
ವಿಜೃಂಭಣೆಯಿಂದ ನೆರವೇರಿದ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮ ರಥೋತ್ಸವ :
ಯಲಹಂಕ : ಐತಿಹಾಸಿಕ ಹಿನ್ನೆಲೆಯುಳ್ಳ, ನಾಡ ಪ್ರಭು ಕೆಂಪೇಗೌಡರ ಆರಾಧ್ಯದೈವ ಯಲಹಂಕದ ಶ್ರೀ ವೇಣುಗೋಪಾಲ ಸ್ವಾಮಿ ಬ್ರಹ್ಮ. ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಸಹಸ್ರಾರು ಸಂಖ್ಯೆಯ ಭಕ್ತರು ಸುಡು ಬಿಸಿಲನ್ನು ಲೆಕ್ಕಿಸದೆ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾ ಭಾವ ವ್ಯಕ್ತಪಡಿಸಿದರು. ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಬ್ರಹ್ಮ ರಥೋತ್ಸವಕ್ಕೆ ಶಾಸಕ ಎಸ್ ಆರ್ ವಿಶ್ವನಾಥ್ ಮಧ್ಯಾಹ್ನ 12.30ಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸ್ವಾಮಿಯ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ರಥ ಎಳೆದು, ಬಾಳೆಹಣ್ಣು ದವಣ ತೂರಿ ಭಕ್ತಿಯಿಂದ ಸ್ವಾಮಿಗೆ ಉಘೇ ಎಂದರು.
ರಥೋತ್ಸವದ ಪ್ರಯುಕ್ತ ದೇವಾಲಯದ ಪ್ರಧಾನ ಅರ್ಚಕರಾದ ಕೆ.ಜನಾರ್ಧನ ಭಟ್ಟ ಮತ್ತು ಶಿವಶಂಕರ್ ನೇತೃತ್ವದಲ್ಲಿ ಮುಂಜಾನೆಯಿಂದಲೇ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಸರ್ವಾಲಂಕೃತ ಭೂಷಿತನಾಗಿದ್ದ ಶ್ರೀ ವೇಣುಗೋಪಾಲ ಸ್ವಾಮಿಯನ್ನು ಸುಸಜ್ಜಿತ ರಥದಲ್ಲಿ ಪ್ರತಿಷ್ಠಾಪಿಸಿ, ಯಲಹಂಕದ ಪ್ರಮುಖ ರಾಜಬೀದಿಗಳಲ್ಲಿ ಮೇರೆವಣಿಗೆ ಮಾಡಲಾಯಿತು.
ಈ ವೇಳೆ ಅಲ್ಲಲ್ಲಿ ಕೊಪ್ಪಲು ಹಾಕಿಕೊಂಡಿದ್ದ ಭಕ್ತರು ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸುವ ಮೂಲಕ ಭಕ್ತರ ದಣಿವನ್ನು ತಣಿಸಿದರು. ಜನರ ನೂಕು ನುಗ್ಗಲು ತಪ್ಪಿಸಲು ಯಲಹಂಕ ಪೋಲೀಸರು ಅಗತ್ಯ ವ್ಯವಸ್ಥೆ ಮಾಡಿದ್ದರು.
ಬ್ರಹ್ಮ ರಥೋತ್ಸವದ ವೈಭವದ ಈ ಕಾರ್ಯಕ್ರಮದಲ್ಲಿ ಯಲಹಂಕ ತಹಶಿಲ್ದಾರ್ ಶ್ರೇಯಸ್ ಜಿ.ಎಸ್., ಉಪ ತಹಶಿಲ್ದಾರ್ ಜೆ.ಸಿ.ರಮೇಶ್ ಬಾಬು, ಯಲಹಂಕ ಸಬ್ ಇನ್ಸ್ಪೆಕ್ಟರ್ ಹರಿನಾಥ್ ಬಾಬು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.