


ದೊಡ್ಡಜಾಲ ಗ್ರಾಮ ಪಂಚಾಯತಿಯಲ್ಲಿ 2025-26ನೇ ಗ್ರಾಮಸಭೆ :
ಬ್ಯಾಟರಾಯನಪುರ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಧಿಸಲಾಗಿರುವ ಸ್ವಚ್ಛಗ್ರಾಮ, ಕಸವಿಲೇವಾರಿ, ಎಲ್ಲಾ ಗ್ರಾಮಗಳಲ್ಲಿನ ಬೀದಿದೀಪಗಳಿಗೆ ಎಲ್.ಇ.ಡಿ.ದೀಪಗಳ ಅಳವಡಿಕೆ, ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್, ನಮ್ಮ ಮೆಡಿಕಲ್ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯಗಳು ಕೈಗೂಡಿದ್ದು, ರಾಜ್ಯದಲ್ಲೇ ದೊಡ್ಡಜಾಲ ಗ್ರಾ.ಪಂ.ಮದರಿಯಾಗಿ ಹಲವು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜವಾಗಿರುವ ಬಗ್ಗೆ ಹೆಮ್ಮೆಯಿದೆ ಎಂದು ದೊಡ್ಡಜಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ತಿಳಿಸಿದರು.
ದೊಡ್ಡಜಾಲ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಆಯೋಜಿಸಿದ್ದ 2025-26ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಉದ್ದೇಶಿಸಿ ಮಾತನಾಡಿದ ಅವರು ‘ದೊಡ್ಡಜಾಲ ಗ್ರಾಮ ಪಂಚಾಯಿತಿ ಸಾಧಿಸಿರುವ ಪ್ರಗತಿಯನ್ನು ಸಚಿವ ಪ್ರಿಯಾಂಕ್ ಖರ್ಗೆಯವರು ಇತ್ತೀಚೆಗೆ ಗ್ರಂಥಾಲಯ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಗ್ರಾಮ ಪಂಚಾಯಿತಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಅಭಿವೃದ್ಧಿ ಕಾರ್ಯಗಳಲ್ಲಿ ಇದೊಂದು ರಾಜ್ಯದಲ್ಲೇ ಮಾದರಿಯಾಗಿರುವ ಗ್ರಾಮ ಪಂಚಾಯಿತಿಯಾಗಿದ್ದು, ಇಲ್ಲಿನ ಅಭಿವೃದ್ಧಿಯ ಅಂಶಗಳನ್ನು ರಾಜ್ಯದ ಇನ್ನಿತರ ಗ್ರಾಮ ಪಂಚಾಯಿತಿ ಗಳಲ್ಲಿ ಅಳವಡಿಸಬೇಕೆಂಬ ಪ್ರಶಂಸೆಯ ಮಾತುಗಳನ್ನಾಡಿದ್ದರು. ಇದೇ ವೇಳೆ ಗ್ರಾಮೀಣ ಪ್ರತಿಭಾವಂತ ಮಕ್ಕಳು ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳ ಸ್ಪರ್ಧಾ ಪರೀಕ್ಷೆಗೆ ತಯಾರಾಗಲು ಸಹಕಾರಿಯಾಗ ಬಲ್ಲ ಉನ್ನತ ದರ್ಜೆಯ ಅರಿವು ಕೇಂದ್ರ ಸ್ಥಾಪನೆಗೆ ಅಗತ್ಯ ಅನುದಾನ ನೀಡಿ ಪ್ರೋತ್ಸಾಹಿಸಿ ದ್ದರು. ಇದೀಗ ಅರಿವು ಕೇಂದ್ರ ಪೂರ್ಣಗೊಳ್ಳುವ ಹಂತದಲ್ಲಿದ್ದು ಶೀಘ್ರದಲ್ಲೇ ಅರಿವು ಕೇಂದ್ರಕ್ಕೆ ಚಾಲನೆ ನೀಡಲಾಗುವುದು ಎಂದರು.
ಗ್ರಾಮಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ 105 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹಧನ ವಿತರಣೆ, ಟ್ಯಾಬ್ ಮತ್ತು ಲ್ಯಾಪ್ಟಾಪ್ ವಿತರಿಸಲಾಯಿತು. ವಿಶೇಷ ಚೇತನರಿಗೆ ಸಹಾಯಧನದ ಚೆಕ್ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಗ್ರಾಮಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಆರ್.ಬೈರೇಗೌಡ ವಹಿಸಿದ್ದು, ಗ್ರಾಮ ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಎ.ಸಿ.ಗೌರಮ್ಮ ಕೃಷ್ಣಪ್ಪ, ಸದಸ್ಯರಾದ ಎ.ನಾಗರಾಜ್, ಚೇತನ್ ಕುಮಾರ್, ನರಸಿಂಹಯ್ಯ, ಪ್ರಕಾಶ್ ಎಸ್., ಹಂಸವೇಣಿ ಮಂಜುನಾಥ್, ಹರಿಪ್ರಕಾಶ್ ಎಂ., ಶೃತಿ ಪುರುಷೋತ್ತಮ್, ಮಾಲಾ ಎಂ., ರತ್ನಮ್ಮ, ಸೌಭಾಗ್ಯಮ್ಮ, ಗೀತಾ ಶಂಕರ್, ಪಿಡಿಓ ಎಸ್.ವಿ.ವೆಂಕಟರಂಗನ್, ಕಾರ್ಯದರ್ಶಿ ಸಂತೋಷ್ ಕುಮಾರ್, ಡಿ.ಎ.ಶ್ರೀನಿವಾಸಯ್ಯ ಸೇರಿದಂತೆ ಗ್ರಾ.ಪಂ.ಸಿಬ್ಬಂದಿ ಗಳಿದ್ದರು.