ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಒತ್ತಾಯ 

ದ.ಸಂ.ಸ. ಕೆಂಪುಸೇನೆಯಿಂದ ಪ್ರತಿಭಟನೆ :

ಯಲಹಂಕ : ಯಲಹಂಕ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಒಂದು ವರ್ಷದ ಹಿಂದೆ ನಿರ್ಮಾಣಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಏ.14 ರೊಳಗೆ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕೆಂಪುಸೇನೆಯ ನೂರಾರು ಕಾರ್ಯಕರ್ತರು ರಾಜ್ಯಾಧ್ಯಕ್ಷ ಡಿ.ರಾಜಣ್ಣ ನೇತೃತ್ವದಲ್ಲಿ ಗುರುವಾರ ಮಿನಿ ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ದಸಂಸ ಕೆಂಪುಸೇನೆಯ ರಾಜ್ಯಾಧ್ಯಕ್ಷ ಡಿ.ರಾಜಣ್ಣ ಮಾತನಾಡಿ ‘ಯಲಹಂಕ ಮಿನಿ ವಿಧಾನಸೌಧದ ಮುಂದೆ ಸರ್ಕಾರದ ಅನುದಾನದ ಅಡಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ನಿರ್ಮಿಸಿ ವರ್ಷವೇ ಕಳೆದಿದ್ದರೂ ಪ್ರತಿಮೆಯನ್ನು ಅನಾವರಣಗೊಳಿಸದೆ ಪ್ಲಾಸ್ಟಿಕ್ ಚೀಲದಲ್ಲಿ ಮುಚ್ಚಿಟ್ಟಿರುವುದು ಸರ್ಕಾರದ ಅಸಡ್ಡೆತನಕ್ಕೆ ಹಿಡಿದ ಕೈಗನ್ನಡಿ, ಇದು ಅಂಬೇಡ್ಕರ್ ಅವರಿಗೆ ರಾಜ್ಯ ಸರ್ಕಾರ ‌ಮಾಡುತ್ತಿರುವ ಅಪಮಾನ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಏ.14ರಂದು ಅಂಬೇಡ್ಕರ್ ಅವರ ಜನ್ಮದಿನಾಚರಣೆ ಇದ್ದು, ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಏ.14ರ ಒಳಗೆ ಅಂಬೇಡ್ಕರ್ ಪ್ರತಿಮೆ ಅನಾವರಣ ಗೊಳಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಯಲಹಂಕ ತಾಲ್ಲೂಕು ವ್ಯಾಪ್ತಿಯ ಎಲ್.ಬಿ.ಎಸ್. ನಗರ, ಜೆ.ಪಿ.ಎನ್. ಕಾಲೋನಿ, ಜಕ್ಕೂರು ಬಡಾವಣೆ, ಶ್ರೀರಾಮನಹಳ್ಳಿ ಮತ್ತು ಕೊಂಡಶೆಟ್ಟಿಹಳ್ಳಿ ಗ್ರಾಮ ಗಳಲ್ಲಿ ಸುಮಾರು 140 ಕುಟುಂಬಗಳು ಆಯಾ ಗ್ರಾಮಗಳ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ.94 ಸಿ.ಸಿ.ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಸಹ ಮಾನ್ಯ ತಹಶಿಲ್ದಾರ್ ಅವರು ಮನೆಗಳ ಫಲಾನುಭವಿಗಳಿಗೆ ತಾತ್ಕಾಲಿಕ ಆದೇಶ ಪತ್ರ ನೀಡಿರುವುದಿಲ್ಲ, ಕೆಲವು ಕುಟುಂಬಗಳಿಗೆ ತಾತ್ಕಾಲಿಕ ಆದೇಶ ಪತ್ರ ನೀಡಿದ್ದರೂ, ನೋಂದಣಿ ಮಾಡಿಸದೆ ಹಕ್ಕುಪತ್ರ ನೀಡಿರುವುದಿಲ್ಲ ತಹಶಿಲ್ದಾರ್ ಅವರು ಕೂಡಲೇ ಈ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಯಲಹಂಕ ಉಪನಗರದಲ್ಲಿ ಇರುವ ಡಾ.ಅಂಬೇಡ್ಕರ್ ಭವನದ ಸಭಾಂಗಣವನ್ನು ದಲಿತ ಸಂಘಟನೆಗಳಿಗೆ ಸಭೆ, ಸಾಮಾಜಿಕ ಕಾರ್ಯಕ್ರಮ ನಡೆಸಲು ಉಚಿತ ವಾಗಿ ನೀಡಬೇಕು ಮತ್ತು ಅತ್ಯಂತ ಹಿಂದುಳಿದ ಬಿಪಿಎಲ್ ಕಾರ್ಡ್ ದಾರರಿಗೆ ಮದುವೆ ಮತ್ತು ಇತರೆ ಸಮಾರಂಭಗಳನ್ನು ನಡೆಸಲು 10 ಸಾವಿರ ರು.ಗಳ ಕನಿಷ್ಟ ದರವನ್ನು ನಿಗದಿಪಡಿಸುವ ಮೂಲಕ ಬಡವರಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.

ತಹಶಿಲ್ದಾರ್ ಮತ್ತು ಸಮಾಜ ಕಲ್ಯಾಣಾಧಿಕಾರಿಗೆ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ದಸಂಸ ಕೆಂಪುಸೇನೆಯ ಕಾರ್ಯಾಧ್ಯಕ್ಷ ಜಿ.ಗುರುಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳಿಪುರ ಬಿ.ಶ್ರೀನಿವಾಸ್, ರಾಜ್ಯ ಉಪಾಧ್ಯಕ್ಷರಾದ ಜಕ್ಕೂರು ಸುಬ್ಬಣ್ಣ, ಸಿ.ಕೆ.ರವೀಂದ್ರನಾಥ್, ರಾಜ್ಯ ಕಾರ್ಯದರ್ಶಿ ಡಿ.ವಿ.ವೀರಭದ್ರೇಗೌಡ, ಬೆಂ.ನಗರ ಜಿಲ್ಲಾಧ್ಯಕ್ಷ ಕೆ.ಎಂ.ಮುರಳಿ, ಪ್ರಧಾನ ಕಾರ್ಯದರ್ಶಿ ಪಿಳ್ಳಪ್ಪ, ವಿಭಾಗೀಯ ಅಧ್ಯಕ್ಷ ಸುರಧೇನುಪುರ ರವಿ, ಬೆಂ.ಉತ್ತರ ತಾಲ್ಲೂಕು ಅಧ್ಯಕ್ಷ ಆರಿಫ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಮೀರ್, ಲಕ್ಷ್ಮೀಕಾಂತ್, ರಾಬರ್ಟ್‌, ಜಕ್ಕೂರು ಚಂದ್ರು, ತಿಮ್ಮರಾಯಪ್ಪ, ನವೀನ್, ಸುಬ್ರಮಣಿ, ಅನಿಲ್ ಸೇರಿದಂತೆ ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *