









ಸಿಂಗನಾಯಕನಹಳ್ಳಿಯಲ್ಲಿ ವಿಜೃಂಭಣೆಯಿಂದ ನೆರವೇರಿದ 2100 ಕುಂಡಗಳ ವಿಹಂಗಮ ಯೋಗ :
ಅಘನ್ಯಾ ಗುರುಕುಲ ಫೌಂಡೇಶನ್, ಎಸ್ ಆರ್ ವಿಶ್ವನಾಥ್ ಸಹಯೋಗದೊಂದಿಗೆ ಆಯೋಜನೆ :
ಯಲಹಂಕ : ಲೋಕ ಕಲ್ಯಾಣ, ಮುಕ್ತಿ ಮಾರ್ಗ ಮತ್ತು ಶುದ್ಧ ಚಿಂತನೆ ಪ್ರಾಪ್ತಿಗಾಗಿ ಅಘನ್ಯಾ ಗುರುಕುಲ ಫೌಂಡೇಶನ್ ಮತ್ತು ಶಾಸಕ ಎಸ್ ಆರ್ ವಿಶ್ವನಾಥ್ ಅವರ ಸಹಯೋಗದೊಂದಿಗೆ ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ಭಾನುವಾರ ಪ್ರಾತಃ ಕಾಲದಲ್ಲಿ ಆಯೋಜಿಸಿದ್ದ 2100 ಯಜ್ಞ ಕುಂಡಗಳ ವಿಹಂಗಮ ಯೋಗ, ವೈದಿಕ ಮಹಾಯಜ್ಞ ಮತ್ತು ಧ್ಯಾನ ಸಾಧನೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಬೆಳಿಗ್ಗೆ 6.03 ಗಂಟೆಗೆ ಆರಂಭವಾದ ವಿಹಂಗಮ ಯೋಗ ಮತ್ತು ವೈದಿಕ ಮಹಾಯಜ್ಞವು 9.30ರವರೆಗೂ ನಡೆಯಿತು.
ಬೃಹತ್ ಮೈದಾನದಲ್ಲಿ 2100 ಜನರಿಗೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಯಜ್ಞಕುಂಡಗಳನ್ನು ನಿರ್ಮಿಸುವ ಮೂಲಕ ವೈದಿಕ ಮಹಾಯಜ್ಞಕ್ಕೆ ವಿಶೇಷತೆಯ ಮೆರಗು ನೀಡಲಾಗಿತ್ತು.
ವಾರಣಾಸಿಯ ಸ್ವರ್ವೇದ ಮಹಾ ಮಂದಿರ ಧಾಮದ ಸದ್ಗುರು ಶ್ರೀ ಸ್ವತಂತ್ರ ದೇವ ಜೀ ಮಹರಾಜ್ ಮತ್ತು ಸಂತ ಪ್ರವರ ಶ್ರೀ ವಿಜ್ಞಾನ ದೇವ ಜೀ ಮಹರಾಜ ಇವರು ವಿಹಂಗಮ ಯೋಗದ ಸಾನಿಧ್ಯ ವಹಿಸಿ, ಮಹಾಯಜ್ಞದ ಪರಿಕ್ರಮವನ್ನು ನೆರವೇರಿಸಿಕೊಟ್ಟರು.
ಶಾಸಕ ಎಸ್ ಆರ್ ವಿಶ್ವನಾಥ್, ಡಾ.ವಾಣಿಶ್ರೀ ವಿಶ್ವನಾಥ್ ದಂಪತಿಗಳು ವಿಹಂಗಮ ಯೋಗ ಮತ್ತು ವೈದಿಕ ಯಜ್ಞದಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಂಡು, ಯಜ್ಞಕುಂಡಕ್ಕೆ ಅವಿಸ್ಸು ಅರ್ಪಿಸಿದರು.
ನಂತರ ಮಾತನಾಡಿದ ಅವರು ‘ಇದೊಂದು ಅವಿಸ್ಮರಣೀಯ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಲೋಕಕಲ್ಯಾಣ, ಶಾಶ್ವತ ಶಾಂತಿ, ಶುದ್ಶ ಚಿಂತನೆ ಮತ್ತು ಮುಕ್ತಿ ಮಾರ್ಗ ಪ್ರಾಪ್ತಿ ಈ ವಿಹಂಗಮ ಯೋಗ ಮತ್ತು ವೈದಿಕ ಯಜ್ಞದ ಉದ್ದೇಶವಾಗಿದ್ದು, ವಾರಣಾಸಿಯ ಸ್ವರ್ವೇದ ಮಹಾ ಮಂದಿರ ಧಾಮದ ಸದ್ಗುರು ಶ್ರೀ ಸ್ವತಂತ್ರ ದೇವ ಜೀ ಮಹರಾಜ್ ಮತ್ತು ಸಂತ ಪ್ರವರ ಶ್ರೀ ವಿಜ್ಞಾನ ದೇವ ಜೀ ಮಹರಾಜ ಇವರು ವಿಹಂಗಮ ಯೋಗದ ಸಾನಿಧ್ಯ ವಹಿಸಿ, ಮಹಾಯಜ್ಞದ ವಿಧಿ ವಿಧಾನಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಸಿಕೊಟ್ಟಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಯಲಹಂಕ ಕ್ಷೇತ್ರ, ರಾಜ್ಯ ಮತ್ತು ದೇಶದ ಜನತೆಗೆ ಒಳಿತಾಗಬೇಕೆಂಬ ಮಹತ್ವದ ಉದ್ದೇಶದಿಂದ ಆಯೋಜಿಸಲಾಗಿದೆ. ಮಹತ್ವದ ಈ ಕಾರ್ಯಕ್ರಮದಲ್ಲಿ ಯಲಹಂಕ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಸಹಸ್ರಾರು ಮಂದಿ ನಾಗರೀಕರು ಆಗಮಿಸಿ, ಭಕ್ತಿಪೂರ್ವಕವಾಗಿ ಪಾಲ್ಗೊಂಡಿರುವುದು ಸಂತೋಷ ಮತ್ತು ಹೆಮ್ಮೆಯ ಸಂಗತಿ ಸರ್ವರಿಗೂ ಒಳಿತಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್, ಯಲಹಂಕ ಕ್ಷೇತ್ರದ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್ ಎನ್ ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ರಾಮಮೂರ್ತಿ, ಮಂಜುನಾಥ್, ಚೊಕ್ಕನಹಳ್ಳಿ ವೆಂಕಟೇಶ್, ಸತೀಶ್ ಕಡತನಮಲೆ, ಟಿ.ಮುನಿರೆಡ್ಡಿ, ಎಸ್.ಜಿ.ಪ್ರಶಾಂತ್ ರೆಡ್ಡಿ, ಎಸ್.ಜಿ.ನರಸಿಂಹ ಮೂರ್ತಿ(ಎಸ್.ಟಿ.ಡಿ.ಮೂರ್ತಿ), ಕೆ.ಆರ್.ತಿಮ್ಮೇಗೌಡ, ಆವಲಹಳ್ಳಿ ಕೇಶವಮೂರ್ತಿ, ನಾಗೇನಹಳ್ಳಿ ಶಿವಕುಮಾರ್, ರಾಜಾನುಕುಂಟೆ ಶ್ರೀನಿವಾಸ್, ಸಿಂಗನಾಯಕನಹಳ್ಳಿ ಮಲ್ಲೇಶ್, ಮುನಿಕೃಷ್ಣ, ಕೆ.ಬಾಬು ಸೇರಿದಂತೆ ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಬಿಜೆಪಿ ಮುಖಂಡರಿದ್ದರು.