸುವ ಒಂದು ಪ್ರಕ್ರಿಯೆ. ಆದ್ದರಿಂದ ಹಬ್ಬಗಳಿಗೆ ವಿಶೇಷ ಹಾಗೂ ಉನ್ನತ ಸ್ಥಾನವಿದೆ. ಒತ್ತಡದ ಜೀವನಕ್ಕೆ ವಿದಾಯ ಹೇಳಿ, ನಗು ಎಂಬ ಎರಡು ಅಕ್ಷರವನ್ನೂ ಕೈಹಿಡಿದು ಬದುಕನ್ನು ಸಾಗಿಸಬೇಕು ಎಂದು ನಮಗೆ ನೀತಿಯನ್ನು, ಧಾರ್ಮಿಕ ಹಿನ್ನೆಲೆಗಳನ್ನು ವಿಶೇಷಗಳನ್ನು, ಶ್ರೇಷ್ಠತೆಯನ್ನು ಅದರ ಪವಿತ್ರತೆಯನ್ನು ಮುಂಬರುವ ಪೀಳಿಗೆಗೆ ಕುತೂಹಲವನ್ನು ರೂಪಿಸುವ ಜೊತೆ ಜೊತೆಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ. ಇದರ ಅಂಗವಾಗಿ ಹಿರಿಯರು… ಮಕ್ಕಳಿಗೆ ಹಬ್ಬದ ಪ್ರಾಮುಖ್ಯತೆಯ ಅರಿವು ಮೂಡಿಸಬೇಕು, ನಮ್ಮ ಸಂಸ್ಕೃತಿಯನ್ನು ಉತ್ತುಂಗಕ್ಕೆ ಕರೆದೊಯ್ಯವ ನಿಟ್ಟಿನಲ್ಲಿ ಕೈಜೋಡಿಸಬೇಕು.
ಹಾಗಾದರೆ, ಇಂದು ನಾವು ಸಂಕ್ರಾಂತಿ ಹಬ್ಬದ ಬಗ್ಗೆ ಕೆಲವು ಮಾಹಿತಿ,ಮಹತ್ವ ಹಾಗೂ ತತ್ವವನ್ನು ತಿಳಿಯೋಣ….
ಬಂದೇ ಬಂದಿತು ಸಂಕ್ರಾಂತಿ ಹಬ್ಬ….ವರ್ಷದ ಮೊದಲ ಸುಗ್ಗಿ ಹಬ್ಬ.
ಸಂಕ್ರಾಂತಿ ಹಬ್ಬವು ನಮ್ಮ ದೇಶದಲ್ಲಿ ಆಚರಿಸುವ ಅತಿ ದೊಡ್ಡ ಹಬ್ಬ ಎಂದರೆ ತಪ್ಪಾಗಲಾರದು. ಅದರಲ್ಲೂ, ದಕ್ಷಿಣ ಭಾರತದಲ್ಲಿರುವ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಅತಿ ವಿಜೃಂಭಣೆಯಿಂದ, ಸಡಗರ, ಸಂಭ್ರಮವನ್ನೇ ಸೃಷ್ಟಿಸುವಂತೆ ಹಬ್ಬ ಎಂಬ ವಾಡಿಕೆ ಇದೆ . ಈ ಹಬ್ಬದ ಕೇಂದ್ರ ಬಿಂದು ಎಂದರೆ ಸೂರ್ಯದೇವನು. ಇವನು ಈ ಸೃಷ್ಟಿಯಲ್ಲಿ ಕಣ್ಣಿಗೆ ಕಾಣೋ ಭಗವಂತ ಎಂದೇ ಪರಿಗಣಿಸಿ ಸೂರ್ಯ ದೇವನನ್ನು ಪ್ರಾರ್ಥಿಸುತ್ತಾರೆ ಹಾಗೂ ಪೂಜಿಸುತ್ತಾರೆ.
ಕರ್ನಾಟಕದಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಈ ಹಬ್ಬವನ್ನು ಸಂಕ್ರಾಂತಿ ಎಂದು ಹಾಗೂ ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯುತ್ತಾರೆ. ಪೈರು ಕುಯ್ಯುವ ಸಂದರ್ಭದಲ್ಲಿ ಆಚರಿಸುವ ಹಬ್ಬವೇ ಈ ಸಂಕ್ರಾಂತಿ ಹಬ್ಬ.
ಈ ನಮ್ಮ ಪುಣ್ಯಭೂಮಿ ಭಾರತದಲ್ಲಿ ಮಾತ್ರವಲ್ಲ ದೇಶ, ವಿದೇಶಗಳಲ್ಲಿಯೂ ಸಹ ಇದರ ಸೊಗಡನ್ನು ಕಾಣಬಹುದು.
ಸಂಕ್ರಾಂತಿ ಹಬ್ಬವು ಮೂರು ದಿನದ ಹಬ್ಬ. ಮೊದಲನೆಯ ದಿನವನ್ನು ಭೋಗಿ ಹಬ್ಬ, ಎರಡನೆಯ ದಿನವನ್ನು ಸೂರ್ಯನ ಹಬ್ಬ ಅಥವಾ ಸಂಕ್ರಾಂತಿ ಮತ್ತು ಮೂರನೇಯ ದಿನವನ್ನು ಮಾಟು ಪೊಂಗಲ್ ಎಂದು ಕರೆಯುತ್ತಾರೆ.
ಭೋಗಿ ಹಬ್ಬವನ್ನು….. ಭೋಗಿ ಉತ್ಸವ ಎಂಬ ಹೆಸರಿದೆ. ಹಳೆಯದನ್ನು ತ್ಯಜಿಸಿ, ಹೊಸದನ್ನು ಸ್ವಾಗತಿಸಿ, ಸುಖ ಸಮೃದ್ಧಿ ನೀಡು ಎಂದು ಕೋರಿಕೊಳ್ಳುವ ಪ್ರತೀತಿಯನ್ನು ಹೊತ್ತಿದೆ ಈ ಭೋಗಿ ಹಬ್ಬ.
ಈ ದಿನದಂದು ವರುಣದೇವನಾದ ಇಂದ್ರ ನನ್ನು ಪೂಜಿಸುವ ದಿನ. ಮುಂಬರುವ ಋತುಗಳಲ್ಲಿ ಮಳೆಯು ಸಮೃದ್ಧಿಯಾಗಿ, ಸುಗ್ಗಿಯಿಂದ ಆಶೀರ್ವದಿಸಲೆಂದು ಪೂಜಿಸುತ್ತಾರೆ. ಅದರಿಂದ ಇದನ್ನು ಇಂದ್ರನ್ ಎಂದು ಕರೆಯುವ ವಾಡಿಕೆ ಕೂಡ ಇದೆ.
ಈ ದಿನದಂದು ಮನೆಯಲ್ಲಿರುವ ಹಳೆಯ ಉಪಯೋಗಕ್ಕೆ ಬಾರದ ವಸ್ತುಗಳನ್ನು, ಸಗಣಿಯನ್ನು ಬೆರೆಸಿ, ಮರದ ಚಕ್ಕೆಗಳನ್ನು ಒಟ್ಟುಗೂಡಿಸಿ ಬೆಂಕಿಯ ಸ್ಪರ್ಶ ನೀಡುತ್ತಾರೆ. ಈ ಪದ್ಧತಿಯನ್ನು ಭೋಗಿ ಮಂತಲು ಎಂದು ಕರೆಯುವುದನ್ನು ಕಾಣಬಹುದು.
ಭೋಗಿ, ನಮ್ಮ ಭವಿಷ್ಯಕಾಲ ಹಾಗು ವರ್ತಮಾನ ಕಾಲಗಳಲ್ಲಿ… ಹೊಸ ಭರವಸೆ, ಆಕಾಂಕ್ಷೆಗಳನ್ನು ಹೊತ್ತು ತರಲಿ…. ಎಲ್ಲರ ಭವಿಷ್ಯ ಸೂರ್ಯನಂತೆ ಪ್ರಜ್ವಲಿಸಲಿಯೆಂದು ಪ್ರಾರ್ಥಿಸುವ ಸುದಿನ.
