









ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರ ಹಾಕಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ :
ಬ್ಯಾಟರಾಯನಪುರ : ಭಯೋತ್ಪಾದನೆ, ಉಗ್ರಗಾಮಿ ಚಟುವಟಿಕೆಯಂತಹ ವಿನಾಶಕಾರಿಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪಾಕಿಸ್ಥಾನ ಮೊದಲ ಸ್ಥಾನದಲ್ಲಿದೆ, ಅವರಿಗೆ ವಿಜ್ಞಾನ, ತಂತ್ತಜ್ಞಾನದಂತಹ ಅಭಿವೃದ್ಧಿ ಪರವಾದ ಉತ್ಪನ್ನಗಳ ರಪ್ತಿಗಿಂತ ಭಯೋತ್ಪಾದನೆಯ ರಪ್ತಿನಲ್ಲೇ ಅತೀವ ಆಸಕ್ತಿ, ಪಾಕಿಸ್ತಾನದ ಈ ರೀತಿಯ ಡೋಲಾಯಮಾನ ಆರ್ಥಿಕ ಸ್ಥಿತಿಗೆ ಭಯೋತ್ಪಾದನೆಯೇ ಮೂಲಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಟರಾಯನಪುರ ಕ್ಷೇತ್ರ ಬಿಜೆಪಿ ವತಿಯಿಂದ, ಬಿಜೆಪಿ ಮುಖಂಡ ತಮ್ಮೇಶ್ ಗೌಡ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ‘ದೇಶಕ್ಕಾಗಿ ನಡಿಗೆ’ ವಾಕಥಾನ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಭಾರತ ಶಾಂತಿಪ್ರಿಯ ದೇಶ, ಇನ್ನೊಂದು ದೇಶದ ಮೇಲೆ ದಂಡೆತ್ತಿ ಹೋಗಿ ಆಕ್ರಮಣಕಾರಿ ಮನೋಭಾವ ತೋರಿರುವ ಯಾವ ಉದಾಹರಣೆಗಳು ನಮ್ಮ ಇತಿಹಾಸದ ಪುಟದಲ್ಲಿಲ್ಲ. ಇಂತಹ ಶಾಂತಿಪ್ರಿಯ ಪ್ರಜೆಗಳ ಮೇಲೆ ಧರ್ಮವನ್ನು ಕೇಳಿ ಗುಂಡಿಟ್ಟು ಕೊಂದಿರುವುದು ಮಾನವೀಯತೆಯ ಪರಮಾವಧಿ, ಇದೀಗ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಗೆ ಪಾಕಿಸ್ಥಾನವೇ ಕಾರಣ. ಅಮಾಯಕರನ್ನು ಕೊಂದ ಪಾಪದ ಫಲವನ್ನು ಪಾಕಿಸ್ತಾನ ಇದೀಗ ಉಣ್ಣುತ್ತಿದೆ.
ಯುದ್ಧದ ಹೊಸ್ತಿಲಲ್ಲಿರುವ ದೇಶದ ಇಂತಹ ವಿಷಮ ಪರಿಸ್ಥಿತಿಯಲ್ಲಿ ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವು ಧರ್ಮ, ಜಾತಿ, ಪಕ್ಷ ಭೇದ ಮರೆತು ದೇಶ ಮತ್ತು ನಮ್ಮ ಯೋಧರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ದೇಶದ ಆಡಳಿತ ವ್ಯವಸ್ಥೆ ಮತ್ತು ದೇಶದ ಪ್ರಜೆಗಳು ನಮ್ಮ ಕುಟುಂಬಗಳನ್ನು ಕಾಪಾಡುತ್ತಾರೆ ಎಂಬ ಅಪರಿಮಿತ ವಿಶ್ವಾಸದೊಂದಿಗೆ ನಮ್ಮ ಸೈನಿಕರು ಗಡಿಯಲ್ಲಿ ನಿಂತು ದೇಶಕ್ಕಾಗಿ ಹೋರಾಡುತ್ತಿದ್ದಾರೆ ಎಂದರು.
ಕದನ ವಿರಾಮ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಭಾರತದ ಮೇಲೆ ಡ್ರೋನ್ ಮತ್ತು ಮಿಸೈಲ್ ದಾಳಿ ನಡೆಸುವ ಮೂಲಕ ಪಾಕಿಸ್ತಾನ ತಾನೊಂದು ವಿಶ್ವಾಸ ಘಾತಕ ದೇಶ ಎಂಬುದನ್ನು ಸಾಬೀತು ಪಡಿಸಿದೆ. ಅವರನ್ನು ನಮ್ಮ ಯೋಧರು ಕ್ಷಮಿಸುವುದಿಲ್ಲ. ಯುದ್ಧ ಭಾರತದ ಉದ್ದೇಶವಲ್ಲ, ನಮ್ಮ ದೇಶದ ಅಮಾಯಕ ಪ್ರಜೆಗಳನ್ನು ಧರ್ಮವನ್ನು ಕೇಳಿ ಕೊಂದ ಉಗ್ರರನ್ನು ಅವರ ತಾಣದಲ್ಲೇ ಹೋಡೆದು ಉರುಳಿಸುವುದಷ್ಟೇ ನಮ್ಮ ಗುರಿ, ಈ ದೆಸೆಯಲ್ಲಿ ಹೋರಾಟ ಅನಿವಾರ್ಯ, ಇಂತಹ ವೇಳೆಯಲ್ಲಿ ನಾವು ನಮ್ಮ ದೇಶದೊಟ್ಟಿಗೆ, ನಮ್ಮ ಯೋಧರೊಟ್ಟಿಗೆ ನಿಲ್ಲಬೇಕಿದೆ ಎಂದರು.
ಬಿಜೆಪಿ ಮುಖಂಡ ಎಚ್.ಸಿ.ತಮ್ಮೇಶ್ ಗೌಡ ಮಾತನಾಡಿ ‘ಕದನ ವಿರಾಮ ಉಲ್ಲಂಘನೆಯ ಮೂಲಕ ಪಾಕಿಸ್ತಾನ ರಣಹೇಡಿತನ ತೋರಿದೆ, ಇದಕ್ಕೆ ನಮ್ಮ ಯೋಧರು ತಕ್ಕ ಶಾಸ್ತಿ ಮಾಡಲಿದ್ದಾರೆ. ಧರ್ಮದ ಅಂಧಕಾರದಲ್ಲಿ ಮುಳುಗಿರುವ ಪಾಕಿಸ್ತಾನವನ್ನು ಜಗತ್ತಿನ ಯಾವ ದೇಶವೂ ಬೆಂಬಲಿಸುವುದಿಲ್ಲ, ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ ಉಗ್ರರಿಂದಲೇ ವಿನಾಶವಾಗಲಿದೆ. ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪೌರುಷ ತೋರಿ ಕೊಂದಿರುವ ಪಾಕಿಸ್ತಾನದ ಉಗ್ರರಿಗೆ ನಮ್ಮ ಯೋಧರು ಅವರಿದ್ದ ಜಾಗದಲ್ಲೇ ಹುಡುಕಿ ಕೊಲ್ಲುತ್ತಿದ್ದಾರೆ, ಈ ವೇಳೆಯಲ್ಲಿ ನಮ್ಮ ದೇಶ ಮತ್ತು ನಮ್ಮ ಯೋಧರೊಟ್ಟಿಗೆ ಇರಬೇಕಾದುದು ನಮ್ಮ ಧರ್ಮ ಮತ್ತು ಕರ್ತವ್ಯವಾಗಿದೆ ಎಂದರು.
ವಿದ್ಯಾರಣ್ಯಪುರದ ಎನ್.ಟಿ.ಐ.ಮೈದಾನದಿಂದ ತಿರಂಗ ಹಿಡಿದು ಪಾದಯಾತ್ರೆ ಮೂಲಕ ಸಾಗಿದ ಸಾವಿರಾರು ಬಿಜೆಪಿ ಕಾರ್ಯಕರ್ತರು ಸಹಕಾರನಗರದ ವಿನಾಯಕ ದೇವಸ್ಥಾನದ ಬಳಿ ಪಾದಯಾತ್ರೆಯನ್ನು ಪೂರ್ಣಗೊಳಿಸಿದರು. ಪಾದಯಾತ್ರೆ ವೇಳೆ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ದೇಶದೊಟ್ಟಿಗೆ ಮತ್ತು ಯೋಧರೊಟ್ಟಿಗೆ ಇರುವ ಸಂಕಲ್ಪ ಮಾಡಿದರು.
‘ದೇಶಕ್ಕಾಗಿ ನಡಿಗೆ’ಯ ವಾಕಥಾನ್ ನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ನಿವೃತ್ತ ಏರ್ ಮಾರ್ಚಲ್ ಪಿ.ವಿ.ಸಿಂಗ್, ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಹಿರಿಯ ಬಿಜೆಪಿ ಮುಖಂಡರಾದ ಪಿ.ಕೆ.ರಾಜಗೋಪಾಲ್, ನಂದಿನಿ ಶ್ರೀನಿವಾಸ್, ವೆಂಕಟೇಶ್, ಬ್ಯಾಟರಾಯನಪುರ ಗ್ರಾ.ಮಂಡಲ ಯುವ ಮೋರ್ಚಾ ಅಧ್ಯಕ್ಷ ತಿಮ್ಮೇಗೌಡ, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ, ವಿಶ್ವ ಹಿಂದೂ ಪರಿಷತ್ ನ ಮಂಜುನಾಥಸ್ವಾಮಿ, ಬಿಜೆಪಿ ಮುಖಂಡರಾದ ಎನ್ ನರಸಿಂಹಮೂರ್ತಿ ಅನಿಲ್ ಕಟ್ಟಿಗೆನಹಳ್ಳಿ ಪುಟ್ಟರಾಜು, ಆನಂದ್ ಮಾಸ್ಟರ್ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರಿದ್ದರು.