




ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯ ಸಂಕ್ರಾಂತಿ ಆಚರಣೆ :
ಯಲಹಂಕ : ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರ ಸಹಯೋಗದೊಂದಿಗೆ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮದ ಎಲ್ಲಾ ದೇವಾಲಯಗಳನ್ನು ತಳಿರು, ತೋರಣಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ಸಂಜೆ ನಡೆದ ಹಸು, ಕರು, ಎತ್ತುಗಳನ್ನು ಕಿಚ್ಚು ಹಾಯಿಸುವ ಕಾರ್ಯಕ್ರಮಕ್ಕೆ ಶಾಸಕ ಎಸ್ ಆರ್ ವಿಶ್ವನಾಥ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ‘ಅನಾದಿ ಕಾಲದಿಂದಲೂ ಸುಗ್ಗಿಯ ಉತ್ಸವದ ಹಬ್ಬವೆಂದೇ ಕರೆಯಲ್ಪಡುವ ಸಂಕ್ರಾಂತಿಯನ್ನು ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಗ್ರಾಮದ ಎಲ್ಲಾ ನಾಗರೀಕರು ಒಗ್ಗಟ್ಟಿನಿಂದ, ಸಾಂಘಿಕವಾಗಿ ಆಚರಿಸಲಾಗುತ್ತಿದ್ದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅಳಿವಿನಂಚಿಗೆ ಸರಿಯದಂತೆ ಕಾಪಾಡಿಕೊಂಡು ಬರಲಾಗುತ್ತಿದೆ. ಇದನ್ನು ಹಾಗೆಯೇ ಬೆಳೆಸಿಕೊಂಡು ಮುಂದಿನ ತಲೆಮಾರಿಗೆ ಉಳಿಸಿಕೊಡುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯದ್ದಾಗಿದೆ ಎಂದರು.
ಸಂಕ್ರಾಂತಿಯ ಕಿಚ್ಚು ಹಾಯಿಸುವ ಸಂಭ್ರಮದ ಕಾರ್ಯಕ್ರಮದ ನೇತೃತ್ವವನ್ನು ಸಿಂಗನಾಯಕನಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ, ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ಕೆ.ಬಾಬು, ಮಲ್ಲೇಶ್, ಬಿಜೆಪಿ ಮುಖಂಡರಾದ ಶಿವಾನಂದ್, ಮುನಿಕೃಷ್ಣ, ಬಿಜೆಪಿ ಯುವ ಮುಖಂಡ ಯೋಗೇಶ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರಿದ್ದರು.
ಮುಖ್ಯ ಬೀದಿಯಲ್ಲಿ ಅಲ್ಲಲ್ಲಿ ಹುಲ್ಲಿನ ಸಣ್ಣ ಗುಡ್ಡೆ ಹಾಕಿ, ಕಿಚ್ಚು ಹಚ್ಚಿ ಗ್ರಾಮದ ಹಸು, ಕರು, ಎತ್ತುಗಳನ್ನು ಹೂವು, ಬಣ್ಣದ ಟೇಪುಗಳಿಂದ ಸಂಗರಿಸಿ ಕಿಚ್ಚು ಹಾಯಿಸಿದ ದೃಶ್ಯ ಕಣ್ಮನ ಸೆಳೆಯಿತು. ತಮಟೆ ವಾದ್ಯದೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಹಸು, ಕರು, ಎತ್ತುಗಳನ್ನು ಕಿಚ್ಚು ಹಾಯಿಸುತ್ತಾ ಗ್ರಾಮದ ಕೆರೆಯ ಬಳಿಯಿರುವ ಕಾಟುಮರಾಯ ಸ್ವಾಮಿ ದೇವಾಲಯದವರೆಗೆ ಮೆರವಣಿಗೆಯಲ್ಲಿ ಕರೆತಂದು, ದೇವರಿಗೆ ಮತ್ತು ಹಸುಗಳಿಗೆ ಪೂಜೆ ನೆರವೇರಿಸಿದ ನಂತರ ಮನೆಗೆ ಮರಳಲಾಯಿತು.