
ರಸ್ತೆ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ
ಶಾಸಕ ಪ್ರದೀಪ್ ಈಶ್ವರ್ ಸಹಾಯಧನ
ಚಿಕ್ಕಬಳ್ಳಾಪುರ: ತಾಲೂಕಿನ ಅಜ್ಜವಾರ ಗೇಟ್ ನಲ್ಲಿ ಗುರುವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಜ್ಜವಾರದ ೪ ಮಂದಿ ಯುವಕರ ಸ್ವ ಗ್ರಾಮಕ್ಕೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ತಲಾ ೨೫ ಸಾವಿರ ಸಹಾಯಧನ ವಿತರಿಸಿದರು.
ತಾಲೂಕಿನ ಅಜ್ಜವಾರ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ , ಟಿಪ್ಪರ್ ಲಾರಿಗಳ ಆವಳಿಯಿಂದ ಅನೇಕ ತೊಂದರೆಯಾಗುತ್ತಿದೆ. ನಾನು ಶಾಸಕನಾದಾಗಿನಿಂದ ಟಿಪ್ಪರ್ ಲಾರಿಗಳ ಓಡಾಟಕ್ಕೆ ನಿಯಂತ್ರಿಸಲು ಪ್ರಯತ್ನ ಮಾಡುತಿದ್ದೇನೆ. ಆದರೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ತಡೆದರೆ, ಮೇಲಾಧಿಕಾರಿಗಳು, ಜಿಲ್ಲಾಡಳಿತ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುತ್ತಾರೆ. ಟಿಪ್ಪರ್, ಕ್ರಷರ್ ಗಳಿಂದ ಯಾರಿಗೆ ಎಷ್ಟೆಷ್ಟು ಲಂಚ ಹೋಗುತ್ತಿದೆಯೋ ಗೊತ್ತಿಲ್ಲ, ಅಧಿಕಾರಿಗಳು, ಜನಪ್ರತಿನಿಧಿಗಳ ದುರಾಸೆಯಿಂದ ಅಜ್ಜವಾರ 4 ಜನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಕ್ಕಳು ಪ್ರಾಣ ಕಳೆದು ಕೊಂಡಂತಾಗಿದೆ ಎಂದು ಆರೋಪಿಸಿದರು.
ಕಳೆದ ಒಂದು ತಿಂಗಳಲ್ಲಿ ಮಂಜಿನಿಂದ ರಸ್ತೆ ಅಪಘತಗಳಲ್ಲಿ 50 ಜನ ಜೀವ ಕಳೆದುಕೊಂಡಿದ್ದಾರೆ. ನಿನ್ನೆ ರಾತ್ರಿ ನಡೆದ ಅಪಘಾತದಲ್ಲಿ 4 ಮಂದಿ ಯುವಕರು ಮೃತ ಪಟ್ಟಿದ್ದಾರೆ. ಶಿಡ್ಲಘಟ್ಟ ಕೆಡೆಯಿಂದ ಬಂದ ಯಮಸ್ವರೂಪಿ ಟಿಪ್ಪರ್ ಲಾರಿ ಅತಿಯಾದ ವೇಗದಿಂದ ಅಪಘಾತವಾಗಿದೆ. ತಾಲೂಕಿನಲ್ಲಿ ಟಿಪ್ಪರ್ ಹಾವಳಿ ಹೆಚ್ಚಾಗಿದೆ ಇದನ್ನ ನಾನು ಶಾಸಕನಾದಾಗಿನಿಂದ ವಿರೋಧಿಸುತ್ತ ಬಂದಿದ್ದೇನೆ ಎಂದರು.ಈ ವೇಳೆ ಕಾಂಗ್ರೆಸ್ ಮುಖಂಡರು ಗ್ರಾಮದ ಮುಖಂಡರು ಮತ್ತು ಇತರರು ಇದ್ದರು.
