








‘ವಿಶ್ವವಾಣಿ ಫೌಂಡೇಶನ್’ ವತಿಯಿಂದ ವಿವಿಧ ಸವಲತ್ತುಗಳ ವಿತರಣೆ :
ಯಲಹಂಕ : ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿ ಎಂಬ ಸದುದ್ದೇಶದೊಂದಿಗೆ ‘ವಿಶ್ವವಾಣಿ’ ಫೌಂಡೇಶನ್ ವತಿಯಿಂದ ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿಯ ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕರು, ‘ವಿಶ್ವವಾಣಿ’ ಫೌಂಡೇಶನ್ ನ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ್ ಅವರು ಹೊಲಿಗೆ ತರಬೇತಿ ಪಡೆದ 160 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳು, ಬ್ಯೂಟಿಷಿಯನ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ಮತ್ತು ಶಾಲೆಗಳಿಗೆ ಉಚಿತ ಸ್ಮಾರ್ಟ್ ಬೋರ್ಡ್ ಗಳು ಸೇರಿದಂತೆ ಹಲವು ಸವಲತ್ತು ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು ‘ವಿಶ್ವವಾಣಿ ಫೌಂಡೇಶನ್’ ಕಳೆದ ಹಲವು ವರ್ಷಗಳಿಂದ ಮಹಿಳೆಯರ ಶ್ರೇಯೋಭಿವೃದ್ಧಿಯ ದಿಸೆಯಲ್ಲಿ ಹಲವು ಕಾರ್ಯಕ್ರಮ ಗಳನ್ನು ರೂಪಿಸುವ ಮೂಲಕ ಮಹಿಳೆಯರಿಗೆ ನೆರವಾಗುವ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಫೆ. 6ಕ್ಕೆ ನನ್ನ ಸುಪುತ್ರಿ, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕಿ ಆಗಿರುವ ಅಪೂರ್ವ ಮತ್ತು ಹೆಬ್ಬಾಳ ಶಾಸಕರು, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರ ಸುಪುತ್ರ ಸಂಜಯ್ ಅವರ ಮದುವೆ ನಡೆಯಲಿದ್ದು, ಫೌಂಡೇಶನ್ ನ ನಿರ್ದೇಶಕಿ ಯಾಗಿರುವ ಅಪೂರ್ವ ಅವರು ಮದುವೆಯಲ್ಲಿ ಮಹಿಳೆಯರಿಗೆ ನೀಡುವ ಉಡುಗೊರೆಯನ್ನು ಅದಕ್ಕಿಂತ ಮುನ್ನವೇ ನೀಡಬೇಕೆಂಬ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಯಲಹಂಕ ಕ್ಷೇತ್ರದ ಮಹಿಳೆಯರಿಗೆ ಉಡುಗೊರೆಯ ರೂಪದಲ್ಲಿ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ, ಜೊತೆಗೆ ಈ ಕಾರ್ಯಕ್ರಮದ ಮೂಲಕ ಮದುವೆಗೆ ಕ್ಷೇತ್ರದ ಮಹಿಳೆಯರನ್ನು ಆಹ್ವಾನಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ, ಯಲಹಂಕ ಕ್ಷೇತ್ರದ ಮಾತೆಯರು ಅಪೂರ್ವ ಮತ್ತು ಸಂಜಯ್ ಅವರ ಮದುವೆಗೆ ಆಗಮಿಸಿ ಆಶೀರ್ವದಿಸಬೇಕೆಂದು ಮನವಿ ಮಾಡಿಕೊಂಡರು.
ಇದೇ ವೇಳೆ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್ ಅವರು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್.ನವೀನ್ ಅವರಿಗೆ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದಿಂದ 9.19 ಲಕ್ಷ ರು.ಗಳ ಸಹಕಾರ ಶಿಕ್ಷಣ ನಿಧಿಯ ಚೆಕ್ ಹಸ್ತಾಂತರ ಮಾಡಿದರು.
ಕಾರ್ಯಕ್ರಮದಲ್ಲಿ ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಅಲೋಕ್ ವಿಶ್ವನಾಥ್, ಪಲ್ಲವಿ ಅಲೋಕ್, ಅಪೂರ್ವ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಪುತ್ರ ಸಂಜಯ್, ಯಲಹಂಕ ಕ್ಷೇತ್ರದ ಹಲವು ಬಿಜೆಪಿ ಮುಖಂಡರು ಸೇರಿದಂತೆ ಸಿಂಗನಾಯಕನಹಳ್ಳಿ ಮತ್ತು ರಾಜಾನುಕುಂಟೆ ಗ್ರಾ.ಪಂ.ಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರಿದ್ದರು.