





ವಿಜೃಂಭಣೆಗೆ ಸಾಕ್ಷಿಯಾದ ಯಲಹಂಕ ಮಹೇಶ್ವರಮ್ಮದೇವಿ ಕರಗ :
ದೇವಿಗೆ ವಿಶೇಷ ಫೂಜೆ ಸಲ್ಲಿಸಿ ಕೃಪೆಗೆ ಪಾತ್ರರಾದ ಶಾಸಕ ಎಸ್ ಆರ್ ವಿಶ್ವನಾಥ್
ಯಲಹಂಕ : ಯಲಹಂಕದ ಬಜಾರ್ ರಸ್ತೆಯಲ್ಲಿರುವ ಐತಿಹಾಸಿಕ ಮಹತ್ವದ ಶ್ರೀ ಮಹೇಶ್ವರಮ್ಮದೇವಿ ಹೂವಿನ ಕರಗ ಮತ್ತು ಗ್ರಾಮ ದೇವತೆಗಳ ಹೂವಿನ ಪಲ್ಲಕ್ಕಿ ಉತ್ಸವ ಬುಧವಾರ ಮಧ್ಯರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಕರಗದ ಪ್ರಯುಕ್ತ ಶ್ರೀ ಮಹೇಶ್ವರಮ್ಮ ದೇವಿಗೆ ಮತ್ತು ಕರಗಕ್ಕೆ ವಿಶೇಷಪೂಜೆ ನೆರವೇರಿಸಲಾಯಿತು. ನಂತರ ಮಧ್ಯರಾತ್ರಿ 2 ಗಂಟೆಗೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ನಡುವೆ ಹೊರಟ ಮಹೇಶ್ವರಮ್ಮದೇವಿ ಕರಗ ಮತ್ತು ಗ್ರಾಮದ 24 ದೇವರುಗಳ ಹೂವಿನ ಪಲ್ಲಕ್ಕಿ ಉತ್ಸವ ಯಲಹಂಕದ ರಾಜಬೀದಿಯಲ್ಲಿ ವೈಭವದ ಮೆರವಣಿಗೆಯೊಂದಿಗೆ ಸಾಗಿತು. ಈ ವೇಳೆ ನೆರೆದಿದ್ದ ಸಹಸ್ರಾರು ಸಂಖ್ಯೆಯ ಭಕ್ತಜನ ಹರ್ಷೋದ್ಘಾರ ದೊಂದಿಗೆ ಕರಗದ ದರ್ಶನ ಪಡೆದರು.
ಕರಗ ಮಹೋತ್ಸವ ಮತ್ತು ಹೂವಿನ ಪಲ್ಲಕ್ಕಿ ಉತ್ಸವದಲ್ಲಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಪಾಲ್ಗೊಂಡು, ವಿಶೇಷ ಪೂಜೆ ಸಲ್ಲಿಸಿ ಮಹೇಶ್ವರಮ್ಮ ದೇವಿಯ ಕೃಪೆಗೆ ಪಾತ್ರರಾದರು.
ಈ ವೇಳೆ ಮಾತನಾಡಿದ ಅವರು ‘ಕರಗ, ಜಾತ್ರೆ, ಉತ್ಸವಗಳು ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಭಕ್ತಿಭಾವದ ಅಭಿವ್ಯಕ್ತಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಯಲಹಂಕದ ಶ್ರೀ ಮಹೇಶ್ವರಮ್ಮದೇವಿ ಕರಗಕ್ಕೆ ಅನಾದಿ ಕಾಲದ ಐತಿಹ್ಯವಿದ್ದು, ಬಹುಕಾಲದಿಂದಲೂ ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ. ಈ ಕರಗ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಕರಗ ಮಹೋತ್ಸವದ ಪ್ರಯುಕ್ತ ದೇವಿಗೆ ದೀಪದ ಆರತಿ, ಅಗ್ನಿಕುಂಡ ಹಾಯುವ ಕಾರ್ಯಕ್ರಮ ಸೇರಿದಂತೆ ವಿವಿಧ ದೇವತಾ ಕಾರ್ಯಗಳು ನೆರವೇರುತ್ತವೆ. ಬಾಲ್ಯದಿಂದಲೂ ಯಲಹಂಕದ ಕರಗವನ್ನು ನೋಡಿಕೊಂಡು ಬಂದಿದ್ದೇನೆ, ವೈಭವ, ವಿಜೃಂಭಣೆ ಇನ್ನೂ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಾಗಿಲ್ಲ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ಅಧ್ಯಕ್ಷ, ಮಹೇಶ್ವರಮ್ಮದೇವಿ ಕರಗ ಮಹೋತ್ಸವ ಸಮಿತಿ ಅಧ್ಯಕ್ಷ ಮು.ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರಿದ್ದರು.