



ಬ್ಯಾಟರಾಯನಪುರ : ಬೆಟ್ಟಹಲಸೂರು ಕ್ರಾಸ್ ನಲ್ಲಿ ಮೆಟ್ರೋ ರೈಲ್ವೆ ನಿಲ್ದಾಣ ಸ್ಥಾಪಿಸಬೇಕೆಂದು ಒತ್ತಾಯಿಸಿ ಗ್ರಾಮದ ಮುತ್ಯಾಲಮ್ಮ ದೇವಿ ದೇವಸ್ಥಾನದ ಮುಂದೆ ನೂರಾರು ಗ್ರಾಮಸ್ಥರು ಭಾನುವಾರ ಸಭೆ ನಡೆಸಿ ಬೆಟ್ಟಹಲಸೂರು ಕ್ರಾಸ್ ನಲ್ಲಿ ಮೆಟ್ರೋ ಬೇಕೇಬೇಕೆಂಬ ಒಕ್ಕೊರಲಿನ ನಿರ್ಣಯ ಕೈಗೊಂಡರು.
ಮೆಟ್ರೋ ನಿಲ್ದಾಣ ಸ್ಥಾಪನೆಯಿಂದ ಬೆಟ್ಟಹಲಸೂರು ಗ್ರಾಮದ ಸುತ್ತಮುತ್ತಲಿನ 20 ರಿಂದ 25 ಗ್ರಾಮಗಳ ಗ್ರಾಮಸ್ಥರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ, ಅಂತರ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ, ವಿಮಾನ ನಿಲ್ದಾಣ ನೌಕರರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಮನವಿ ನೀಡಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಕ್ಷಾತೀತವಾಗಿ, ಒಮ್ಮತದಿಂದ ಮನವಿಯನ್ನು ನೀಡಲು ತೀರ್ಮಾನಿಸಿದರು. ಒಂದೊಮ್ಮೆ ನಮ್ಮ ಮನವಿಗೆ ಸಂಬಂಧ ಪಟ್ಟವರು ಸ್ಪಂದಿಸದಿದ್ದರೆ ಪಕ್ಷಾತೀತವಾಗಿ ಹೋರಾಟ ನಡೆಸುವ ನಿರ್ಣಯವನ್ನು ಗ್ರಾಮಸ್ಥರು ಕೈಗೊಂಡರು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮಾಜಿ ಅಧ್ಯಕ್ಷ,, ಹಾಲಿ ಸದಸ್ಯರಾದ ಬಿ.ಎಸ್.ಅನಿಲ್ ಕುಮಾರ್, ಬಿ.ಎಮ್.ನಾಗೇಶ್, ಬೆಟ್ಟಹಲಸೂರು ಕೃಷಿ ಪತ್ತಿನ ರೈತ ಸಹಕಾರ ಸಂಘದ ಅಧ್ಯಕ್ಷ ಪಂಚಮಿ ಶ್ರೀನಿವಾಸ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೆಟ್ಟಹಲಸೂರು ನಂಜುಂಡಪ್ಪ, ಬಿ.ಸಿ.ಶಿವರಾಜ್ (ಶಿವು), ರೈತ ಪರ ಹೋರಾಟ ಗಾರರಾದ ಮಾವಳಿಪುರ ಬಿ. ಶ್ರೀನಿವಾಸ್, ಧನರಾಜ್, ಮುಖಂಡರಾದ ಬಿ. ಎನ್.ನಾಗೇಶ್, ಬಿ.ಆರ್. ರಾಜಗೋಪಾಲ್, ಗ್ರಾ.ಪಂ.ಸದಸ್ಯರಾದ, ಬಿ ಆರ್ ರಾಮಾಂಜಿನಿ, ಬಿ.ಎನ್. ಗೋವಿಂದರಾಜು ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
