ಮಹಿಳೆಯರಿಗೆ ರಾಷ್ಟ್ರವನ್ನು ಮುನ್ನಡೆಸಬಲ್ಲ ಮನೋಬಲ, ಬುದ್ದಿಬಲವಿದೆ : ಎಸ್ ಆರ್ ವಿಶ್ವನಾಥ್

ರಾಜಾನುಕುಂಟೆಯಲ್ಲಿ ಮಹಿಳಾ ಗ್ರಾಮಸಭೆ, ಸೀಮಂತ ಕಾರ್ಯಕ್ರಮ :

ಯಲಹಂಕ : ಮಹಿಳೆಯರು ಅಬಲೆಯರಲ್ಲ, ರಾಷ್ಟ್ರವನ್ನು ಮುನ್ನಡೆಸಬಲ್ಲ ಮನೋಬಲ, ಬುದ್ದಿಬಲ ಅವರಿಗಿದೆ ಅದನ್ನು ಅಭಿವ್ಯಕ್ತಗೊಳಿಸುವ ದಿಸೆಯಲ್ಲಿ ಪ್ರಯತ್ನಿಸಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಮಹಿಳೆಯರಿಗೆ ಸಲಹೆ ನೀಡಿದರು.

ರಾಜಾನುಕುಂಟೆ ಗ್ರಾ.ಪಂ. ಮತ್ತು ವಿಶ್ವವಾಣಿ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ 2024-25ನೇ ಸಾಲಿನ ಮಹಿಳಾ ಗ್ರಾಮ ಸಭೆ ಮತ್ತು ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಭಾರತೀಯ ಪರಂಪರೆಯಲ್ಲಿ ಆದಿಕಾಲದಿಂದಲೂ ಸ್ತ್ರೀಯರಿಗೆ ಅತ್ಯಂತ ಪೂಜ್ಯ ಸ್ಥಾನವಿದೆ. ‘ಭಾರತಮಾತೆ, ಶಕ್ತಿ ದೇವತೆ ಪಾರ್ವತಿ, ವಿದ್ಯಾದೇವತೆ ಸರಸ್ವತಿ, ಸಂಪತ್ತಿನ ಅಧಿದೇವತೆ ಲಕ್ಷ್ಮಿ, ಹರಿಯುವ ಗಂಗೆ, ತುಂಗೆ, ಯಮುನೆ ಹೀಗೆ ಎಲ್ಲವೂ ಸ್ತ್ರೀ ಶಕ್ತಿಯೇ ಆಗಿದೆ.

ಕೌಟುಂಬಿಕ ನಿರ್ವಹಣೆಯ ಮಹತ್ತರ ಜವಾಬ್ದಾರಿ ಹೊತ್ತಿರುವ ಮಹಿಳೆಯರಿಗೆ ರಾಷ್ಟ್ರವನ್ನು ಮುನ್ನಡೆಸಬಲ್ಲ ಮನೋಬಲ, ಬುದ್ದಿಬಲ, ಆತ್ಮಸ್ಥೈರ್ಯ ಎಲ್ಲವೂ ಇದೆ. ಪುರಾಣಗಳ ಪುಟ ತೆರೆದರೆ ದೈತ್ಯ ರಾಕ್ಷಸರನ್ನು ಸಂಹಾರ ಮಾಡಿರುವುದು ಸ್ತ್ರೀಶಕ್ತಿ ಎಂಬುದು ತಿಳಿಯುತ್ತದೆ. ಆದರೆ ಇತ್ತೀಚಿನ ನಮ್ಮ ಮಹಿಳೆಯರು ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಮನಸ್ಥಿತಿಗೆ ಒಳಗಾಗುತ್ತಿರುವುದು ದುರ್ದೈವದ ಸಂಗತಿ, ಇಂತಹ ಮನಸ್ಥಿತಿಗೆ ಒಳಗಾಗುವ ಮುನ್ನ ನಮ್ಮ ವೀರ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ರಾಕ್ಷಸರನ್ನು ಸಂಹಾರ ಮಾಡಿರುವ ದುರ್ಗೆಯಂತಹ ಮಹಿಳಾ ಮಹಾಶಕ್ತಿಯನ್ನೊಮ್ಮೆ ಸ್ಮರಿಸಿಕೊಳ್ಳಿ, ಹೆಣ್ಣು ಮಕ್ಕಳಿಗೂ ಸಹ ಇಂತಹ ವೀರ  ಮಹಿಳೆಯರ ಕುರಿತು ತಿಳಿಸಿ ಎಂದು ಸಲಹೆ ನೀಡಿದ ಅವರು ಮಹಿಳಾ ಗ್ರಾಮಸಭೆ, ಮಕ್ಕಳ ಗ್ರಾಮಸಭೆ, ವಿಶೇಷ ಚೇತನರ ಗ್ರಾಮಸಭೆ, ಸೀಮಂತ ಮುಂತಾದ ಎಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ ವಿಜೃಂಭಣೆಯಿಂದ, ಅರ್ಥಪೂರ್ಣ ರೀತಿಯಲ್ಲಿ ಆಚರಣೆ ಮಾಡುವ ರಾಜಾನುಕುಂಟೆ ಗ್ರಾಮ ಪಂಚಾಯ್ತಿ ಸದಸ್ಯರು, ಸಿಬ್ಬಂದಿಗಳ ಕ್ರಮ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಾಣಿ ಪೌಂಡೇಷನ್ ನ ಮುಖ್ಯಸ್ಥರು, ಆರ್ ಎಸ್ ಎಸ್ ಎನ್ ಬ್ಯಾಂಕ್ ನ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್ ಮಾತನಾಡಿ ‘ಮಹಿಳೆಯರು ಸಮಾಜದ ನಿಜವಾದ ವಾಸ್ತುಶಿಲ್ಲಿಗಳು, ಕುಟುಂಬ ನಿರ್ವಹಣೆಯ ಜೊತೆಗೆ ಸಾಧನೆಯ ಹಾದಿಯಲ್ಲಿ ದಾಪುಗಾಲಿಡುತ್ತಿರುವ ಮಹಿಳೆಯರ ಕಾರ್ಯಕೌಶಲ್ಯತೆ ಪ್ರಶಂಸಾರ್ಹವಾದುದು. ರಾಜಾನುಕುಂಟೆ ಗ್ರಾಮ ಪಂಚಾಯಿತಿ ಆಯೋಜಿಸಿರುವ ಮಹಿಳಾ ಗ್ರಾಮ ಸಭೆಯ ಈ ವೇದಿಕೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಗರ್ಭಿಣಿ ತಾಯಂದಿರಿಗೆ ಸೀಮಂತ ಮಾಡುತ್ತಿರುವುದು ಸ್ತುತ್ಯಾರ್ಯ ಕಾರ್ಯವಾಗಿದೆ. ವಿಶ್ವವಾಣಿ ಫೌಂಡೇಶನ್ ಮಹಿಳಾ ಸ್ವಾವಲಂಬನೆಯ ನಿಟ್ಟಿನಲ್ಲಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ಮಹಿಳೆಯರನ್ನು ಆರ್ಥಿಕ ಶಕ್ತಿಯಾಗಿ ರೂಪಿಸುವ ದಿಸೆಯಲ್ಲಿ ಶ್ರಮಿಸುತ್ತಿದೆ ಎಂದರು.

ಮಹಿಳಾ ಗ್ರಾಮಸಭೆಯಲ್ಲಿ 77 ಗರ್ಭಿಣಿ ತಾಯಂದಿರಿಗೆ ಸೀಮಂತ, ಮಹಿಳಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದ ಮಹಿಳೆರಿಗೆ ಬಹುಮಾನ ವಿತರಣೆ, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಫ್ಯಾಷನ್ ಶೋ, ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರಿಂದ ಮಾಸಿಕ ಸಂತೆ, ಉಡುಗೊರೆ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ರಾಜಾನುಕುಂಟೆ ಗ್ರಾ.ಪಂ‌.ಅಧ್ಯಕ್ಷೆ ಭವಾನಿ ಶ್ರೀನಿವಾಸ್, ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಅದ್ದಿಗಾನಹಳ್ಳಿ ವೀರಣ್ಣ, ಪಿಡಿಓ ನಾಗರಾಜ್, ಗ್ರಾ.ಪಂ.ಸದಸ್ಯರಾದ ಆರ್.ಡಿ.ರಾಜಣ್ಣ, ಸಂತೋಷ್ ಕುಮಾರ್ ಎ‌ನ್., ಸಾದೇನಹಳ್ಳಿ ಚಿಕ್ಕಣ್ಣ, ನಾಗೇಶ್, ಹನುಮೇಗೌಡ, ಸುಜಾತಮ್ಮ, ಗೋವಿಂದರಾಜು, ರಘು, ಮಮತಾ ರಮೇಶ್, ಮುತ್ತು ವೇಣು, ತಾಲ್ಲೂಕು ವೈದ್ಯಾಧಿಕಾರಿ ಡಾ.ಶೈಲಕುಮಾರ್, ಸಮೃದ್ಧಿ ಸಂಜೀವಿನಿ ಅಧ್ಯಕ್ಷೆ ಪ್ರಮಿಳಾ, ಪಂಚಾಯಿತಿ ಕಾರ್ಯದರ್ಶಿ ರಾಕೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಇತರೆ ಸದಸ್ಯರಿದ್ದರು.

Leave a Reply

Your email address will not be published. Required fields are marked *