


ಯಲಹಂಕ : ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಯಲ್ಲಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ದಕ್ಷಿಣ ವಲಯ-2ರ ಸಿಬ್ಬಂದಿಗಳು ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದ ಅಡಿಯಲ್ಲಿ ಗುರುವಾರ ‘ಸ್ವಚ್ಛತಾ ಪಕ್ವಾಡ’ ಜಾಗೃತಿ ಜಾಥಾ ನಡೆಸುವ ಮೂಲಕ ಸ್ವಚ್ಛತೆಯ ಮಹತ್ವ ಕುರಿತು ಜನಜಾಗೃತಿ ಮೂಡಿಸಿದರು.
ಸ್ವಚ್ಛತಾ ಅಭಿಯಾನ ಕುರಿತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ದಕ್ಷಿಣ ಪ್ರಾಂತೀಯ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಆರ್.ಕೃಷ್ಣಕುಮಾರ್ ಮಾತನಾಡಿ ‘ಸ್ವಚ್ಛತೆ ನಮ್ಮ ಬದುಕಿನ ಬಹುಮುಖ್ಯ ಭಾಗವಾಗಬೇಕು. ಸ್ವಚ್ಛತೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಸ್ಥಿರವಾಗುವುದರ ಜೊತೆಗೆ ಸಾಮಾಜಿಕ ಸ್ವಾಸ್ತ್ಯ ನೆಲೆಸುತ್ತದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವತಿಯಿಂದ ‘ಸ್ವಚ್ಛತೆಯೇ ಸೇವೆ’ ಜನಜಾಗೃತಿ ನಡಿಗೆ ನಡೆಸುತ್ತಿರುವ ಬಗ್ಗೆ ಸಂತೋಷವಿದೆ. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಗಳ ಎಲ್ಲಾ ಕಚೇರಿಗಳಲ್ಲೂ ಸಹ ವರ್ಷದಲ್ಲಿ ಹಲವು ಬಾರಿ ಸ್ವಚ್ಛತಾ ನಡಿಗೆ ಕಾರ್ಯಕ್ರಮ ಆಯೋಜಿಸ ಲಾಗುತ್ತಿದ್ದು, ಈ ಮೂಲಕ ಜನಜಾಗೃತಿ ಮೂಡಿಸುತ್ತಾ ಬರಲಾಗುತ್ತಿದೆ. ಸ್ವಚ್ಛತೆ ಎಂಬುದು ಕೇವಲ ನಮ್ಮ ಮನೆಯ ಒಳಗಿದ್ದರೆ ಸಾಲದು, ನಮ್ಮ ಮನೆಯ ಅಕ್ಕಪಕ್ಕ,, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು, ಇದರಿಂದ ನಮ್ಮ ಗ್ರಾಮ ಸ್ವಚ್ಛವಾಗಿರುತ್ತದೆ. ಇದೇ ರೀತಿ ದೇಶದ ಎಲ್ಲಾ ಗ್ರಾಮಗಳು ಸ್ವಚ್ಛವಾಗಿದ್ದರೆ ಇಡೀ ದೇಶವೇ ಸ್ವಚ್ಛವಾಗಿರುತ್ತದೆ, ತನ್ಮೂಲಕ ದೇಶದ ಜನತೆಯ ಆರೋಗ್ಯ ಸುರಕ್ಷಿತವಾಗಿರುತ್ತದೆ. ಈ ದಿಸೆಯಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಇದರ ಹೊರತಾಗಿ ‘ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ’ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಕೊಡುಗೆ, ಸರ್ಕಾರಿ ಶಾಲೆಗಳಿಗೆ ಶೌಚಾಲಯ ನಿರ್ಮಿಸಿ ಕೊಡುವುದು ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ಸ್ವಚ್ಛತೆಯ ಮಹತ್ವ ಕುರಿತು ಜನಜಾಗೃತಿ ಮೂಡಿಸುವ ಈ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಸಿಬ್ಬಂದಿಗಳಿಗೆ ಸುರಕ್ಷತಾ ಸಲಕರಣೆಗಳ ಕಿಟ್ ವಿತರಣೆ ಮಾಡಲಾಯಿತು. ಸ್ವಚ್ಛತಾ ನಡಿಗೆಯ ಈ ಕಾರ್ಯಕ್ರಮದಲ್ಲಿ ಪವರ್ ಗ್ರಿಡ್ ಸಂಸ್ಥೆಯ ಬೆಂಗಳೂರು ಕಚೇರಿಯ ಮುಖ್ಯ ವ್ಯವಸ್ಥಾಪಕ ಜಿ.ಎಸ್.ಆರ್.ರಾವ್, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ತನ್ವೀರ್ ಎಂ., ಸೇರಿದಂತೆ ಕಚೇರಿಯ ಸಿಬ್ಬಂದಿಗಳಿದ್ದರು.