ತಮಿಳುನಾಡಿನಲ್ಲಿ ಭೋಗಿ ಹಬ್ಬವನ್ನು ಮಾರ್ಗಳ್ಳಿ (ಧನುರ್ಮಾಸ) ತಿಂಗಳಿನ ಕೊನೆಯ ದಿನ ಎಂದು ಪರಿಗಣಿಸಲಾಗಿದೆ…
ಭೂದೇವಿಗೆ ಸಮೃದ್ಧವಾದ ಮಳೆಯನ್ನು ಆಶೀರ್ವದಿಸು ಎಂದು ರೈತರು ಪ್ರಾರ್ಥಿಸುತ್ತಾನೆ ಹಾಗೆ ತಮ್ಮ ಫಲವತ್ತಾದ ಬೆಳೆಗಳನ್ನು ಭಗವಂತನಿಗೆ ಅರ್ಪಿಸುತ್ತಾ ಪ್ರಾರ್ಥನೆ ಸಲ್ಲಿಸುತ್ತಾರೆ.
ದಕ್ಷಿಣಾಯನ ಹಾಗೂ ಧನುರ್ಮಾಸದ ಕೊನೆಯ ದಿನ ಹಾಗೆ ಉತ್ತರಾಯಣವನ್ನು ಸ್ವಾಗತಿಸುವ ಸುದಿನ.
ಮನದಲ್ಲಿರುವ ಕೆಟ್ಟ ಬುದ್ಧಿ, ದುರಾಲೋಚನೆಗೆ ವಿದಾಯ ಹೇಳುತ್ತಾ, ಸದ್ಗುಣ ಜೀವನವನ್ನು ಪ್ರತಿನಿಧಿಸುವಂತೆ ಕೋರಿಕೊಳ್ಳುವ ಅಮೃತಘಳಿಗೆ.
ಎರಡನೇ ದಿನವು ಸೂರ್ಯ ಹಬ್ಬ….ಇದಕ್ಕೆ ಪೂರಕವಾಗಿ ಹೇಳುವುದಾದರೆ ಸೂರ್ಯದೇವನು ಧನುರಾಶಿಯಿಂದ ಮಕರ ರಾಶಿಗೆ ತನ್ನ ಪಥನವನ್ನು ಬದಲಾಯಿಸುತ್ತಾನೆ, ಆದ್ದರಿಂದ ಮಕರ ಸಂಕ್ರಾಂತಿ ಎಂಬ ಹೆಸರು. ಆ ರವಿಯ ತೇಜಸ್ಸು, ಓಜಸ್ಸು, ಹೊಳಪು ಎಲ್ಲವನ್ನು ಕರುಣಿಸಿಯೆಂದು ಮನದಲ್ಲಿ ಭಕ್ತಿ ಭಾವದಿಂದ ಪ್ರಾರ್ಥಿಸುತ್ತಾರೆ. ಸಾಂಪ್ರದಾಯಿಕವಾಗಿ ಈ ದಿನದಂದು ಹೊಸದಾಗಿ ಬೆಳೆದ ದಾನ್ಯದಿಂದ ಪೊಂಗಲ್ ಮಾಡುತ್ತಾರೆ. ಅದರಲ್ಲೂ ಸಿಹಿ ಪೊಂಗಲ್, ಖಾರ ಪೊಂಗಲ್ ಮಾಡುತ್ತಾರೆ, ಇದು ತುಂಬಾ ವಿಶೇಷವಾದದ್ದು.
ಮಕರ ಸಂಕ್ರಾಂತಿಯ ನಂತರ ಹಗಲು ಹೆಚ್ಚಾಗಿರುತ್ತದೆ ಕಾರಣ,ಮನುಷ್ಯನಿಗೆ 365 ದಿನಗಳಿವೆ ವರ್ಷಕ್ಕೆ,ಹಾಗೆಯೇ, ದೇವತೆಗಳಿಗೆ ಆರು ತಿಂಗಳ ರಾತ್ರಿ ಹಾಗೂ ಆರು ತಿಂಗಳು ಹಗಲು ಸೇರಿದರೆ ಒಂದು ದಿನ ಎಂದು ಕರೆಯುತ್ತಾರೆ. ಅಂದರೆ ಉತ್ತರಾಯಣ ಹಗಲು ಹಾಗೂ ದಕ್ಷಿಣಾಯನ ಇರುಳುಯೆಂಬ ಅರ್ಥ ಸೂಚಿಸುತ್ತದೆ.
ಹಿಂದೂ ಧರ್ಮದ ಪದ್ಧತಿಯ ಪ್ರಕಾರ ಈ ಹಬ್ಬದಂದು ಎಳ್ಳು, ಬೆಲ್ಲ, ಹುರಿಗಡಲೆ, ಕೊಬ್ಬರಿ, ಕಡಲೆಕಾಯಿ ಬೀಜ ಎಲ್ಲವನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಕಬ್ಬು, ಸಕ್ಕರೆ ಹಚ್ಚನ್ನು ಬಂದು ಮಿತ್ರರಿಗೆ ಬೀರುತ್ತಾರೆ. ಕಾರಣ, ಎಲ್ಲರ ಜೀವನ ಸಿಹಿಯಾಗಿರಲಿ, ಸಂಬಂಧ ಗಟ್ಟಿಯಾಗಿರಲಿ ಎಂದು ಸಾರುವ ಹಬ್ಬ.
ಎಳ್ಳು, ಬೆಲ್ಲ ತಿಂದು ಒಳ್ಳೆಯದನ್ನು ಮಾತಾಡಿ ಎಂಬ ನುಡಿಗೆ ಅನುಗುಣವಾದ ಹಬ್ಬ ಎಂದರೆ ಸಂಕ್ರಾಂತಿ.
ಈ ಎಳ್ಳು, ಬೆಲ್ಲವನ್ನು ಹಂಚುವುದೇಕ್ಕೆ ಕಾರಣ ಏನೆಂದರೆ, ನಾವು ದೈನಂದಿನ ದಿನದಲ್ಲಿ ಯಾರು ಯಾರಿಗೆ ಸಹ ಎಳ್ಳನ್ನು ಕೊಡುವುದಾಗಲಿ ಅಥವಾ ಸ್ವೀಕರಿಸುವುದಾಗಲಿ ಇಲ್ಲ. ಆದರೆ ಈ ದಿನ ಮಾತ್ರ ಎಲ್ಲರೂ ಎಲ್ಲರಿಗೂ ಎಳ್ಳು, ಬೆಲ್ಲದ ಮಿಶ್ರಣವನ್ನು ಕೊಟ್ಟು ಬಾಂಧವ್ಯದ ಋಣ ಭಾರವನ್ನು ಕಡಿಮೆ ಮಾಡಿಕೊಳ್ಳುವಂತ ಸಮಯ. ಹಾಗೇ, ಬೆಲ್ಲದಂತೆ ನಿರಂತರವಾಗಿ ಸವಿ ಜೀವನಕ್ಕೆ ನಾಂದಿಯ ಸಂಕೇತ. ಇದರ ಪ್ರಕಾರ ಎಳ್ಳನ್ನು ಬೀರುವುದನ್ನು ಕಾಣಬಹುದು. ಅದರಲ್ಲೂ ಹೆಣ್ಣು ಮಕ್ಕಳು…. ಹೊಸ ಉಡುಪು ತೊಟ್ಟು, ತಮ್ಮ ಬಂಧು ಮಿತ್ರರಿಗೆ ಎಳ್ಳನ್ನು ಬೀರುತ್ತಾರೆ.. ಅಂದು ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಬಾಗಿನಗಳನ್ನು ಕೊಟ್ಟು ನಮಸ್ಕರಿಸುತ್ತಾರೆ.
ಇನ್ನೊಂದು ಅತಿ ವಿಶೇಷಯೆಂದರೆ ಹಳ್ಳಿಗಳಲ್ಲಿ ಆಕಳುಗಳು ಅಂದರೆ ಹಸುಗಳು, ಕರುಗಳು ಹಾಗೂ ಎತ್ತುಗಳನ್ನು ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕರಿಸಿ, ಕೊಂಬುಗಳಿಗೆ ಬಣ್ಣಗಳನ್ನು ಹಚ್ಚಿ ಸಿಂಗರಿಸುತ್ತಾರೆ. ಸೂರ್ಯಸ್ತಮದ ವೇಳೆಗೆ ಅಂದ್ರೆ ಮುಸ್ಸಂಜೆಯಲ್ಲಿ ಕಿಚ್ಚು ಹಾಯಿಸುವ ವಾಡಿಕೆನ್ನು ಹಳ್ಳಿಗಳಲ್ಲಿ ಈಗಲೂ ನೋಡಬಹುದು, ಅ ಸಂಭ್ರಮ ನಿಜಕ್ಕೂ ಕುತೂಹಲಕಾರಿ…. ಈ ಹಬ್ಬ ಕೇವಲ ಮಾನವನಿಗಲ್ಲದೆ ಜಾನುವಾರುಗಳಿಗೂ ಸಹ ವಿಶೇಷತೆಯ ಜೋತೆ ಆದ್ಯತೆ ನೀಡುವ ಹಬ್ಬ. ಇದರ ಜೊತೆಗೆ ಮತ್ತೊಂದು ರಮಣೀಯವಾದ ಕಣ್ಣು ಸೆಳೆಯುವ ನೋಟಯೆಂದರೆ…. ಆಗಸಕ್ಕೆ ಗಾಳಿಪಟವನ್ನು ಆರಿಸುವ ಸಂಭ್ರಮ. ಈ ಜೀವನವೆಂಬ ಗಾಳಿಪಟದ ಸೂತ್ರಧಾರ ಪರಮಾತ್ಮನು….ಇದರ ಅರ್ಥ ನಮ್ಮ ಜೀವನವು ಪತಂಗದಂತೆ ಮೇಲೆ ಹಾರಬೇಕು.. ಸಾಧನೆಯ ಹಾದಿಯಲ್ಲಿ ವಿಶಾಲವಾದ ಆಗಸವನ್ನು ಮುಟ್ಟುವಂತ ಜೀವನ ಸಾಗಿಸಬೇಕು ಮತ್ತೊಬ್ಬರಿಗೆ ಮಾದರಿಯಾಗ ಬೇಕು.
ಈ ಮಕರ ಸಂಕ್ರಮಣದಂದು ಪಿತೃಗಳಿಗೆ ತರ್ಪಣ ನೀಡುತ್ತಾರೆ. ಈ ಉತ್ತರಾಯಣದಲ್ಲಿ ಮರಣ ಹೊಂದಿದರೆ ಪುನರ್ಜನ್ಮವೇ ಇಲ್ಲ ಎಂಬ ನಂಬಿಕೆ ಹಾಗು ವಾಡಿಕೆ ಇದೆ. ಇದಕ್ಕೆ ,ಉದಾಹರಣೆ ಎಂದರೆ ನಮ್ಮ ಭೀಷ್ಮಾಚಾರ್ಯರು ಅವರಿಗೆ ಇರುವ ವರವೇನೆಂದರೆ ಇಚ್ಛಾ ಮರಣ ಆದರೆ ಅವರು ತಮ್ಮ ಕೊನೆ ಉಸಿರಿನಲ್ಲಿ ಶರಪಂಜರದ ಮೇಲೆ ಮಲಗಿದ್ದು… ಉತ್ತರಾಯಣ ಬರುವವರೆಗೂ ಉಸಿರನ್ನು ಗಟ್ಟಿಯಾಗಿ ಹಿಡಿದುಕೊಂಡು ಆ ಕ್ಷಣಕ್ಕೆ ಕಾಯುತ್ತಿದ್ದರು. ಈ ಉತ್ತರಾಯಣ ಕಾಲದಲ್ಲಿ ಇಹಲೋಕವನ್ನು ಸೇರಿದರು ಎಂದು ನಮ್ಮ ಪುರಾಣಗಳಿಂದ ತಿಳಿಯಬಹುದು.
