





‘ವಿಶ್ವವಾಣಿ’ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ :
ಮೈಲಪ್ಪನಹಳ್ಳಿ ಗ್ರಾಮದಲ್ಲಿ ಆಯೋಜನೆ :
ಯಲಹಂಕ : ‘ವಿಶ್ವವಾಣಿ’ ಫೌಂಡೇಶನ್ ವತಿಯಿಂದ ಸಪ್ತಗಿರಿ ಆಸ್ಪತ್ರೆಯ ಸಹಯೋಗದೊಂದಿಗೆ ಕ್ಷೇತ್ರದ ಮೈಲಪ್ಪನಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಫೌಂಡೇಶನ್ ಯಲಹಂಕ ಶಾಸಕರು, ವಿಶ್ವವಾಣಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ್, ಕಾರ್ಯದರ್ಶಿ ವಾಣಿಶ್ರೀ ವಿಶ್ವನಾಥ್ ಉದ್ಘಾಟಿಸಿದರು.
ನಂತರ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಕ್ಷೇತ್ರದ ಜನತೆಯ ಆರೋಗ್ಯದ ಕಾಳಜಿಯ ದಿಸೆಯಲ್ಲಿ ವಿಶ್ವವಾಣಿ ಫೌಂಡೇಶನ್ ವತಿಯಿಂದ ಮೈಲಪ್ಪನಹಳ್ಳಿ ಗ್ರಾಮದಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು, ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಸಾಮಾನ್ಯ ತಪಾಸಣೆ, ಇಸಿಜಿ, ದಂತ, ಮೂಳೆ, ಸ್ತ್ರೀ ರೋಗ ತಪಾಸಣೆ, ಆಪರೇಷನ್ ಗೆ ನೆರವು, ಅಗತ್ಯವಿರುವವರಿಗೆ ಕನ್ನಡಕಗಳ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ನೆರವು ಸೇರಿದಂತೆ ವಿವಿಧ ರೀತಿಯ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಆರೋಗ್ಯ ಎಂಬುದು ಸವಾಲಿನ ವಿಷಯವಾಗಿದೆ, ಜನತೆ ಇದನ್ನು ಮನಗಂಡು ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿದ್ದಾಗಲೇ ತಪಾಸಣೆಗೆ ಒಳಗಾಗಿ ಆರೋಗ್ಯವನ್ನು ಸರಿದಾರಿಗೆ ತಂದುಕೊಳ್ಳಬೇಕು. ರೋಗ ಅಂತಿಮ ಹಂತ ತಲುಪಿದಾಗ ತಪಾಸಣೆಗೆ ಒಳಗಾಗದರೆ ಆರ್ಥಿಕ ಹೊರೆಯ ಜೊತೆಗೆ ಪ್ರಯೋಜನಕಾರಿ ಆಗುವುದಿಲ್ಲ, ಈ ನಿಟ್ಟಿನಲ್ಲಿ ಜನತೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ವಿಶ್ವವಾಣಿ ಫೌಂಡೇಶನ್ ನ ಕಾರ್ಯದರ್ಶಿ, ಸಿಂಗನಾಯಕನ ಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್ ಮಾತನಾಡಿ ‘ಕ್ಷೇತ್ರದ ಆರ್ಥಿಕ ದುರ್ಬಲ ವರ್ಗದ ಜನತೆಯ ಆರೋಗ್ಯ ಕಾಳಜಿ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ನೀಡುವ ಮೂಲಕ ಬಡ ಜನರ ಸ್ವಾವಲಂಬಿ ಬದುಕಿಗೆ ಸಹಕರಿಸುವ ಮಹತ್ವದ ಉದ್ದೇಶಕ್ಕಾಗಿಯೇ ‘ವಿಶ್ವವಾಣಿ’ ಫೌಂಡೇಶನ್ ನ್ನು ಸ್ಥಾಪಿಸಲಾಗಿದ್ದು, ಇದರ ಮೂಲಕ ಉಚಿತ ಆರೋಗ್ಯ ಶಿಬಿರಗಳ ಆಯೋಜನೆ, ಮಹಿಳೆಯರಿಗೆ ಹೊಲಿಗೆ ತರಬೇತಿ, ಬ್ಯುಟೀಷಿಯನ್ ತರಬೇತಿ, ಹೊಲಿಗೆ ಯಂತ್ರಗಳ ವಿತರಣೆ ಸೇರಿದಂತೆ ಆರ್ಥಿಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅಗತ್ಯ ನೆರವು ನೀಡುವ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಕೈಗೊಳ್ಳುತ್ತಾ ಬಂದಿದ್ದು, ಮೈಲಪ್ಪನಹಳ್ಳಿ ಗ್ರಾಮದಲ್ಲಿಂದು ಏರ್ಪಡಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕೈಗೊಳ್ಳಲ್ಲಿದ್ದು, ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಗಿದೆ ಎಂದರು.
ಆರೋಗ್ಯ ಶಿಬಿರದ ಅಂಗವಾಗಿ ರಕ್ತದಾನ ಶಿಬಿರ, ಉಚಿತ ಕನ್ನಡಕ ವಿತರಣೆ, ಔಷದಿ ವಿತರಣೆ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮುಂತಾದ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವವಾಣಿ ಫೌಂಡೇಶನ್ ನಿರ್ದೇಶಕರು, ಬಿಜೆಪಿ ಯುವ ಮುಖಂಡರಾದ ಅಲೋಕ್ ವಿಶ್ವನಾಥ್, ಯಲಹಂಕ ಗ್ರಾ.ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಿಂಗನಾಯಕನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ಹೇಮಂತ್ ಕುಮಾರ್, ಬೆಂ.ಡೈರಿ ಮಾಜಿ ನಿರ್ದೇಶಕ ಮಾದಪ್ಪನಹಳ್ಳಿ ವಿಜಯಕುಮಾರ್, ಗ್ರಾ.ಪಂ.ಸದಸ್ಯರಾದ ಪದ್ಮಶ್ರೀ ನಾಗರಾಜ್ ರೆಡ್ಡಿ, ಶೋಭಾ ಗೋಪಾಲ್, ಹರೀಶ್, ಚೈತ್ರ ಕೆಂಪೇಗೌಡ, ಸುಧಾರಣಿ ಸೇರಿದಂತೆ ಸಪ್ತಗಿರಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಗಳಿದ್ದರು.