















ಫಲಾನುಭವಿಗಳಿಗೆ ಮನೆಗಳ ಕೀಲಿ, ಹಂಚಿಕೆ ಪತ್ರ ಹಸ್ತಾಂತರಿಸಿದ ಸಚಿವ ಕೃಷ್ಣಬೈರೇಗೌಡ :
ಬ್ಯಾಟರಾಯನಪುರ : ರಾಜೀವ್ ಗಾಂಧಿ ವಸತಿ ನಿಗಮದಿಂದ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಬ್ಯಾಟರಾಯನಪುರ ಕ್ಷೇತ್ರದ ನವರತ್ನ ಅಗ್ರಹಾರ ಗ್ರಾಮದಲ್ಲಿ ನಿರ್ಮಿಸಲಾಗಿದ್ದ 140 ಮನೆಗಳನ್ನು ಸಚಿವ ಕೃಷ್ಣಬೈರೇಗೌಡ ಸೋಮವಾರ ಫಲಾನುಭವಿಗಳಿಗೆ ಕೀಲಿ ಮತ್ತು ಹಕ್ಕುಪತ್ರಗಳನ್ನು ನೀಡುವ ಮೂಲಕ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ‘ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಮೂಲಕ ಸರ್ಕಾರ ನಿರ್ಮಿಸಿರುವ ಉತ್ತಮ ಗುಣಮಟ್ಟದ ಸಿಂಗಲ್ ಬೆಡ್ರೂಮ್ ಮನೆಗಳು ದುಡಿಯುವ ವರ್ಗದ ಕುಟುಂಬಗಳಿಗೆ ನಿಜವಾದ ಆಶಾಕಿರಣವಾಗಿವೆ. ಇದೇ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗಳು ಇದೇ ರೀತಿಯ ಮನೆಗಳನ್ನು 30–35 ಲಕ್ಷ ರು.ಗಳಿಗೆ ಮಾರಾಟ ಮಾಡುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ಯೋಜನೆಯಡಿ 3.5 ಲಕ್ಷ ರು. ಸಬ್ಸಿಡಿಯ ನಂತರ ಕೇವಲ ಸುಮಾರು 7.70 ಲಕ್ಷ ರು. ವೆಚ್ಚದಲ್ಲಿ ಈ ಮನೆಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ ಬ್ಯಾಂಕ್ಗಳ ಸಹಯೋಗದ ಮೂಲಕ ಸುಲಭ ಸಾಲ ಮತ್ತು ಕಂತು ಪಾವತಿ ಸೌಲಭ್ಯವೂ ಲಭ್ಯವಿದೆ.
ವರ್ಷಗಳ ಕಾಲ ಸಣ್ಣ ಹಾಗೂ ಅಸಮರ್ಪಕ ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬ ಗಳಿಗೆ, ಸ್ವಂತ ಮನೆ ಎಂಬುದು ಕೇವಲ ಒಂದು ಕಟ್ಟಡವಲ್ಲ — ಅದು ಭದ್ರತೆ, ಗೌರವ, ನೆಮ್ಮದಿ ಮತ್ತು ಮಕ್ಕಳ ಉತ್ತಮ ಭವಿಷ್ಯದ ಭರವಸೆಯಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ವಸತಿ ಒದಗಿಸುವ ದಿಸೆಯಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಮಹತ್ವದ ಹೆಜ್ಜೆಯಾಗಿದೆ.
ಇಂದು ಹೊಸ ಜೀವನದತ್ತ ಹೆಜ್ಜೆಯಿಟ್ಟ 140 ಕುಟುಂಬಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ, ಅವರ ಬದುಕು ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಅಶೋಕನ್, ಮಾಜಿ ಸದಸ್ಯ ದಾನೇಗೌಡ, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಉಪಾಧ್ಯಕ್ಷ ಜೈಕುಮಾರ್, ತಾ.ಪಂ.ಮಾಜಿ ಸದಸ್ಯ ಉದಯಶಂಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿಂಗಹಳ್ಳಿ ವೆಂಕಟೇಶ್, ಬೆಂ.ನಗರ ಜಿಲ್ಲಾ ಕೆಡಿಪಿ ಸದಸ್ಯ ಬಿ.ಕೆ.ನಾರಾಯಣ ಸ್ವಾಮಿ(ಎಲ್ಐಸಿ), ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ದೊಡ್ಡಜಾಲ ಗ್ರಾ.ಪಂ.ಮಾಜಿ ಅಧ್ಯಕ್ಷೆ ಗೌರಮ್ಮ ಕೃಷ್ಣಪ್ಪ, ಚಿಕ್ಕಜಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಎ.ಸಿ.ಗೋವಿಂದಪ್ಪ, ಶ್ರೀನಿವಾಸ್ ಸಿ., ರಾಮಾಂಜಿನಪ್ಪ, ಗೋವಿಂದಸ್ವಾಮಿ ಎಲ್., ನಾರಾಯಣಸ್ವಾಮಿ(ಅಪ್ಪಿ), ಪಿಳ್ಳೇಗೌಡ, ಪ್ರಕಾಶ್, ಯುವ ಕಾಂಗ್ರೆಸ್ ಮುಖಂಡರಾದ ರಾಜೇಶ್, ಪ್ರದೀಪ್(ಮುತ್ತು), ಶಿವರಾಜ್ ಸಿ.ಎ.,ಮಂಜುನಾಥ್ ಎನ್., ಚಂದ್ರಶೇಖರ್, ಕೇಶವ ಕೆ.,ಚಂದ್ರಶೇಖರ್, ಮುರಳಿ ಸೇರಿದಂತೆ ಇನ್ನಿತರರಿದ್ದರು.
