


ಬಸವಣ್ಣನಂತಹ ಮೇರು ನಾಯಕರ ನಾಡು ಬಸವ ಕಲ್ಯಾಣದಲ್ಲಿ ಸಮಾನತೆ ಸಮಾವೇಶದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ
-ಎಚ್.ಸಿ.ಮಹದೇವಪ್ಪ, ಸಚಿವರು
ಬಯಲು ಸಿಂಹ ಸುದ್ಧಿ
ಬಸವಕಲ್ಯಾಣ: ಬಸವಣ್ಣನಂಥವರ ಮೇರು ನಾಯಕನ ನಾಡಿನಲ್ಲಿ ಸಮಾನತೆಯ ಸಮಾವೇಶದಲ್ಲಿ ಭಾಗವಹಿಸಿರುವುದು ಖುಷಿಯಾಗುತ್ತದೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.
ಅತ್ಯಂತ ಕ್ರೂರ ಮತ್ತು ಅಮಾನವೀಯವಾದ ಸಾಮಾಜಿಕ ಇತಿಹಾಸವನ್ನು ಹೊಂದಿರುವ ನಮ್ಮ ದೇಶದಲ್ಲಿ ಜನರ ಘನತೆ ಮತ್ತು ಸಮಾನತೆಯನ್ನು ಕಾಪಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ.
ಬುದ್ಧನ ಕಾಲದಿಂದ ಹಿಡಿದು ಬಾಬಾ ಸಾಹೇಬರ ಸಂವಿಧಾನದ ಕಾಲದವರೆಗೂ ನಮ್ಮ ಹಿರಿಯರು ಈ ನೆಲದಲ್ಲಿ ಸಮಾನತೆಯನ್ನು ಮೂಡಿಸಲು ಸತತ ಪ್ರಯತ್ನಗಳನ್ನು ಮಾಡಿದ್ದಾರೆ.
ಕಲ್ಯಾಣವನ್ನು ಆಳಿದ ಕಲಚುರಿ ಬಿಜ್ಜಳ ರಾಜನ ಮುಖ್ಯಮಂತ್ರಿಯಾಗಿ, ನಿಜದ ಕ್ರಾಂತಿಕಾರಿಯಾಗಿದ್ದ ಬಸವಣ್ಣನವರು ಸಾಮಾಜಿಕ ಸುಧಾರಣೆಗಳನ್ನು ಉತ್ತೇಜಿಸಲು ಮತ್ತು ಶೈವ ಧರ್ಮವನ್ನು ಪುನರುಜ್ಜೀವನಗೊಳಿಸಲು ತನ್ನ ರಾಜ್ಯದ ಖಜಾನೆಯನ್ನು ಬಳಸಿಕೊಂಡರು. ಅವರು ಜಂಗಮರು ಎಂದು ಕರೆಯಲ್ಪಡುವ ತಪಸ್ವಿಗಳಿಗೆ ಅಧಿಕಾರ ನೀಡಿ, ಚಳುವಳಿಯ ಪ್ರಭಾವವನ್ನು ವ್ಯಾಪಕವಾಗಿ ವಿಸ್ತರಿಸುವ ಕೆಲಸ ಮಾಡಿದರು.
ಕೆಳಜಾತಿಗಳು ಎನಿಸಿಕೊಂಡು ತಾವಿದ್ದ ನೆಲದಲ್ಲಿ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದ ಜನರಿಗೆ ಲಿಂಗಾಯತ ಧರ್ಮವನ್ನು ರೂಪಿಸಿಕೊಟ್ಟರು.
ನನ್ನ ಪ್ರಕಾರ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ” ದಯೆಯೇ ಧರ್ಮವಾಗಿದೆ”. ಎಲ್ಲರಿಗೂ ದಯೆ ಪ್ರೀತಿ ತೋರಿಸುವ ದೊಡ್ಡ ಗುಣ ಇರುವಂತಹ ಈ ಧರ್ಮವು ಸಮಾನತೆಯಡೆಗೆ ಇಟ್ಟ ದೊಡ್ಡ ಹೆಜ್ಜೆಯಾಗಿದೆ.
ಇದೇ ನೆಲದಲ್ಲಿ ಮಧುವರಸ ಹರಳಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸೂಳೆ ಸಂಕವ್ವೆ ಆದಿಯಾಗಿ ಹಲವಾರು ಮಹನೀಯರ ಬದುಕು, ಹೋರಾಟ ಮತ್ತು ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಅವರು ಮಾಡಿದ ಸಾಧನೆಯನ್ನು ನಾವಿಲ್ಲಿ ನೆನೆಯಬಹುದು.
ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವು ಪ್ರಜಾಪ್ರಭುತ್ವದ ಮೂಲ ಲಕ್ಷಣಗಳು: ಇಂತಹ ಪ್ರಜಾಪ್ರಭುತ್ವವನ್ನು ತನ್ನ ಅನುಭವ ಮಂಟಪದ ಮೂಲಕ ಜಾರಿಗೊಳಿಸಿದ ಬಸವಣ್ಣನ ನಾಡಿನಲ್ಲಿ ಈ ಸಮಾವೇಶ ನಡೆಯುತ್ತಿರುವುದು ಅತ್ಯಂತ ಮಹತ್ವದ ಸಂಗತಿಗಳಲ್ಲಿ ಒಂದು.
ಬಸವೇಶ್ವರರು ಕಲ್ಯಾಣಕ್ಕೆ ಬಂದ ನಂತರ ಅವರು ಪ್ರಭುತ್ವ ಹೇಗಿರಬೇಕೆಂದು ಸಾಧಿಸಿ ತೋರಿಸುತ್ತಾರೆ: ಮಹಿಳೆಯರು, ಪರಿಶಿಷ್ಟ ಸಮುದಾಯದವರು ಮತ್ತು ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡಿದ ಅವರು, 12 ನೇ ಶತಮಾನದಲ್ಲೇ ಮಾನವ ಹಕ್ಕುಗಳ ಪ್ರತಿಪಾದನೆ ಮಾಡಿ ಸರ್ವೋದಯ ಕಲ್ಪನೆಯನ್ನು ನೀಡಿದಂತಹ ವ್ಯಕ್ತಿ.
ಆಡಳಿತದಲ್ಲಿ ಎಲ್ಲರೂ ಸಮಾನರು ಎಂದರಿತಿದ್ದ ಅವರು ಪ್ರಜಾರಾಜ್ಯಕ್ಕೆ ಮುನ್ನುಡಿ ಬರೆಯಲು ರಾಜ್ಯದ ಮೊದಲ ಸಾಮಾಜಿಕ ನ್ಯಾಯ ನಿಧಿಯನ್ನು ಸ್ಥಾಪಿಸಿದ್ದರು.
ಕರ್ಮ ಸಿದ್ಧಾಂತವು ಎಲ್ಲಾ ಅನಿಷ್ಟಗಳ ತಾಯಿ ಬೇರಾಗಿದ್ದು ನಮ್ಮ ಬದುಕಿನ ಆಗು ಹೋಗುಗಳೆಲ್ಲವೂ ಹಿಂದಿನ ಜನ್ಮದ ಪಾಪದ ಫಲ ಎಂಬ ಭ್ರಮೆಯನ್ನು ಕಳಚಬೇಕು ಮತ್ತು ಜನ ಸಮುದಾಯಗಳನ್ನು ದುರ್ಬಲಗೊಳಿಸುವ ಪಂಚಾಂಗ, ಶನಿಕಾಟ ಮತ್ತು ಮೂಢನಂಬಿಕೆಯನ್ನು ತ್ಯಜಿಸಲು ದೊಡ್ಡ ಮಟ್ಟದ ಕರೆಯನ್ನು ಬಸವೇಶ್ವರರು ನೀಡಿದರು.
ಬಸವೇಶ್ವರರ ಬಳಿಕ ಸಮಾಜದಲ್ಲಿ ಸಮಾನತೆ ಇರಬೇಕೆಂಬ ಮಾತನ್ನು ಇನ್ನಷ್ಟು ಅಧಿಕೃತಗೊಳಿಸಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ತಮ್ಮ ಸಮುದಾಯಗಳ ಮೇಲಿನ ಅವಮಾನ ಮತ್ತು ಅಸಮಾನತೆಯ ಬದುಕನ್ನು ಬಹಳಷ್ಟು ಗಂಭೀರವಾಗಿ ತೆಗೆದುಕೊಂಡ ಬಾಬಾ ಸಾಹೇಬರು ಸಂವಿಧಾನ ರಚಿಸುವ ಸಂದರ್ಭದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಶೋಷಣೆಯ ವಿರುದ್ಧದ ಜನರು ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕುಗಳನ್ನು ನೀಡಿದರು.
ಸಂವಿಧಾನದ ಪ್ರಸ್ತಾವನೆಯಲ್ಲೇ ” ಭಾರತೀಯ ಪ್ರಜೆಗಳಾದ ನಾವೆಲ್ಲರೂ ಒಂದೇ” ಎಂಬ ಸಂದೇಶವನ್ನು ಅವರು ನೀಡಿದ್ದು ಅವರ ಆಶಯಗಳನ್ನು ಎಲ್ಲೆಡೆ ತಲುಪಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಮಾಡಿದೆ ಎಂದು ಈ ವೇಳೆ ನೆನೆಯುವೆ.
ಸಮಾನತೆ ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಎಂಬುದು ಈ ನೆಲದ ಮೂಲ ಗುಣ. ಆ ಗುಣವನ್ನು ಗೌರವಿಸಿ ಅದನ್ನು ಕಾಪಾಡುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡಬೇಕೆಂಬ ಉದ್ದೇಶ ನಮ್ಮದಾದರೆ, ಈ ಸಮಾವೇಶಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದೆನು
ಬಸವಣ್ಣನವರಂಥ ಮೇರು ನಾಯಕರು ಶ್ರಮ ಸಂಸ್ಕೃತಿಯ ಮೂಲಕ ಲೋಕದ ಚಲನೆಗೆ ಕಾರಣವಾದ ಕೆಳ ಸಮುದಾಯಗಳಿಗೆ ಒಂದು ಘನತೆಯ ಸ್ಥಾನ ನೀಡಿ, ಅವರನ್ನು ಒಂದು ವೇದಿಕೆಯಡಿ ತರುವ ಕೆಲಸ ಮಾಡಿದ್ದರು.
-ಎಚ್.ಸಿ.ಮಹದೇವಪ್ಪ, ಸಚಿವರು ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ, ಬೆಂಗಳೂರು