

ವಿಜೃಂಭಣೆಯಿಂದ ಸಂಪನ್ನಗೊಂಡ ಎನ್.ಪಿ.ಎಲ್.ಸೀಸನ್ 3 ಕ್ರಿಕೆಟ್ ಪಂದ್ಯಾವಳಿ :
ಟ್ರೋಫಿ ಮುಡಿಗೇರಿಸಿಕೊಂಡ ನವರತ್ನ ಕಿಂಗ್ ಫೈಟರ್ಸ್ :
ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ನವರತ್ನ ಅಗ್ರಹಾರದಲ್ಲಿ ಆಯೋಜಿಸಿದ್ದ ನವರತ್ನ ಪ್ರಿಮಿಯರ್ ಲೀಗ್ ಸೀಸನ್ 3 ಕ್ರಿಕೆಟ್ ಪಂದ್ಯಾವಳಿಯು ನರಸಿಂಹಯ್ಯ ಅವರ ಮಾಲೀಕತ್ವದ, ಪ್ರದೀಪ್(ಮುತ್ತು) ನಾಯಕತ್ವದ ನವರತ್ನ ಕಿಂಗ್ ಫೈಟರ್ಸ್ ತಂಡದ ಗೆಲುವಿನೊಂದಿಗೆ, ಟ್ರೋಫಿ,1 ಲಕ್ಷ ರು.ಗಳ ನಗದು ಬಹಮಾನ ಮತ್ತು ಟಗರು ಉಡುಗೊರೆ ಮುಡಿಗೇರಿಸಿ ಕೊಳ್ಳುವ ಮೂಲಕ ಭಾನುವಾರ ಸಂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಪಂದ್ಯಾವಳಿಯಲ್ಲಿ ನವರತ್ನ ಲಯನ್ಸ್ (ಸಿ.ಶ್ರೀನಿವಾಸ್), ನವರತ್ನ ಈಗಲ್ಸ್ (ಎ.ಸಿ.ಗೋವಿಂದರಾಜು), ನವರತ್ನ ಟೈಗರ್ಸ್ (ಎಂ.ಶ್ರೀನಿqವಾಸ್), ನವರತ್ನ ಕಿಂಗ್ ಫೈಟರ್ಸ್ (ನರಸಿಂಹಯ್ಯ), ನವರತ್ನ ಡೈಮಂಡ್ಸ್(ಎಸ್.ಪ್ರಕಾಶ್) ಮತ್ತು ನವರತ್ನ ಲೆಜೆಂಡ್ಸ್(ರಮೇಶ್) ಎಂಬ ಐಪಿಎಲ್ ಮಾದರಿಯ 6 ತಂಡಗಳು ಎರಡು ದಿನಗಳ ಕಾಲ ತೀವ್ರ ಸೆಣಸಾಟ ನಡೆಸಿದವು. ಭಾನುವಾರ ನಡೆದ ಅಂತಿಮ ಪಂದ್ಯಾವಳಿಯಲ್ಲಿ ಎ.ಸಿ. ಗೋವಿಂದರಾಜು ಮಾಲೀಕತ್ವದ ನವರತ್ನ ಈಗಲ್ಸ್ ತಂಡ ಮತ್ತು ನರಸಿಂಹಯ್ಯ ಮಾಲೀಕತ್ವದ ನವರತ್ನ ಕಿಂಗ್ ಫೈಟರ್ಸ್ ತಂಡಗಳ ನಡುವೆ ತೀವ್ರ ಹಣಾಹಣಿ ನಡೆದು, 30 ರನ್ ಗಳ ಅಂತರದಲ್ಲಿ ನವರತ್ನ ಕಿಂಗ್ ಫೈಟರ್ಸ್ ತಂಡ ಗೆಲುವು ಸಾಧಿಸಿತು.
ಗೆಲುವು ಸಾಧಿಸಿದ ನವರತ್ನ ಕಿಂಗ್ ಫೈಟರ್ಸ್ ತಂಡಕ್ಕೆ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ. ಮಹೇಶ್ ಕುಮಾರ್ ಟ್ರೋಫಿ, 1 ಲಕ್ಷ ರು.ನಗದು ಮತ್ತು ಟಗರು ಉಡುಗೊರೆ ನೀಡಿ ಗೌರವಿಸಿದರು.
ನಂತರ ಅವರು ಮಾತನಾಡಿ ‘ನವರತ್ನ ಪ್ರಿಮಿಯರ್ ಲೀಗ್'(ಎನ್.ಪಿ.ಎಲ್) ಕ್ರಿಕೆಟ್ ಪಂದ್ಯಾವಳಿ ಐಪಿಎಲ್ ಮಾದರಿಯಲ್ಲೇ ನಡೆಯುವ ರಾಜ್ಯದ ಪ್ರಥಮ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಇದು ಮೂರನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಗ್ರಾಮದ ಒಗ್ಗಟ್ಟು ಮತ್ತು ಯುವ ಜನತೆಗೆ ಕ್ರೀಡಾ ಪ್ರೋತ್ಸಾಹ ನೀಡುವ ಸಲುವಾಗಿ ಗ್ರಾಮಸ್ಥರೇ ಒಗ್ಗೂಡಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ರಾಜ್ಕಕ್ಕೇ ಇದು ಮಾದರಿಯಾಗಿದೆ. ಆರು ತಂಡಗಳ ಮಾಲೀಕರು ಪ್ರತಿ ತಂಡಕ್ಕೆ 15 ಆಟಗಾರರನ್ನು ಬಿಡ್ ಮೂಲಕ ಖರೀದಿಸಿ, ಪಂದ್ಯಾವಳಿಗೂ ಮುನ್ನ ನುರಿತ ಕ್ರಿಕೆಟ್ ತರಬೇತುದಾರರಿಂದ ಹಲವು ದಿನಗಳ ಕಠಿಣ ತರಬೇತಿ ನೀಡಿ, ತಂಡಗಳನ್ನು ಸಜ್ಜುಗೊಳಿಸುತ್ತಾರೆ. ನವರತ್ನ ಪ್ರಿಮಿಯರ್ ಲೀಗ್ ನಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರು ನವರತ್ನ ಅಗ್ರಹಾರ ಗ್ರಾಮದವರೇ ಆಗಿರುವುದು ವಿಶೇಷತೆಯಾಗಿದೆ. ಗ್ರಾಮದ ಯುವ ಜನತೆಗೆ ಕ್ರೀಡಾ ಪ್ರೋತ್ಸಾಹ ನೀಡುವುದು ನವರತ್ನ ಪ್ರಿಮಿಯರ್ ಲೀಗ್ ಆಯೋಜನೆಯ ಪ್ರಮುಖ ಧ್ಯೇಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಂಡಗಳ ಮಾಲೀಕರಾದ ಸಿ.ಶ್ರೀನಿವಾಸ್, ಎ.ಸಿ.ಗೋವಿಂದರಾಜು, ಎಂ.ಶ್ರೀನಿವಾಸ್, ನರಸಿಂಹಯ್ಯ, ಎಸ್.ಪ್ರಕಾಶ್, ರಮೇಶ್, ತರಬೇತುದಾರರಾದ ಗೋವಿಂದಸ್ವಾಮಿ, ರಾಮಾಂಜಿನಪ್ಪ, ಜನಾರ್ದನ್, ಎಸ್ ಎಲ್ ಆರ್ ಲಕ್ಷ್ಮೀನಾರಾಯಣ, ಎ.ಸಿ.ಪಿಳ್ಳರಾಜು, ವೀರೇಶ್, ಚಂದ್ರಶೇಖರ್ ಎನ್., ತಂಡಗಳ ಕ್ಯಾಪ್ಪನ್ ಗಳಾದ ಸುಬ್ರಮಣಿ, ಚೇತನ್ (ಎಂ.ಎಸ್.ಸಿ.), ಆನಂದ್ (ಎಸಿಎಲ್), ಕೇಶವ ಕೆ.ಆರ್., ಶರತ್ ಜಿ.ವಿ., ಪ್ರದೀಪ್(ಮುತ್ತು), ಗ್ರಾಮದ ಮುಖಂಡರಾದ ಎ.ಎನ್. ನಾರಾಯಣಸ್ವಾಮಿ ವೆಂಕಟೇಶ್ ಪಿ., ನಾರಾಯಣಸ್ವಾಮಿ(ಅಪ್ಪಿ), ರಾಜೇಶ್(ಎಸಿಎಲ್), ಚನ್ನಕೇಶವ, ಆಂಜಿನಪ್ಪ(ಅಪ್ಪಿ), ನಂಜಪ್ಪ, ಮುನಿಕೃಷ್ಣ ಕೆ., ರಾಜೇಶ್ ಜಿ.ವಿ., ಮೋಹನ್ ಕುಮಾರ್, ಸತೀಶ್ ಎಲ್., ರಾಜು ಎಂ.ಎಸ್.ಪಿ., ಸಂತೋಷ್ ಎ.ಪಿ.,ಗಜೇಂದ್ರ, ಎ.ಎಚ್.ಮಹೇಶ್, ಯುವ ಮುಖಂಡರಾದ ಪ್ರವೀಣ್ ಎಂ., ವಿನಯ್ ಕುಮಾರ್ ವಿ., ಸಂತೋಷ್, ಲಕ್ಷ್ಮಣ್, ಮುನಿಕೃಷ್ಣ ಎಂ., ಸುಶ್ರುತ್, ನಂದೀಶ್, ಅರುಣ್ ಎ. ಸೇರಿದಂತೆ ಗ್ರಾಮಸ್ಥರಿದ್ದರು.