ಒಂದು ಸವಿ ವಿಚಾರ ಎಂದರೆ ನಮ್ಮ ಬೆಂಗಳೂರಿನಲ್ಲಿರುವ ಗವಿ ಗಂಗಾಧೀಶ್ವರ ಸ್ವಾಮಿ ದೇವಾಲಯದಲ್ಲಿ ಜನಸಾಗರವೇ ಹರಿದು ಬರುತ್ತದೆ. ಆ ಸ್ವಾಮಿಯ ಮೇಲೆ ಅಂದರೆ ಶಿವಲಿಂಗದ ಮೇಲೆ ಸೂರ್ಯನ ಕಿರಣ ಸಂಜೆ ಗೋಧೂಳಿ ಲಗ್ನದಲ್ಲಿ ಸ್ಪರ್ಶಿಸುತ್ತದೆ.. ಅದನ್ನು ಕಂಡು ಎಲ್ಲರೂ ಭಕ್ತಿಯಿಂದ ಪುನೀತರಾಗುತ್ತಾರೆ….
18 ಪಡಿ (ಮೆಟ್ಟಲುಗಳ) ಒಡೆಯನಾದ ಸ್ವಾಮಿ ಅಯ್ಯಪ್ಪ ನೆಲೆಸಿರುವ ಬೆಟ್ಟ ಶಬರಿಮಲೈ, ಎಲ್ಲರೂ ಭಗವಂತನಿಗೆ ಮನಸಬಿಷ್ಟವನ್ನು ಕರುಣಿಸುವ ಪರಮಾತ್ಮನೆಂದು ಪೂಜಿಸುತ್ತಾರೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯನ್ನು ಹೊತ್ತು ಬರುವ ಭಕ್ತರು…. ಮಕರ ಜ್ಯೋತಿಯನ್ನು ನೋಡುವ ಸೌಭಾಗ್ಯ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತಾರೆ ಈ ಮಕರ ಜ್ಯೋತಿಯನ್ನು ಶಬರಿಮಲೈನಲ್ಲಿ ವೀಕ್ಷಿಸಬಹುದು.
ಮೂರನೆಯ ದಿನದಂದು ಮಟು ಪೊಂಗಲ್ ಎಂದು ಕರೆಯುತ್ತಾರೆ ಈ ದಿನದ ವಿಶೇಷ ಎಂದರೆ ದನ, ಕರುಗಳಿಗೆ ಬಣ್ಣಗಳಿಂದ ಅಲಂಕರಿಸಿ, ಗಂಟೆ ಕಟ್ಟಿ, ಪೂಜಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಅತಿ ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದು ಮುಖ್ಯವಾಗಿ ತಮಿಳುನಾಡಿನಲ್ಲಿ ಆಚರಿಸುತ್ತಾರೆ. ನೇಗಿಲನ್ನು ಹಿಡಿದ ರೈತನು….ಹೊಲದಲ್ಲಿ ದುಡಿಯುತ್ತಿರುವಾಗ, ಅವನಿಗೆ ಬೆನ್ನೆಲುಬಾಗಿ ನಿಂತಿರುವುದು ಜಾನುವಾರುಗಳು. ಅವುಗಳೆ ರೈತನ ಆಪ್ತಮಿತ್ರ ಎಂದರೆ ತಪ್ಪಿಲ್ಲ. ಈ ದಿನ ರೈತನೇ ಗೆಳೆಯನಾದ ಜಾನುವಾರುಗಳಿಗೆ ಒಳ್ಳೆಯದನ್ನು ಬಯಸುವ ಹಾಗೂ ಪ್ರಾರ್ಥಿಸುವ ದಿನ.
ಈ ರೀತಿ ಮೂರು ದಿನದ ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಮನ ತುಂಬಿ,ಹುರಿದುಂಬಿ ಆಚರಿಸುತ್ತಾರೆ.
ಸಂಕ್ರಾಂತಿ ಹಬ್ಬವು ಎಲ್ಲ ಎಲ್ಲರಿಗೂ ಸಂತೋಷ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸೋಣ… ಎಲ್ಲರ ಬದುಕಿನಲ್ಲಿ ಇಷ್ಟಾರ್ಥವನ್ನು ಕರುಣಿಸಲಿ, ನೆಮ್ಮದಿಯ ಹಾದಿಯಲ್ಲಿ ಯಾವ ಅಡೆತಡೆಯು ಬರದಿರಲಿ.
ಭಾರ್ಗವಿ ಪಿ
ಬೆಂಗಳೂರು