‘ಆಪರೇಷನ್ ಸಿಂಧೂರ’ ಯಶಸ್ಸಿಗೆ ಸಂಭ್ರಮಾಚರಣೆ :

ವೀರ ಸೈನಿಕರಿಗೆ ಬೆಂಬಲ, ಆತ್ಮಸ್ಥೈರ್ಯ ತುಂಬಲು ಎಸ್ ಆರ್ ವಿಶ್ವನಾಥ್ ನೇತೃತ್ವದಲ್ಲಿ ಬೃಹತ್ ‘ತಿರಂಗಯಾತ್ರೆ’ :

ಯಲಹಂಕ : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ನಿರ್ಣಾಯಕ ಮಿಲಿಟರಿ ಕಾರ್ಯಾಚರಣೆ ” ಆಪರೇಷನ್ ಸಿಂಧೂರ್‌ “ನ ಯಶಸ್ಸನ್ನು ಆಚರಿಸಲು, ಭಾರತೀಯ ವೀರ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ಪಾಕಿಸ್ತಾನಕ್ಕೆ ಭಾರತದ ನಾಗರೀಕರ ಶಕ್ತಿಯನ್ನು ಪ್ರದರ್ಶಿಸಲು ಯಲಹಂಕದಲ್ಲಿ ಸೋಮವಾರ ಶಾಸಕ ಎಸ್ ಆರ್ ವಿಶ್ವನಾಥ್ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ “ತಿರಂಗಯಾತ್ರೆ” ಯಲ್ಲಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಸಹಸ್ರಾರು ಜನ ದೇಶಭಕ್ತ ನಾಗರೀಕರು ಪಾಲ್ಗೊಂಡು ಯಶಸ್ವಿಗೊಳಿಸಿದರು.

ಯಲಹಂಕ ಒಲ್ಡ್ ಟೌನ್ ನ ಅಂಚೆ ಕಚೇರಿಯ ಬಳಿಯಿಂದ 350 ಅಡಿ ಉದ್ದದ ಬೃಹತ್ ತಿರಂಗ ಧ್ವಜದೊಂದಿಗೆ, ನಿವೃತ್ತ ಸೈನಿಕರ ಮೊದಲ ಪಂಕ್ತಿಯಿಂದ ಆರಂಭವಾದ ತಿರಂಗಯಾತ್ರೆ ಯಲಹಂಕ ಪೊಲೀಸ್ ಠಾಣೆ ವೃತ್ತ, ಎನ್ ಇ ಎಸ್, ಶೇಷಾದ್ರಿಪುರಂ ಕಾಲೇಜು, ವಿಷ್ಣು ಪಾರ್ಕ್ ಹೋಟೆಲ್, ಚಿಕ್ಕಬೊಮ್ಮಸಂದ್ರ ಕ್ರಾಸ್, ಉಪನಗರ ಬಸ್ ನಿಲ್ದಾಣ ಮಾರ್ಗವಾಗಿ ಹೊಯ್ಸಳ ಕ್ರೀಡಾಂಗಣದವರೆಗೆ ಸಾಗಿತು.

ತಿರಂಗಯಾತ್ರೆಯಲ್ಲಿ ವಿಶೇಷವಾಗಿ ನಿವೃತ್ತ ಸೈನಿಕರು, ವಿದ್ಯಾರ್ಥಿಗಳು, ಯುವಕರು, ವರ್ತಕರು, ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ದೇಶಭಕ್ತ ನಾಗರೀಕರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡರು.

ಟತಿರಂಗಯಾತ್ರೆಯ ಮಾರ್ಗದುದ್ದಕ್ಕೂ ಭಾರತೀಯ ಸೈನಿಕರ ಪರಾಕ್ರಮದ ಪರವಾದ ಘೋಷಣೆಗಳು ಮೊಳಗಿದವು. ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ತಿರಂಗಯಾತ್ರೆ ಉದ್ದೇಶಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಪಹಲ್ಗಾಮ್ ನಲ್ಲಿ ಅಮಾಯಕ‌ ಪ್ರವಾಸಿಗರ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರಿಂದ ನಡೆದ ವಿಧ್ವಂಸಕ ಕೃತ್ಯ ಒಂದು ಹೇಯ್ಯಕೃತ್ಯವಾಗಿದ್ದು, ಇದೊಂದು ಕ್ಷಮೆಗೆ ಅನರ್ಹವಾದ ಕೃತ್ಯವಾಗಿದೆ.ಭಾರತೀಯ ನಾಗರೀಕರ ಮೇಲಿನ ಈ ಉಗ್ರರ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ಯಶಸ್ವಿ ದಾಳಿ ನಡೆಸಿ, ಧ್ವಂಸ ಮಾಡಿರುವುದು ಹುತಾತ್ಮರಾದ ನಮ್ಮ ನಾಗರೀಕರ ಆತ್ಮಗಳಿಗೆ ಶಾಂತಿ ದೊರಕಿಸಿದಂತಾಗಿದೆ.

ಹಲವು ದಿನಗಳ ಕಾಲ ನಡೆದ ಭಾರತೀಯ ಸೈನಿಕ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿದ್ದ ಬಹುತೇಕ ಉಗ್ರರ ತಾಣಗಳನ್ನು ನಮ್ಮ ಸೈನಿಕರು ವೀರಾವೇಶದಿಂದ ಹೋರಾಡಿ ಧ್ವಂಸ ಮಾಡಿದ್ದಾರೆ. ಈ ವೇಳೆ ಉಗ್ರರ ಅಡಗು ತಾಣಗಳನ್ನು ಹೊರತುಪಡಿಸಿ ಯಾರೊಬ್ಬ ನಾಗರೀಕರ‌ ಮೇಲೂ ನಮ್ಮ ಸೈನಿಕರು ದಾಳಿ ನಡೆಸಿಲ್ಲ. ಭಾರತೀಯ ಸೈನಿಕರ ಸಮಯೋಚಿತವಾದ ಈ ದಾಳಿಯನ್ನು ವಿಶ್ವದ ಹಲವು ದೇಶಗಳು ಕೊಂಡಾಂಡಿವೆ, ಆದರೆ ನಮ್ಮ ದೇಶದಲ್ಲೇ ಇರುವ ಕೆಲ ನಿಷ್ಪ್ರಯೋಜಕ ಜನ, ಮುಖಂಡರು ನಮ್ಮ ಸೈನಿಕರ ಈ‌ ವೀರೋಚಿತ ದಾಳಿಯ ಬಗ್ಗೆ ಅಪಸ್ವರದ ಮಾತುಗಳನ್ನಾಡಿ ಅವಮಾನಿಸುತ್ತಿರುವುದು ವಿಷಾದದ ಸಂಗತಿ. ಭಾರತದ ಅಖಂಡತ್ವ, ಭಾರತದ ಸೈನಿಕರ ವಿಚಾರ ಬಂದಾಗ ಜಾತಿ, ಧರ್ಮ, ರಾಜಕಾರಣ ಇವೆಲ್ಲವೂ ಕ್ಷುಲ್ಲಕ ವಿಚಾರಗಳು, ದೇಶದ ಮುಂದೆ ಬೆರಿನ್ಯಾವ ವಿಚಾರಗಳು ಸಹ ಶೂನ್ಯವಾಗಬೇಕು. ನಮ್ಮ ಸೈನಿಕರಿಗೆ ಬೆಂಬಲ ಮತ್ತು ಆತ್ಮಸ್ಥೈರ್ಯ ತುಂಬಲು ಹಾಗೂ ಪಾಪಿ ಪಾಕಿಸ್ತಾನಕ್ಕೆ ಭಾರತದ ನಾಗರೀಕ ಶಕ್ತಿ ಏನೆಂಬುದನ್ನು ತಿಳಿಸಲು ದೇಶದಾದ್ಯಂತ ತಿರಂಗಾ ಯಾತ್ರೆ ನಡೆಸುತ್ತಿದ್ದು, ಅಂತೆಯೇ ಯಲಹಂಕದಲ್ಲಿ ಇಂದು ತಿರಂಗಯಾತ್ರೆ ಆಯೋಜಿಸಿದ್ದು, ಈ ಯಾತ್ರೆಯಲ್ಲಿ ವಿವಿಧ ಪಕ್ಷಗಳು, ವಿವಿಧ ಸಂಘಟನೆಗಳು, ವರ್ತಕರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಾರ್ವಜನಿಕರು, ವ್ಯಾಪಾರಸ್ಥರು, ದೇಶಭಕ್ತ ನಾಗರೀಕರು ಪಕ್ಷ, ಜಾತಿ, ವರ್ಗ, ಧರ್ಮ ಭೇದ ಮರೆತು ದೇಶಕ್ಕಾಗಿ ಒಗ್ಗಟ್ಟಾಗಿ ಆಗಮಿಸಿರುವುದು ಸಂತೋಷ ಉಂಟು‌ ಮಾಡಿದೆ ಎಂದರು.

Leave a Reply

Your email address will not be published. Required fields are marked *