



ನಗರದ ಚೊಕ್ಕನಹಳ್ಳಿ, ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ಫೆಬ್ರವರಿ 15ರಂದು ದ್ವಿತೀಯ ಪಿಯುಸಿ ಮಕ್ಕಳಿಗೆ ಗ್ರಾಜುಯೇಷನ್ ಡೇ ಸಮಾರಂಭವು ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ತತ್ವಮಸಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಶ್ರೀದೇವಿ ರಾಘವನ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಣ ಎನ್ನುವುದು ನಿಮ್ಮ ಜೀವನದ ಅತ್ಯಮೂಲ್ಯ ಹೂಡಿಕೆ; ಈ ಹೂಡಿಕೆಯ ಹಿಂದೆ ಹಲವರ ಶ್ರಮವಿದೆ ಅದನ್ನು ಅರ್ಥ ಮಾಡಿಕೊಂಡು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕೆಂದು ಕರೆ ನೀಡಿದರು. ನಿಮ್ಮ ಜೀವನದಲ್ಲಿ ನೈತಿಕತೆಯನ್ನು ಬಿಡದೆ ಮೌಲ್ಯಯುತವಾಗಿ ಬದುಕಿದರೆ ಅದೇ ನೀವು ನಮಗೆ ನೀಡುವ ದೊಡ್ಡ ಕೊಡುಗೆ ಎಂದು ಅವರು ತಿಳಿಸಿದರು. ಓದಿನ ಜೊತೆಗೆ ದೈಹಿಕವಾಗಿಯೂ ಸದೃಢರಾದಾಗ ಮಾತ್ರ ಉತ್ತಮವಾಗಿ ಜೀವನ ನಡೆಸುವುದು ಸಾಧ್ಯ ಎಂದು ಅವರ ತಿಳಿಸಿದರು.
ಸಿಂಧಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ್ ಆತ್ಮಾರಾಮ್ ಅವರು ಶುಭಾಶಯಗಳನ್ನು ಕೋರಿ ಜೀವನದಲ್ಲಿ ಕೃತಜ್ಞತೆ ಎನ್ನುವುದು ನಿಮ್ಮ ಸಹಜ ಗುಣವಾಗಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ನಂದ ಎನ್ ಅವರು ಮಾತನಾಡಿ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು. ಗ್ರಾಜುಯೇಷನ್ ಎನ್ನುವುದು ನಿಮ್ಮ ಜೀವನದ ಪ್ರಮುಖ ಮೈಲಿಗಲ್ಲು. ನಿಮ್ಮ ಜೀವನದ ಯಾತ್ರೆಗೆ ನಿಮಗೆ ಸಿಕ್ಕ ಮೊದಲ ಅವಕಾಶವಾಗಿದೆ. ನಿರಂತರವಾಗಿ ಕಲಿಯುತ್ತಾ ಕೌಶಲ್ಯಗಳನ್ನು ಬೆಳೆಸಿಕೊಂಡು ಸಾಧನೆ ಮಾಡಲು ಇದೊಂದು ದಿಕ್ಸೂಚಿಯಾಗಿದೆ ಎಂದು ಅವರು ಹಿತನುಡಿದರು.
ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಾವಳಿ ಹಾಗೂ ಸಾಧನ ಪಂಚಕಂ ಮಂತ್ರಗಳನ್ನು ಪಠಿಸಲಾಯಿತು. 2024 ಮಾರ್ಚ್ ನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ನೀಡಿ ಸನ್ಮಾನಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಕಾಂಚನಾ ರವರು ವಂದನಾರ್ಪಣೆ ಸಲ್ಲಿಸಿದರು.
ಸಿಂಧಿ ಸೇವಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ವಿನೋದ್ ಹೇಮದೇವ್, ಕಾರ್ಯದರ್ಶಿಗಳಾದ ಶ್ರೀ ರಾಜ ಜುಮಾನಿ, ಸಿಂಧಿ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಮಹೇಶ್ ರಾಮಚಂದ್, ಗೌರವ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಬಜಾಜ್, ಗೌರವ ಖಜಾಂಚಿಗಳಾದ ಶ್ರೀ ಅಶೋಕ್ ಪಿ. ನಾರಂಗ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.