ಗೋವುಗಳ ಮೇಲೆ ಅಮಾನುಷ ಕ್ರೌರ್ಯ :
ಬಿಜೆಪಿ ರಾಜ್ಯ ರೈತ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ :

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಗೋವುಗಳ ಮೇಲೆ ನಡೆಯುತ್ತಿ ರುವ ಅಮಾನುಷ ಕ್ರೌರ್ಯವನ್ನು ಖಂಡಿಸಿ ಬಿಜೆಪಿ ರಾಜ್ಯ ರೈತ ಮೋರ್ಚಾದ ಸಹಸ್ರಾರು ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡವಳ್ಳಿ ಇವರ ಮಾರ್ಗದರ್ಶನದಲ್ಲಿ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಅವರ ನೇತೃತ್ವದಲ್ಲಿ ನಗರದ ಸ್ವಾತಂತ್ಯ್ರ ಉದ್ಯಾನದ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ವೇಳೆ ರಾಜ್ಯ ಸರ್ಕಾರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಗೋವಿನ ಕೆಚ್ಚಲು ಕೊಯ್ದು ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ರೈತ ಮೋರ್ಚಾ‌ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಮಾತನಾಡಿ ‘ಬೆಳಿಗ್ಗೆ ಚಾಮರಾಜಪೇಟೆಯಲ್ಲಿ ಇರುವ ಹಸುಗಳ ಸಂತ್ರಸ್ತ ರೈತನನ್ನು ಭೇಟಿ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಂತ್ರಸ್ತ ರೈತನಿಗೆ ಆತ್ಮಸ್ಥೈರ್ಯದ ಅಭಯ ನೀಡಿ ಬಂದಿದ್ದೇನೆ.

ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಗೋವುಗಳಿಗೆ ವಿಶೇಷ ಮತ್ತು ಪೂಜ್ಯ ಸ್ಥಾನವಿದೆ. ಸಕಲ ರೀತಿಯ ಶುದ್ಧೀಕರಣಕ್ಕೆ ಗೋಮೂತ್ರ ಪ್ರೋಕ್ಷಣೆ ಮಾಡುವುದು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಗೋವುಗಳು ನಿರುಪ್ರವಿ ಜೀವಿಗಳು, ಗೋವಿನ ಹಾಲು ಅಮೃತಕ್ಕೆ ಸಮಾನವಾದುದು. ಇಂತಹ ಗೋವುಗಳ ಮೇಲೆ ಇತ್ತೀಚೆಗೆ ಅಮಾನವೀಯ ಕೌರ್ಯ ಮೆರೆಯಲಾಗಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗೋಮುಖ ವ್ಯಾಘ್ರ ನೀತೀಯೇ ಕಾರಣ. ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ತೀರಾ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ಗೋವುಗಳ ನೋವಿನ ಶಾಪ ಇವರಿಗೆ ತಟ್ಟದೇ ಇರದು. ರಾಜ್ಯದ ಜನತೆ ಸರ್ಕಾರದ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಕ್ಕ ಪಾಠ ಕಲಿಸಲಿದ್ದಾರೆ.

ಇವರ ಅಶುಧ್ಧ ಮನಸ್ಸು, ದೇಹವನ್ನು ಶುದ್ದೀಕರಣ ಮಾಡಲು ಅವರ ಭಾವಚಿತ್ರಗಳಿಗೆ ಇಂದು ಗೋಮೂತ್ರ ಪ್ರೋಕ್ಷಣೆ ಮಾಡಿದ್ದೇವೆ. ಸರ್ಕಾರದ ಗೋಮುಖ ವ್ಯಾಘ್ರ ನೀತಿ ಇದೇ ರೀತಿ ಮುಂದುವರಿದರೆ ಅವರ ಮನೆ, ನಮಸ್ಸು, ದೇಹಕ್ಕೆ ನೇರವಾಗಿ ಪ್ರೋಕ್ಷಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಖಜಾಂಚಿ ಹರೀಶ್, ಬೆಂಗಳೂರು ಉತ್ತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ.ಮೂರ್ತಿ, ಯಲಹಂಕ ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಬೆಂಗಳೂರು ಕೇಂದ್ರ ರೈತ ಮೋರ್ಚಾ ಅಧ್ಯಕ್ಷ ರುದ್ರಪ್ಪ, ಬೆಂಗಳೂರು ದಕ್ಷಿಣ ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಸೇರಿದಂತೆ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *