ಕೆಂಪೇಗೌಡರ ದೂರದೃಷ್ಟಿ ಬೆಂಗಳೂರು ನಗರದ ಬೆಳೆವಣಿಗೆಗೆ ಇಂಬು ನೀಡಿದೆ : ಎಸ್.ಆರ್.ವಿಶ್ವನಾಥ್

ಯಲಹಂಕ : ವೇಗದ ಬೆಳವಣಿಗೆಯ ಮೂಲಕ ಜಾಗತಿಕ ಮನ್ನಣೆಗೆ ಪಾತ್ರವಾಗಿರುವ ಬೆಂಗಳೂರು ಸುರಕ್ಷಿತ ಮತ್ತು ಸುಂದರ ನಗರ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಬೆಂಗಳೂರು ನಗರದ ಈ ಖ್ಯಾತಿಗೆ ನಾಡಪ್ರಭು ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಯೇ ಮೂಲ ಕಾರಣ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಅಭಿಪ್ರಾಯಪಟ್ಟರು.

ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವದ ಅಂಗವಾಗಿ ಯಲಹಂಕದಲ್ಲಿ ನೂತನವಾಗಿ ನವೀಕರಣಗೊಂಡಿದ್ದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು ‘ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು 1537ರಲ್ಲೇ ಬೆಂಗಳೂರು ನಗರ ವನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಿದ್ದರು, ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬ ಮಹದಾಸೆ ಯೊಂದಿಗೆ, ಆಯಾ ಕುಲ ಕುಸಬುದಾರರಿಗೆ ಅನುಗುಣವಾಗಿ 54 ಪೇಟೆಗಳನ್ನು ಕಟ್ಟಿ, ವ್ಯಾಪಾರ- ವಹಿವಾಟಿಗೆ ಅನುವು ಮಾಡಿಕೊಟ್ಟಿ ದ್ದರು. ಕೆಂಪೇಗೌಡರು ಕಟ್ಟಿದ್ದ ಆ ನಗರಗಳು ಇಂದಿಗೂ ಸಹ ಅರಳೇ ಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ಮಂಡಿ ಪೇಟೆ, ಬಳೇಪೇಟೆ, ಅಂಚೆ ಪೇಟೆ, ಹಳೇತರುಗುಪೇಟೆ, ಹೊಸ ತರುಗುಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ ಎಂಬ ಅದೇ ಮೂಲ ಹೆಸರಲ್ಲಿ ಬೆಂಗಳೂರಿನಲ್ಲಿ ಇವೆ. ಬೆಂಗಳೂರಿಗೆ ನದಿ ಮೂಲ ಗಳಿಲ್ಲ ಎಂಬುದನ್ನು ಅರಿತಿದ್ದ ಕೆಂಪೇಗೌಡರು ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು ಕೆರೆ, ಜಕ್ಕರಾಯನ ಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಅವರ ಕಾಲದಲ್ಲಿ 347 ದೊಡ್ಡ ಕೆರೆಗಳು, 1200ಕ್ಕೂ ಅಧಿಕ ಸಣ್ಣ ಕೆರೆ-ಕಟ್ಟೆಗಳಿದ್ದವು ಆದರೆ ಈ ಪೈಕಿ ಹಲವು ಕೆರೆಗಳು ಇದೀಗ ಅಭಿವೃದ್ಧಿ ಹೆಸರಿನಲ್ಲಿ ಹೇಳ ಹೆಸರಿಲ್ಲದಂತಾಗಿವೆ. ಸಂಪಂಗಿ ಕೆರೆ ಜಾಗದಲ್ಲಿ ಕಂಠೀರವ ಕ್ರೀಡಾಂಗಣ, ಸಿದ್ಧಿಕಟ್ಟೆ ಇದ್ದ ಸ್ಥಳದಲ್ಲಿ ಕೆ.ಆರ್‌. ಮಾರುಕಟ್ಟೆ, ಧರ್ಮಾಂಬುಧಿ ಕೆರೆ ಜಾಗದಲ್ಲಿ ಕೆಂಪೇಗೌಡ ಬಸ್‌ ನಿಲ್ದಾಣ ನಿರ್ಮಾಣವಾಗಿದೆ. ನಗರೀಕರಣದ ಪರಿಣಾಮ, ಹಲವು ಕೆರೆಗಳು ಸಂಪೂರ್ಣ ಕಲುಷಿತಗೊಂಡಿದ್ದು, ಬಳಕೆ ಇರಲಿ, ಮುಟ್ಟಲು ಸಹ ಜನರು ಹಿಂಜರಿಯುವಂತಹ ಸ್ಥಿತಿ ತಲುಪಿವೆ. ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಂಪೇಗೌಡರು ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದ್ದು, ಹಲಸೂರಿನ ಸೋಮೇಶ್ವರ, ಗವಿಪುರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ದೊಡ್ಡ ಗಣಪತಿ, ಧರ್ಮರಾಯಸ್ವಾಮಿ ದೇವಾಲಯ ಗಳನ್ನು ನಿರ್ಮಿಸಿರುವುದು ಅವರಿಗೆ ದೇವರ ಮೇಲಿದ್ದ ಭಕ್ತಿಯನ್ನು ಅನಾವರಣಗೊಳಿಸುತ್ತದೆ. 481 ವರ್ಷಗಳ ಬಳಿಕವೂ ಜನತೆ ಗೌರವ ಪೂರ್ವಕವಾಗಿ ನಾಡಪ್ರಭು ಕೆಂಪೇಗೌಡರನ್ನು ಸ್ಮರಿಸಲು ಅವರು ಬೆಂಗಳೂರು ನಗರಕ್ಕೆ ನೀಡಿರುವ ಅನುಪಮ ಕೊಡುಗೆಗಳೇ ಕಾರಣ. ಇಂತಹ ನಾಡ ಪ್ರಭುಗಳು ಯಲಹಂಕದವರು ಎಂಬುದು ನಮಗೆ ಹೆಮ್ಮೆ ತರುವ ಸಂಗತಿ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಮಹಾಸ್ವಾಮಿಜಿ‌ ಮಾತನಾಡಿ ‘ನಾಡಪ್ರಭು ಕೆಂಪೇಗೌಡರು ನಾಡು ಕಟ್ಟಿದವರು, ಬೆಂಗಳೂರು ನಗರವನ್ನು ಸುಸಜ್ಜಿತ ರೀತಿಯಲ್ಲಿ ನಿರ್ಮಿಸಿರುವ ಮಹಾನ್ ಚೇತನರು, ಅವರ ಕೊಡುಗೆಗೆ ಪೂರಕವಾಗಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನಾಡಿನ ಇತರರು ಸಹ ಮಾದರಿಯಾಗಿ ಸ್ವೀಕರಿಸುವ ರೀತಿಯಲ್ಲಿ ಅತ್ಯಂತ ಸುಂದರ ವಿನ್ಯಾಸದಲ್ಲಿ ನಿರ್ಮಿಸಿ, ಅನಾವರಣಗೊಳಿಸುವ ಮೂಲಕ ಕೆಂಪೇಗೌಡರನ್ನು ಗೌರವಿಸುವ ಸ್ತುತ್ಯಾರ್ಹ ಕಾರ್ಯ ಮಾಡಿರುವುದು ಅಭಿನಾರ್ಹ ಸಂಗತಿ. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾತೃ ಎಂದೇ ಖ್ಯಾತಿ ಹೊಂದಿದ್ದರೂ ಸಹ ಗಂಗೆ, ತುಂಗೆ, ಕಾವೇರಿ ನದಿಗಳ ಉಗಮ ಸ್ಥಾನಗಳ ಬಗ್ಗೆ ಹೇಗೆ ನಮಗೆ ಪವಿತ್ರಸ್ಥಾನ ಎಂಬ ಭಾವವಿದೆಯೋ, ಹಾಗೆಯೇ ಕೆಂಪೇಗೌಡರು ತಮ್ಮ ಹೃನ್ಮನಗಳಲ್ಲಿ ಯಲಹಂಕಕ್ಕೆ ಅದೇ ರೀತಿಯ ಪವಿತ್ರ ಸ್ಥಾನ ನೀಡಿದ್ದರು ಎಂದರು.

ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಪ್ರಯುಕ್ತ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ, ವಿಶೇಷ ಪೂಜೆ, ಕೆಂಪೇಗೌಡರ ಪ್ರತಿಮೆಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ನಡುವೆ ಯಲಹಂಕದ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ, ಎತ್ತಿನಗಾಡಿಯೊಂದಿಗೆ ಪಾದಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್, ಬಿಜೆಪಿ ಮುಖಂಡರಾದ ಎಂ.ಸತೀಶ್, ಎಂ‌.ಜಿ. ರಾಮಮೂರ್ತಿ, ಎಸ್.ಎನ್. ರಾಜಣ್ಣ, ದಿಬ್ಬೂರು ಜಯಣ್ಣ, ಸತೀಶ್ ಕಡತನಮಲೆ, ಚೊಕ್ಕನಹಳ್ಳಿ ವೆಂಕಟೇಶ್, ಮುರಾರಿರಾಮು, ಈಶ್ಚರ್, ವಿ.ಪವನ್ ಕುಮಾರ್, ವಿಶ್ವನಾಥಪುರ ಮಂಜುನಾಥ್, ನರಸಿಂಹಮೂರ್ತಿ, ವಿ.ವಿ.ರಾಮಮೂರ್ತಿ, ನಾರಾಯಣಸ್ವಾಮಿ, ಎಸ್.ರಾಜಣ್ಣ, ಎಂ.ಮುನಿರಾಜು, ವೆಂಕಟಾಲ ಕೆಂಪೇಗೌಡ, ಮು.ಕೃಷ್ಣಮೂರ್ತಿ, ಎಚ್.ಸಿ.ರಾಜೇಶ್, ಕೆ.ಆರ್.ತಿಮ್ಮೇಗೌಡ, ಕೆ.ಎಂ.ಮುರಳಿ, ರಮೇಶ್, ಎಚ್.ಎಸ್.ಕಿರಣ್, ಯಲಹಂಕ ಜಯಣ್ಣ, ಬೃಂದಾ ವೀರೇಶ್, ಕಾಂಗ್ರೆಸ್ ಮುಖಂಡರಾದ ವೈ.ಎನ್.ಅಶ್ವಥ್, ರಾಜಕುಮಾರ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರಿದ್ದರು.

Leave a Reply

Your email address will not be published. Required fields are marked *