









ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಪರಿಶೀಲನೆ :
ಯಲಹಂಕ : ನ್ಯಾ.ನಾಗಮೋಹನ್ ದಾಸ್ ಅವರ ನೇತೃತ್ವದ ಏಕಸದಸ್ಯ ಆಯೋಗದ ಸೂಚನೆಯಂತೆ ಮೇ 6ರಿಂದ ಜೂನ್ 30ರವರೆಗೆ ನಡೆಯಲಿರುವ 101 ಪರಿಶಿಷ್ಟ ಜಾತಿಗಳ ಮೂಲಜಾತಿ ಮಾಹಿತಿ ಸಮಗ್ರ ಸಮೀಕ್ಷೆಯ ಹಿನ್ನೆಲೆಯಲ್ಲಿ ಗುರುವಾರ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಯಲಹಂಕ ಕ್ಷೇತ್ರದ ಯಲಹಂಕ ಎ.ಕೆ.ಕಾಲೋನಿ, ಅರಕೆರೆ ಬಡಾವಣೆ, ಸುರಧೇನುಪುರ, ಎಂ.ಎಸ್.ಪಾಳ್ಯ ಮತ್ತು ಬೆಟ್ಟಹಳ್ಳಿ ಗ್ರಾಮಗಳಲ್ಲಿ ಮನೆಮನೆಗೆ ಭೇಟಿ ನೀಡಿ ಜಾತಿ ಸಮೀಕ್ಷೆ ನಡೆಯುತ್ತಿರುವ ರೀತಿಯನ್ನು ಪರಿಶೀಲಿಸಿದರು ಮತ್ತು ಸಮಗ್ರ ಜಾತಿ ಸಮೀಕ್ಷೆ ಕುರಿತು ಜನಜಾಗೃತಿ ಮೂಡಿಸಿದರು.
ಇದೇ ವೇಳೆ ಸಮೀಕ್ಷೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಜಾತಿ ಸಮೀಕ್ಷೆ ಸಾಗುತ್ತಿರುವ ರೀತಿ ಕುರಿತು ಮಾಹಿತಿ ಪಡೆದರು.
ಈ ವೇಳೆ ಅವರು ಮಾತನಾಡಿ ‘ಆರ್ಥಿಕ ಮತ್ತು ಸಾಮಾಜಿಕ ಸವಲತ್ತುಗಳು ಆಯಾ ಜಾತಿಗಳಿಗೆ ಸಮರ್ಪಕ ರೀತಿಯಲ್ಲಿ ದೊರಕಿಸಿ ಕೊಡಬೇಕೆಂಬ ದಿಸೆಯಲ್ಲಿ ರಾಜ್ಯ ಸರ್ಕಾರ ಸಮಗ್ರ ಜಾತಿ ಸಮೀಕ್ಷೆ ನಡೆಸುತ್ತಿದ್ದು, ಸಾರ್ವಜನಿಕರು ಸಮೀಕ್ಷಾ ಅಧಿಕಾರಿಗಳಿಗೆ ಮಾಹಿತಿ ನೀಡುವ ವೇಳೆಯಲ್ಲಿ ತಮ್ಮ ಪ್ರತ್ಯೇಕ ಜಾತಿಗಳನ್ನು ಬಿಡಿಸಿ ಹೇಳಬೇಕು. ಹೊಲೆಯ, ಮಾದಿಗ, ಬೋವಿ, ಕೊರಮ, ಲಂಬಾಣಿ ಹೀಗೆ ಆಯಾ ಜಾತಿಯ ಜನ ಯಾವುದೇ ಸಂಕುಚಿತ ಮನೋಭಾವ ತಳೆಯದೆ ನಿಮ್ಮ ನಿಮ್ಮ ಜಾತಿ ಕುರಿತು ಸರಿಯಾದ ಮಾಹಿತಿ ನೀಡಬೇಕು. ಅಧಿಕಾರಿಗಳು ಸಹ ಜಾತಿ ಸಮೀಕ್ಷೆ ಮಾಹಿತಿ ಪಡೆಯುವ ವೇಳೆಯಲ್ಲಿ ನಾಗರೀಕರನ್ನು ಜಾತಿ ಕುರಿತು ಬಿಡಿಸಿ, ಬಿಡಿಸಿ ಕೇಳಿ ಮಾಹಿತಿ ಪಡೆಯಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಯಲಹಂಕ ಜಯಣ್ಣ, ಪರಿಶಿಷ್ಟ ಜಾತಿ ಸಮುದಾಯದ ಮುಖಂಡರಾದ ಕೋಗಿಲು ವೆಂಕಟೇಶ್, ಲಿಂಗನಹಳ್ಳಿ ವೆಂಕಟೇಶ್, ಸೋಲದೇವನಹಳ್ಳಿ ವೆಂಕಟೇಶ್ ಮೂರ್ತಿ, ಮುತ್ತುಗದಹಳ್ಳಿ ಮುನಿರಾಜ್, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ಮಾಜಿ ಅಧ್ಯಕ್ಷ ಶ್ರೀಧರ್, ಕಾಂಗ್ರೆಸ್ ಮುಖಂಡರಾದ ರಾಜಕುಮಾರ್, ಕಾಂತರಾಜು, ವಿ.ಎಂ.ರಾಜು, ಸ್ಥಳೀಯ ಮುಖಂಡರಾದ ಮಧುಕುಮಾರ್, ಜಯರಾಜ್ ಸೇರಿದಂತೆ ಇನ್ನಿತರರಿದ್ದರು.