ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಸ್ ಆರ್ ವಿಶ್ವನಾಥ್ ಚಾಲನೆ :

ಯಲಹಂಕ : ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ, ಅಂಗನವಾಡಿ ಮತ್ತು ಸ್ವಸಹಾಯ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿ, ಅಂಬೇಡ್ಕರ್ ಸಮುದಾಯ ಭವನದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ‘ರಾಜ್ಯ ಸರ್ಕಾರದ ಅನುದಾನದ ಕೊರತೆಯ ನಡುವೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟಿತವಾಗಬಾರದು ಎಂಬ ದಿಸೆಯಲ್ಲಿ ಪರಿಶ್ರಮದಿಂದ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇಂದು ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ, ಅಂಬೇಡ್ಕರ್ ಭವನದ ಮೇಲೆ ಹೆಚ್ಚುವರಿ ಕೊಠಡಿ ನಿರ್ಮಾಣ, ಸಿಮೆಂಟ್ ಪೈಪ್ ಲೈನ್ ಅಳವಡಿಕೆ, ಕ್ರೀಡಾಂಗಣ ನಿರ್ಮಾಣ ಕಾಮಗಾರಿ, ಯಡಿಯೂರಪ್ಪ ನಗರದಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ, ಸ್ವಸಹಾಯ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿ, ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಮತ್ತು ಲೋಕಾರ್ಪಣೆ ನೆರವೇರಿಸಲಾಗಿದೆ. ಗ್ರಾಮೀಣ ಭಾಗದ ಜನರ ಅಗತ್ಯತೆಯನ್ನು ಮನಗಂಡು, ಅಭಿವೃದ್ಧಿಗೆ ಒತ್ತು ನೀಡುವ ದಿಸೆಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಿಂಗನಾಯಕನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಮರಾವತಮ್ಮ, ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ಉಪಾಧ್ಯಕ್ಷ ಜಿ.ಸಿ‌.ಮಂಜುನಾಥ್, ಮಾಜಿ ಉಪಾಧ್ಯಕ್ಷರಾದ ಎಸ್.ಜಿ.ಪ್ರಶಾಂತ್ ರೆಡ್ಡಿ, ಜೀವಿತ ಮುನಿಕೃಷ್ಣ, ಗ್ರಾ.ಪಂ.ಸದಸ್ಯರಾದ ಪದ್ಮಶ್ರೀ ನಾಗರಾಜರೆಡ್ಡಿ, ಶಾಂತಲಾ ರಾಜಣ್ಣ, ಕೆ.ಬಾಬು, ಮಲ್ಲೇಶ್ ಸೇರಿದಂತೆ ಗ್ರಾಮಸ್ಥರಿದ್ದರು.

ಸಾದೇನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು :

ರಾಜಾನುಕುಂಟೆ ಗ್ರಾ.ಪಂ.ವ್ಯಾಪ್ತಿಯ ಸಾದೇನಹಳ್ಳಿ ಗ್ರಾಮದಲ್ಲಿ ಸ್ವಾಗತ ಗೋಪುರ, ಅಶ್ವಥ ಕಟ್ಟೆ ಲೋಕಾರ್ಪಣೆ, ಹೈಮಾಸ್ಟ್ ಬೀದಿ ದೀಪಗಳ ಅಳವಡಿಕೆ, ಕುಂಟೆ ಅಭಿವೃದ್ಧಿ, ಸಮುದಾಯ ಭವನ ಅಭಿವೃದ್ಧಿ ಕಾಮಗಾರಿ, ಅಂಗನವಾಡಿ ಕಾಂಪೌಂಡ್, ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಪಾರ್ಕ್ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಭೂಮಿಪೂಜೆ ಮತ್ತು ಕೆಲವು ಕಾಮಗಾರಿಗಳ ಲೋಕಾರ್ಪಣೆ ಕಾರ್ಯ ನೆರವೇರಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆ ಅಂಗವಾಗಿ ಸ್ವಚ್ಛತಾ ಪಾಕ್ಷಿಕ ಅಭಿಯಾನದ ಅಡಿಯಲ್ಲಿ ಸ್ವಚ್ಛತೋತ್ಸವ ಅಭಿಯಾನ ಮತ್ತು ತಾಯಂದಿರ ಹೆಸರಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಶಾಸಕರು ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಸುಜಾತಮ್ಮ, ಮಾಜಿ ಅಧ್ಯಕ್ಷರಾದ ಚನ್ನಮ್ಮ, ಎಸ್.ಜಿ.ನರಸಿಂಹ ಮೂರ್ತಿ(ಎಸ್.ಟಿ.ಡಿ.ಮೂರ್ತಿ), ವೀರಣ್ಣ, ಭವಾನಿ, ಅಂಬಿಕಾ, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ವಿಶ್ವನಾಥಪುರ ಮಂಜುನಾಥ್, ಎಂ.ಚಿಕ್ಕಣ್ಣ, ವರುಣ್, ಎಸ್.ಎಚ್.ಅಪ್ಪಣ್ಣಗೌಡ, ಪಟಾಲಪ್ಪ, ಮುನಿಕೆಂಪಯ್ಯ, ಯುವ ಮುಖಂಡರಾದ ಪ್ರಕಾಶ್ ಗೌಡ, ಸುರೇಶ್, ದೃವಕುಮಾರ್, ಪ್ರಭಾಕರ್,ರವಿಕುಮಾರ್, ಶಿವಣ್ಣ, ರಮೇಶ್, ವಿಜಯಕುಮಾರ್ ಸೇರಿದಂತೆ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *