ಅನುದಾನದ ಕೊರತೆ ನಡುವೆಯೂ ಅಭಿವೃದ್ಧಿ ಕಾರ್ಯಗಳಿಗೆ ಇಂಬು ನೀಡಲಾಗುತ್ತಿದೆ : ಎಸ್ ಆರ್ ವಿಶ್ವನಾಥ್
ಯಲಹಂಕ : ರಾಜ್ಯ ಸರ್ಕಾರದ ಅನುದಾನದ ಕೊರತೆಯ ನಡುವೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಇಂಬು ನೀಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಕೈಗೊಂಡಿರುವುದಾಗಿ ಶಾಸಕ ಎಸ್ ಆರ್ ವಿಶ್ವನಾಥ್ ತಿಳಿಸಿದರು.
ಯಲಹಂಕ ಕ್ಷೇತ್ರದ ರಾಜಾನುಕುಂಟೆ ಗ್ರಾಮದ ಎಸ್.ಆರ್.ವಿ ಸಾಯಿ ಗಾರ್ಡನ್ ಬಡಾವಣೆಯಲ್ಲಿ ಗುರುವಾರ 25 ಲಕ್ಷ ರು.ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ‘ಅನುದಾನದ ಕೊರತೆಯಿಂದಾಗಿ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿಲ್ಲ, ಆದರೂ ಲಭ್ಯವಿರುವ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ರಾಜಾನುಕುಂಟೆಯಲ್ಲಿ ಇಂದು 25 ಲಕ್ಷ ರು.ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಯುಗಾದಿಯ ಬಳಿಕ ಇನ್ನೂ 50 ಲಕ್ಷ ರು.ವೆಚ್ಚದಲ್ಲಿ ಅಗತ್ಯವಿರುವ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಳನ್ನು ಕೈಗೊಳ್ಳಲಾಗುವುದು ಎಂದರು.
ಯಲಹಂಕ ಮಿನಿ ವಿಧಾನಸೌಧದ ಮುಂದೆ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಅನಾವರಣ ಕುರಿತಂತೆ ದಲಿತಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಸರಿಯಾದ ಕ್ರಮವೇ ಆಗಿದೆ, ಏಕೆಂದರೆ ಪ್ರತಿಮೆ ನಿರ್ಮಾಣಗೊಂಡು ವರ್ಷವೇ ಕಳೆದಿದ್ದರೂ, ಅನಾವರಣ ಭಾಗ್ಯ ದೊರೆಯದಿರುವುದು ವಿಷಾದಕರ ಸಂಗತಿ. ಈ ಬಗ್ಗೆ ಸಚಿವ ಮಹದೇವಪ್ಪ ರವರನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳು ಆಗಮಿಸುವ ದಿನಾಂಕವನ್ನು ಸಚಿವರೇ ನಿಗದಿಪಡಿಸುವಂತೆ ಕೇಳಿಕೊಳ್ಳಲಾಗಿದೆ. ಏ.14ರ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಮುನ್ನವೇ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಗೊಳಿಸಬೇಕೆಂಬುದು ನಮ್ಮ ಇಂಗಿತವಾಗಿದೆ. ಒಂದೊಮ್ಮೆ ಮುಖ್ಯಮಂತ್ರಿಗಳ ದಿನಾಂಕ ದೊರೆಯದಿದ್ದರೆ, ಸಚಿವರುಗಳ ಉಪಸ್ಥಿಯಲ್ಲೇ ಪ್ರತಿಮೆ ಅನಾವರಣಗೊಳಿಸುವ ಕುರಿತು ದಲಿತಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗು ವುದು ಎಂದರು.
ಕಾಮಗಾರಿ ಚಾಲನೆಗೂ ಮುನ್ನ ಎಸ್ ಆರ್ ವಿ ಸಾಯಿ ಗಾರ್ಡನ್ ಬಡಾವಣೆಯ ಆರ್ಚ್(ಹೆಬ್ಬಾಗಿಲು) ನ್ನು ಶಾಸಕರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ರಾಜಾನುಕುಂಟೆ ಗ್ರಾ.ಪಂ‌.ಅಧ್ಯಕ್ಷೆ ಶ್ರೀನಿವಾಸ್, ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಹೆಸರಘಟ್ಟ ಹೋಬಳಿ ಬಿಜೆಪಿ ಉಪಾಧ್ಯಕ್ಷ ಇಟಗಲ್ ಪುರ ಮೋಹನ್, ಗ್ರಾ.ಪಂ.ಸದಸ್ಯರಾದ ಆರ್.ಡಿ.ರಾಜಣ್ಣ, ಸಾದೇನಹಳ್ಳಿ ಚಿಕ್ಕಣ್ಣ, ನಾಗೇಶ್, ಹನುಮೇಗೌಡ, ಸೋಮಶೇಖರ್,ಗೋವಿಂದರಾಜು, ರಘು, ಮಮತಾ ರಮೇಶ್, ಮುತ್ತು ವೇಣು, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಎಚ್ ಎಸ್ ಕಿರಣ್, ಬಿಜೆಪಿ ಮುಖಂಡರಾದ ರಾಜೇಂದ್ರ, ಯುವ ಮುಖಂಡ ಸಾದೇನಹಳ್ಳಿ ಪ್ರಕಾಶ್ ಗೌಡ, ಕೇಬಲ್ ಚಂದ್ರು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *