ಹೊಸಕೋಟೆ ತಾ.ಪ್ರಾಥಮಿಕ ಆರೋಗ್ಯ ಕೇಂದ್ರ ನಂದಗುಡಿ,ಸುಗುಣ ಫುಡ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ” ರಕ್ತದಾನ ಶಿಬಿರ ” ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ನಂದಗುಡಿ ಹಾಗೂ ಸುಗುಣ ಫುಡ್ ಪ್ರೈವೇಟ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ " ರಕ್ತದಾನ ಶಿಬಿರ " ವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್ ರವರು ಮಾತನಾಡುತ್ತಾ ಜಗತ್ತಿನ ವೈದ್ಯಕೀಯ ರಂಗದಲ್ಲಿ ಒಬ್ಬರ ರಕ್ತವನ್ನು ಇನ್ನೊಬ್ಬರ ದೇಹಕ್ಕೆ ವರ್ಗಾಯಿಸುವ ಪ್ರಕ್ರಿಯೆಯೇ ಮಹತ್ತರವಾದ ಅನ್ವೇಷಣೆ ಮತ್ತು ರಕ್ತದಾನ - ಶ್ರೇಷ್ಠದಾನ ಎಂದೂ, ರಕ್ತಕ್ಕೆ ಪರ್ಯಾಯವಾದ ಇನ್ನೊಂದು ವಸ್ತುವಿಲ್ಲವೆಂದು ಹಾಗಾಗಿ ಸಾರ್ವಜನಿಕರು ಮುಕ್ತವಾಗಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ ಭಾಸ್ಕರ್ ರೆಡ್ಡಿ, ಮತ್ತು ಬೆಂಗಳೂರು ಸರ್ ಸಿವಿ ರಾಮನ್ ಸಾರ್ವಜನಿಕ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಮುಖ್ಯಸ್ಥರಾದ ಡಾ. ಶೀಲಾ ಮತ್ತು ಸುನಿಲ್ ಆಚಾರ್ಯರ ತಂಡ ಆಂಬುಲೆನ್ಸ್ ವಾಹನದೊಂದಿಗೆ ಆಗಮಿಸಿ, ಶಿಷ್ಟಾಚಾರದಂತೆ ಕ್ರಮಬದ್ಧವಾಗಿ ರಕ್ತ ಸಂಗ್ರಹಿಸಿ, ಅಭಿನಂದನ ಪ್ರಮಾಣ ಪತ್ರವನ್ನು ರಕ್ತ ದಾನಿಗಳಿಗೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಹೊಸಕೋಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಸತೀಶ್ ರವರ ನಿರ್ದೇಶನದ ಮೇರೆಗೆ ರಕ್ತನಿಧಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಯಾದ ಶ್ರೀ ಸುಭಾನ್, ತಾಲೂಕು ಕ್ಷಯ ರೋಗ ಘಟಕದ ಚಿಕಿತ್ಸಾ ಮೇಲ್ವಿಚಾರಕರಾದ ಮುಖ್ಯಸ್ಥರಾದ ಶ್ರೀ ಸುದೀಪ್ ಮತ್ತು ಆಪ್ತ ಸಮಾಲೋಚಕರಾದ ಶ್ರೀಮತಿ ಅಂಬಿಕಾ ಹಾಜರಿದ್ದು, ಹೆಚ್ಐವಿ ಏಡ್ಸ್ ಕುರಿತಂತೆ ಆರೋಗ್ಯ ಶಿಕ್ಷಣ ನೀಡಿದರು. ಸದರಿ ರಕ್ತದಾನ ಶಿಬಿರದಲ್ಲಿ ಒಟ್ಟು 47 ಯೂನಿಟ್ (350 ಎಮ್ ಲ್ ರಂತೆ ) ರಕ್ತ ಸಂಗ್ರಹಿಸಲಾಯಿತು.ಶಿಬಿರದಲ್ಲಿ ಪಾಲ್ಗೊಂಡ ಸರ್ವರಿಗೂ ಹಣ್ಣುಗಳು, ಬಾದಾಮಿ ಹಾಲು ಮತ್ತು ಊಟ ದ ವ್ಯವಸ್ಥೆಯನ್ನು ಮಾಡಲಾಗಿತ್ತು.

Sep 7, 2023

Leave a Reply

Your email address will not be published. Required fields are marked *