ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ರೈತ ಸಂಘದ ಪ್ರತಿಭಟನೆ :

ಯಲಹಂಕ : ಯಲಹಂಕ ಕ್ಷೇತ್ರ ವ್ಯಾಪ್ತಿಯ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಅವರ ನೇತೃತ್ವದಲ್ಲಿ ಕ್ಷೇತ್ರದ ಕಾರ್ಲಾಪುರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೆಟ್ಟಹಲಸೂರು ನಂಜುಂಡಪ್ಪ ಮಾತನಾಡಿ ‘ಯಲಹಂಕ ಕ್ಷೇತ್ರ ವ್ಯಾಪ್ತಿಯ ಸೊಣ್ಣೇನಹಳ್ಳಿ ಗ್ರಾಮದ ಸರ್ವೇ ನಂಬರ 72 ರಿಂದ 139 ರಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದ್ದರೂ ಸಹ ಇದುವರೆಗೂ ರೈತರಿಗೆ ಸಾಗುವಳಿ ಚೀಟಿ ನೀಡಲಾಗಿಲ್ಲ. ರೈತರು ತಮ್ಮ ಜಮೀನುಗಳಿಗೆ ತೆರಳುವ ಕಾಲುದಾರಿಗಳು, ಬಂಡಿದಾರಿಗಳು ಒತ್ತುವರಿಯಾಗಿವೆ ಇವುಗಳನ್ನು ತೆರವುಗೊಳಿಸಿ ರೈತರು ತೆರಳಲು ಅನುವು ಮಾಡಿಕೊಡವ ಕುರಿತು‌ ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ಪ್ರಯೋಜನ ವಾಗಿಲ್ಲ. ಯಲಹಂಕ ತಾಲೂಕಿನ ರೈತರ ಇತರೆ ಸಮಸ್ಯೆಗಳಾದ ಫಾರಂ 50 ಹಾಗೂ 53ರನ್ನು ಸಲ್ಲಿಸಿ, ಅಕ್ರಮ-ಸಕ್ರಮ ಸಮಿತಿಯು ಮಂಜೂರು ಮಾಡಿರುವ ಜಮೀನುಗಳನ್ನು ಪೋಡಿ ಮಾಡಿಕೊಡುವುದು ಹಲವು ದಿನಗಳಿಂದ ಬಾಕಿ ಉಳಿದಿದೆ. ಬೆಟ್ಟಹಲಸೂರು ಗ್ರಾಮದಲ್ಲಿ ಮೆಟ್ರೋ ರೈಲ್ವೆ ನಿಲ್ದಾಣ ನಿರ್ಮಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರಕ್ಕೆ ಮನವಿ ಮಾಡಿಕೊಂಡಿ ದ್ದರೂ ಬೇಡಿಕೆ ಈಡೇರಿಸುವ ದಿಸೆಯಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ. ತಾಲ್ಲೂಕಿನ ಹಲವು ಗ್ರಾಮಗಳ ರಾಜ ಕಾಲುವೆಗಳು, ಕಾಲುದಾರಿಗಳ ಒತ್ತುವರಿ ತೆರವಿಗೆ ಮನವಿ ಸಲ್ಲಿಸಿದ್ದರೂ ಅಗತ್ಯ ಕ್ರಮ ಕೈಗೊಂಡಿಲ್ಲ, ಇದೇ ರೀತಿಯ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರೈತರ ಸಭೆ ಕರೆಯುವಂತೆ ಯಲಹಂಕ ತಹಶಿಲ್ದಾರ್ ಅವರಿಗೆ ಮನವಿ ಮಾಡಿ ಹಲವು ದಿನಗಳೇ ಕಳೆದಿವೆ ಇದುವರೆಗೂ ಸಭೆ ಕರೆದು ರೈತರ ಸಮಸ್ಯೆಗಳನ್ನು ಆಲಿಸುವ ಕನಿಷ್ಟ ಪ್ರಯತ್ನಗಳೂ ನಡೆದಿಲ್ಲ ಎಂದ ಅವರು ರೈತರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ವಿನೋದ್ ಕುಮಾರ್ ಗೌಡ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕಾರ್ಲಾಪುರ ಅಂಜನಾಮೂರ್ತಿ (ದೇವೇಗೌಡ), ಕಾರ್ಲಾಪುರ ಗ್ರಾಮದ ರೈತ ಮುಖಂಡರಾದ ಲೋಕೇಶ್, ಕೃಷ್ಣಯ್ಯ, ಆಂಜನೇಯ ಸೇರಿದಂತೆ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *