ಯಾರಿಗಾಗಿ ನಾವು ನಮಗಾಗಿ ಯಾರು “

ಒಂದು ದೇಶ ಅಭಿವೃದ್ಧಿಯಾಗಿ ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗಬೇಕಾದರೆ ಆ ದೇಶಕ್ಕೆ ಸಮೃದ್ಧವಾದ ಯುವಶಕ್ತಿಯ ಅಗತ್ಯತೆ ಅವಶ್ಯವಾದದ್ದು.ಯಾವ ದೇಶವು ಅತಿ ಹೆಚ್ಚು ಯುವಕರನ್ನ ಹೊಂದಿರುತ್ತದೆಯೋ ಆ ದೇಶದ ಬೆಳವಣಿಗೆಯ ವೇಗವು ಅಧಿಕವಾಗಿರುತ್ತದೆ. ಯುವಕರಿಂದಲೇ ಕೂಡಿದ ದೇಶವನ್ನು ಎದುರು ಹಾಕಿಕೊಳ್ಳಲು ಜಗತ್ತಿನ ಬಲಿಷ್ಠ ರಾಷ್ಟ್ರಗಳು ಸಹ ಸಾಮಾನ್ಯವಾಗಿ ಹೆದರುತ್ತವೆ. ಯುವ ಸಮುದಾಯ ಮನಸ್ಸು ಮಾಡಿದರೆ ಕ್ಷಣಮಾತ್ರದಲ್ಲಿಯೇ ಒಂದು ರಾಷ್ಟ್ರದ ದಿಕ್ಕನ್ನೇ ಬದಲಿಸಬಲ್ಲದು. ಅಂತಹ ಜಗತ್ತಿನ ಅತ್ಯಧಿಕ ಯುವಸಮುದಾಯವನ್ನು ಹೊಂದಿದ ರಾಷ್ಟ್ರ ಅದು ಭಾರತ. ನಮ್ಮ ದೇಶದಲ್ಲಿರುವಷ್ಟು ತರುಣಶಕ್ತಿ ಮತ್ತೆಲ್ಲಿಯೂ ಸಿಗಲಾರದು. ಅದರಿಂದಲೇ ನಮ್ಮ ದೇಶದ ದುಡಿಯುವ ಶಕ್ತಿ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ, ಬೇಡಿಕೆಯ ದರ ಏರುತ್ತಿದೆ, ಕೊಳ್ಳುವ ಸಾಮರ್ಥ್ಯ ಅಧಿಕವಾಗಿದೆ. ಇದೇ ಕಾರಣದಿಂದಲೇ ವಿಶ್ವದ ದೃಷ್ಟಿಯಲ್ಲಿ ಭಾರತ ಬಹುದೊಡ್ಡ ಮಾರುಕಟ್ಟೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಈ ದೇಶದ ತರುಣರ ಪರಾಕ್ರಮಗಳಿಗೆ ಸುಧೀರ್ಘವಾದ ಇತಿಹಾಸವೇ ಇದೆ. ಇಲ್ಲಿನ ಸಣ್ಣಪುಟ್ಟ ಸೈನ್ಯಗಳು ಜಗತ್ತಿನ ಮಹಾನ್ ಸಾಮ್ರಾಟ ವಿರಾಟರೇಣಿಸಿಕೊಂಡ ರಾಜ ಮಹಾರಾಜರ ಬಲಾಡ್ಯ ಸೈನ್ಯಗಳನ್ನೇ ಸೋಲಿಸಿದ ಚರಿತ್ರೆ ಇದೆ. ತಮ್ಮ ಆಸೆ ಆಕಾಂಕ್ಷೆಗಳು ಮೊಳಕೆ ಹೊಡೆಯುವ ವಯಸ್ಸಿನಲ್ಲಿಯೇ ತಾಯಿ ಭಾರತೀಯ ಸ್ವತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸಹಸ್ರಾರು ಯವರತ್ನಗಳನ್ನು ಹೊಂದಿದ ಪುಣ್ಯಭೂಮಿ ಇದು. ಯೌವನ ಎನ್ನುವ ಅದೊಂದು ಕಾಲವೇ ಒಬ್ಬ ವ್ಯಕ್ತಿಯ ಜೀವನದಲ್ಲಿ ಬಹುಮುಖ್ಯವಾದ ಪಾತ್ರವಹಿಸುತ್ತದೆ.ಯಾವ ವ್ಯಕ್ತಿಯೂ ಆ ಸಮಯವನ್ನ ಸದುಪಯೋಗಪಡಿಸಿಕೊಂಡು ಸದ್ವಿಚಾರದ ಕಡೆಗೆ ನಡೆಯುತ್ತಾನೆಯೋ ಅವನ ಬದುಕು ಸುಂದರ ಪಥದಲ್ಲಿ ಸಾಗುತ್ತದೆ. ಆತನಿಂದ ಆತನ ರಾಷ್ಟ್ರದ ಭವಿಷ್ಯವು ಉಜ್ವಲವಾಗುತ್ತದೆ. ಇನ್ನು ಯಾವ ವ್ಯಕ್ತಿಯು ತನ್ನ ತಾರುಣ್ಯವನ್ನು ಆಮಿಷ,ಆಲಸ್ಯ, ಅಮಲು, ಅಹಲ್ಲಾದಕ್ಕಾಗಿ ವ್ಯರ್ಥ ಮಾಡುತ್ತಾನೆಯೋ ಅಂತವನಿಂದ ಆತನ ರಾಷ್ಟ್ರಕ್ಕೆ ಯಾವ ರೀತಿಯೂ ಪ್ರಯೋಜನವಾಗಲಾರದು ಬದಲಾಗಿ ಅಂತವನಿಗೆ ಬದುಕಲು ಅವಕಾಶ ಮಾಡಿಕೊಟ್ಟ ತನ್ನ ದೌರ್ಭಾಗ್ಯದಿಂದ ಅದು ದಿವಾಳಿಯತ್ತ ಸಾಗುವುದು. ನಾವು ಒಂದು ಸುಸರ್ಜಿತ ಸಮಾಜದಲ್ಲಿ ಬೆಳೆದು ನಮ್ಮ ಬದುಕು ಕಟ್ಟಿಕೊಳ್ಳಬೇಕಾದರೆ ಅನೇಕರ ತ್ಯಾಗ ಬಲಿದಾನಗಳು ನಮಗಾಗಿ ಮುಡಿಪಾಗಿರುತ್ತವೆ.ನನ್ನ ಜೀವಕ್ಕಾಗಿ ಅನೇಕರು ಮಾಡಿದ ತ್ಯಾಗವನ್ನ ನಾವು ನಿತ್ಯವೋ ಸ್ಮರಿಸುತ್ತಾ ಮುನ್ನಡೆಯಬೇಕು ಅದೇ ಧರ್ಮಮಾರ್ಗ. ಜನ್ಮ ನೀಡಿ ಹೊತ್ತೊ ಹೆತ್ತು ಬೆಳೆಸಿದ ತಂದೆ-ತಾಯಿ, ಅನ್ನ ನೀಡುವ ರೈತ, ಜ್ಞಾನಾಮೃತ ಉಣಬಡಿಸುವ ಗುರು, ಗಡಿ ಕಾಯುವ ಯೋಧ ನಮ್ಮ ಜೀವನದ ಆದರ್ಶ ನಾಯಕರಾಗಬೇಕು ನಮ್ಮ ಹೃದಯಂತರಾಳದೊಳಗೆ ಮೊದಲಿಗರಾಗಿ ಪೂಜಿಸಲ್ಪಡಬೇಕು ಆಗಲಾದರೂ ಒಂದಿಷ್ಟಾದರೂ ಅವರ ಋಣ ತೀರಿಸಬಲ್ಲೆವು.ನಿಸ್ವಾರ್ಥ ಭಾವದಿಂದ ನಮಗಾಗಿ ಶ್ರಮಿಸುವ ಆ ಮಹಾಂತ್ಯಾಗಿಗಳಿಗೆ ನಾವು ಎಷ್ಟು ಋಣಿಯಾಗಿದ್ದರೂ ಕಡಿಮೆ. ಆದರೆ ಯುವಕರಣಿಸಿಕೊಂಡ ನಾವುಗಳು ಇಂದು ಇವರನ್ನು ಮರೆತೆಬಿಟ್ಟಿದ್ದೇವೆ. ಈಗ ನಮ್ಮ ಬದುಕಿನ ಹೀರೋಗಳೆಂದರೆ ಸಿನಿಮಾ ನಾಯಕರು,ಕ್ರೀಡಾ ಸ್ಟಾರ್‌ಗಳು, ಜೀವನದಲ್ಲಿ ಒಮ್ಮೆಯೂ ಸತ್ಯ ಹೇಳದೆ ದಿನನಿತ್ಯ ನಮಗೆ ಟೋಪಿ ಹಾಕುವ ರಾಜಕೀಯ ಮಹಾಮೇದಾವಿಗಳೇ ನಮಗೆ ಆದರ್ಶ ಪ್ರಾಯರಾಗಿದ್ದಾರೆ. ತನ್ನ ಸಿನಿಮಾದಲ್ಲಿ ವಿಧವಿಧವಾದ ದುಶ್ಟಗಳನ್ನ ಕಲಿಸುತ್ತಾ ಅದರಿಂದ ಸಾವಿರಾರು ಕೋಟಿಗಳನ್ನ ಗಳಿಸುತ್ತಾ ದೊಡ್ಡ ದೊಡ್ಡ ಫ್ಲೆಕ್ಸ್ ಗಳಲ್ಲಿ ಹಾಲಿನ ಅಭಿಷೇಕ ಮಾಡಿಸಿಕೊಳ್ಳುತ್ತಿರುವ ನಟರ ಮೇಲಿರುವ ಒಂದಿಷ್ಟಾದರೂ ಪ್ರೀತಿಯನ್ನು ನಾವು ನಮ್ಮ ತಂದೆ ತಾಯಿಗಳಿಗೆ ನೀಡಬೇಕಾಗಿದೆ ಅವರ ಪ್ಲೆಕ್ಸಿಗೆ ಹಾಲಿನ ಅಭಿಷೇಕ ಮಾಡುವುದು ಹೋಗಲಿ ಬಿಡಿ ವಯೋ ವೃದ್ಧರಾಗಿ ಹಾಸಿಗೆ ಹಿಡಿದವರಿಗೆ ಒಂದಿಷ್ಟು ಔಷಧ ಉಪಚಾರ ಮಾಡಿದರೆ ಸಾಕು. ಇನ್ನು ಕ್ರೀಡಾ ಲೋಕದ ಸ್ಟಾರ್ ಗಳು ದೇಶಕ್ಕಾಗಿ ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿ ತಮ್ಮದೇ ಆದ ಸೇವೆಯನ್ನ ನೀಡುತ್ತಾರೆ ಅಂಥವರನ್ನ ಸ್ಮರಿಸುವುದರಲ್ಲಿಯೂ ಯಾವ ತಪ್ಪು ಇಲ್ಲ ಅವರು ಸ್ಮರಣೆಗೆ ಯೋಗ್ಯರಾದವರು ಹಾಗಂತ ಹೇಳಿ ಅವರು ದುಡ್ಡಿಗಾಗಿ ಅನೇಕ ತಂಡಗಳ ಜೊತೆಗೆ ಆಡುವಾಗಲೂ ಜೈಕಾರ ಕೂಗುತ್ತಾ ನಿಲ್ಲುವುದಲ್ಲ ಜೂಜಾಟಗಳ ಜಾಹೀರಾತು ಮಾಡಿದಾಗಲೂ ಸಂಭ್ರಮಿಸುವುದಲ್ಲ ನಮ್ಮ ಅಭಿಮಾನಕ್ಕೊಂದು ಮಿತಿ ಇರಬೇಕು. ಇನ್ನೂ ರಾಜಕಾರಣಿಗಳ ಕಥೆಯಂತೂ ಹೇಳತೀರದು ಯಾವ ಕ್ಷಣಕ್ಕೆ ಯಾವ ಪಕ್ಷದಲ್ಲಿರುತ್ತಾರೆಯೋ ರಾತ್ರಿ ಮಲಗಿ ಬೆಳಗ್ಗೆ ಎಳ್ಳುವಷ್ಟರಲ್ಲಿ ತಮ್ಮ ಸಿದ್ದಾಂತಗಳನ್ನೇ ಬದಲಿಸಿಕೊಂಡು ಎಳ್ಳುವ ಮಹಾನುಬಾವರಿಗಾಗಿ ಬರಿಗಾಲಿನ ಕಾರ್ಯಕರ್ತನಾಗಿ ಅವರ ಮಕ್ಕಳು ಮೊಮ್ಮಕ್ಕಳನ್ನ ಬೆಳೆಸುವುದಕ್ಕಾಗಿ ನಮ್ಮ ಮನೆಯ ಹೆಂಡತಿ ಮಕ್ಕಳನ್ನು ಪರದೇಸಿಗಳನ್ನಾಗಿ ಮಾಡಿ ಕಣ್ಣೀರಲ್ಲಿ ಬದುಕು ಸಾಗಿಸುತ್ತಿದ್ದೇವೆ. ನಾವು ಬರಿ ವಯಸ್ಸಿನಿಂದ ಯುವಕರಾಧರೆ ಪ್ರಯೋಜನವಾಗದು ಒಂದಿಷ್ಟು ಯಾವುದು ಸರಿ ಯಾವುದು ತಪ್ಪು ಎನ್ನುವ ಆಲೋಚನೆಗಳು ನಮಗಿರಬೇಕು ಯಾರು ನನಗಾಗಿ ನನ್ನ ರಾಷ್ಟ್ರಕ್ಕಾಗಿ ಸಮರ್ಪಣೆಗೊಂಡಿರುವರೂ ಎನ್ನುವುದರ ಜ್ಞಾನ ನಮಗಿರಬೇಕಲ್ಲವೇ? ಯಾರು ಇಲ್ಲದಿದ್ದರೂ ನನ್ನ ಬದುಕು ನಡೆಯುತ್ತದೆಯೋ ಮತ್ತೆ ಯಾರು ಇಲ್ಲದಿದ್ದರೇ ನನ್ನ ಬದುಕು ನಡೆಯುವುದೇ ಇಲ್ಲವೋ ಎನ್ನುವುದನ್ನು ಒಂದಿಷ್ಟು ತಿಳಿಯಬೇಕಾಗಿದೆ ಆಗ ಮಾತ್ರ ನನ್ನೊಳಗಿನ ಹುಚ್ಚಾಟದ ಅಭಿಮಾನ ನಿಲ್ಲಬಲ್ಲದು. ನಮಗಾಗಿ ಜೀವ ಕೊಡುವ ಜೀವಗಳನ್ನ ಬಿಟ್ಟು ನಮ್ಮ ಜೀವವೇ ತೆಗಿಯುವ ಜೀವಗಳಿಗಾಗಿ ನಾನು ನನ್ನ ಜೀವನ ಮುಡಿಪಿಟ್ಟಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸುತ್ತಾ ಸಾಗೋಣ. ಆಗ ನಮ್ಮ ಒಂದಿಷ್ಟು ಆಲೋಚನೆಗಳನ್ನಾದರೂ ಬದಲಿಸಿಕೊಳ್ಳಲು ಸಾಧ್ಯವಾಗಬಲ್ಲದು. ನಾವು ಜ್ಞಾನಾಭಿಮಾನ ಬೆಳೆಸಿಕೊಳ್ಳುವುದು ಅತ್ಯವಶ್ಯವಾಗಿದೆ ಅದರಿಂದ ಅಂದಾಭಿಮಾನ ತನ್ನಿಂದ ತಾನೇ ಸರಿದು ಹೋಗುವುದು. ಎಚ್ಚರದಿಂದ ಬಲು ಎಚ್ಚರದಿಂದ ಸಾಗೋಣ…….. ✍️ ಶ್ರೀ ರಾಮಕೃಷ್ಣ ದೇವರು ಶ್ರೀ ಷಣ್ಮುಖಾರೂಢ ಮಠ.ವಿಜಯಪುರ

Leave a Reply

Your email address will not be published. Required fields are marked *