ಹುಬ್ಬಳ್ಳಿ :- 12ನೇ ಶತಮಾನವು ಒಂದು ಕ್ರಾಂತಿಕಾರಿ ಯುಗವಾಗಿದೆ. ನುಲಿಯ ಚಂದಯ್ಯನವರು ಬಸವಣ್ಣನವರಿಗೆ ಆಪ್ತರಾಗಿದ್ದರು. ಚಂದಯ್ಯನವರು ಕಾಯಕ ಸಿದ್ದಾಂತದ ಪ್ರತಿಪಾದಕರಾಗಿದ್ದು, ಕಾಯಕದಲ್ಲಿ ನಿಷ್ಠೆ, ಜಂಗಮರಿಗೆ ದಾಸೋಹ ಮಾಡುವುದರಲ್ಲೇ ಕೈಲಾಸ ಕಾಣುವ ಶ್ರೇಷ್ಠ ಕಾಯಕಯೋಗಿಯಾಗಿದ್ದರು. ಅವರ ಚಿಂತನೆಗಳು ಇಂದಿನ ಯುವ ಸಮುದಾಯಕ್ಕೆ ದಾರಿ ದೀಪವಾಗಬೇಕು ಎಂದು ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.

ಹುಬ್ಬಳ್ಳಿ ತಾಲೂಕು ಆಡಳಿತಸೌಧದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನುಲಿಯ ಚಂದಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ನುಲಿಯ ಚಂದಯ್ಯ ಅವರ ಮೂಲ ವೃತ್ತಿ ಹುಲ್ಲನ್ನು ನೇಯ್ದು ಅದರಿಂದ ಹಗ್ಗ, ಪೊರಕೆಯಂತಹ ವಸ್ತುಗಳನ್ನು ತಯಾರಿಸಿ ಮಾರುವುದಾಗಿತ್ತು. ತಮ್ಮ ಮೂಲ ವೃತ್ತಿಯ ಜೊತೆಗೆ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿರುವ ಶಿವಶರಣರಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ತಿಳಿಸಿದರು.

ಹುಬ್ಬಳ್ಳಿ ಶಹರ ತಹಸೀಲ್ದಾರರಾದ ಕಲಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 12 ನೇ ಶತಮಾನವು ದಲಿತರು ಮತ್ತು ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಂತಹ ಕಾಲಘಟ್ಟವಾಗಿದೆ.
ನುಲಿಯ ಚಂದಯ್ಯನವರು ವಚನ ಸಾಹಿತ್ಯಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಅವರ ಕಾಯಕ ನಿಷ್ಠೆಯ ಜೀವನ ಇಂದಿನ ಮಕ್ಕಳಿಗೆ ಆದರ್ಶಪ್ರಾಯವಾಗಲಿ ಎಂದರು.

ನಾರಾಯಣ ಭಜಂತ್ರಿ ಮಾತನಾಡಿ, 12ನೇ ಶತಮಾನದಲ್ಲಿ ಮಹಿಳೆಯರು ಮತ್ತು ಹಿಂದುಳಿದ ಸಮುದಾಯಗಳ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಸಮಾಜದಲ್ಲಿನ ಜಾತಿ ಪದ್ಧತಿ, ಮೂಢನಂಬಿಕೆಗಳನ್ನು ತೊಡೆದು ಹಾಕುವಲ್ಲಿ ಶಿವಶರಣರ ಪಾತ್ರ ತುಂಬಾ ಮುಖ್ಯವಾದದ್ದಾಗಿದೆ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ವಿಜಯ ಕುಮಾರ ಭಜಂತ್ರಿ, ಸಮೃದ್ಧ ಕೆ.ವಾಯ್, ಅಪೇಕ್ಷಾ ಭಜಂತ್ರಿ, ಭವಾನಿ ಶಶಿಕಾಂತ ಬಿಜವಾಡ, ಯಶಸ್ವಿನಿ ಭಜಂತ್ರಿ, ರಕ್ಷಿತಾ ಭಜಂತ್ರಿ, ದುರಗಪ್ಪ ಭಜಂತ್ರಿ ಮತ್ತು ಸಮಾಜದ ಹಿರಿಯರಾದ ಹನುಮಂತಪ್ಪ ದಾಸೊನವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೂಪಾ ಭಜಂತ್ರಿ, ಪದ್ಮ, ಪ್ರೇಮ ಪ್ರಾರ್ಥಿಸಿದರು. ಮಂಜುನಾಥ ಬಿಜವಾಡ ಸ್ವಾಗತಿಸಿದರು. ಪುಟ್ಟಣ್ಣ ಭಜಂತ್ರಿ ನಿರೂಪಿಸಿದರು. ಗೋಪಾಲ ತಾಂಬ್ರೆ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ದಾರ ಜಿ.ವಿ.ಪಾಟೀಲ, ಸಮಾಜದ ಮುಖಂಡರಾದ ಶಶಿಕಾಂತ ಬಿಜವಾಡ, ರಾಮಣ್ಣ ಭಜಂತ್ರಿ, ಪಡೆಪ್ಪ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *