ಚಿಕ್ಕಬಳ್ಳಾಪುರ: ನಗರದಲ್ಲಿ ಸ್ಮಶಾನಗಳಲ್ಲಿ ಜಾಗದ ಕೊರತೆಯ ಜೊತೆಗೆ ಇರುವ ಸ್ಮಶಾನಗಳಲ್ಲಿ ಸ್ವಚ್ಛತೆ ಇಲ್ಲದೆ ಸೊರಗುತ್ತಿದ್ದು, ಕೂಡಲೇ ಸ್ವಚ್ಛಗೊಳಿಸುವಂತೆ ಆಗ್ರಹಿಸಿ ನಗರಸಭೆ ಸದಸ್ಯರು ಮತ್ತು ವಿವಿಧ ಸಮುದಾಯಗಳ ಮುಖಂಡರ ನಿಯೋಗ ಗುರುವಾರ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ನಂತರ ಡಿಎಸ್ಎಸ್ ಮುಖಂಡ ಸುಧಾ ವೆಂಕಟೇಶ್ ಮಾತನಾಡಿ, ನಗರದಲ್ಲಿ ರಡು ದಲಿತ ಸಮುದಾಯದವರಿಗೆ ಸೇರಿದ ಸ್ಮಶಾನಗಳೂ ಸೇರಿದಂತೆ ಒಟ್ಟು 8 ಸ್ಮಶಾನಗಳಿದ್ದು, ಈ ಎಲ್ಲ ಸ್ಮಶಾನಗಳಲ್ಲಿಯೂ ಗಿಡ ಗಂಟಿಗಳು ಬೆಳೆದು ಸಮಾಧಿ ಮಾಡಲು ಸಮಾಧಿಗಳಾಗಲೀ, ಜಾಗವೆ ಕಾಣಿಸದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ನಗರಸಭೆ ವ್ಯಾಪ್ತಿಯಲ್ಲಿರುವ ಸ್ಮಶಾನಗಳ ಸ್ವಚ್ಛತೆ ಮಾಡುವಂತೆ ಕೋರಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಅಲ್ಲದೆ ಚಿಕ್ಕಬಳ್ಳಾಪುರ ಪುಟ್ಟ ಗ್ರಾಮವಾಗಿದ್ದ ವೇಳೆ ಈ ಸ್ಮಶಾನಗಳನ್ನು ಗುರ್ತಿಸಲಾಗಿದ್ದು, ಹಲವು ಕಡೆ ಬಲಾಢ್ಯರು ಸ್ಮಶಾನ ಜಾಗಗಳನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗಾಗಿ ಜಾಗ ಇಳಿಮುಖವಾದರೆ, ಜನಸಂಖ್ಯೆ ಹೆಚ್ಚಾಗಿ ಸ್ಮಾಶನಗಳಲ್ಲಿ ಜಾಗದ ಕೊರತೆಯೂ ಏರ್ಪಟ್ಟಿದೆ. ಈ ಬಗ್ಗೆಯೂ ಗಮನ ಹರಿಸುವಂತೆ ಆಯುಕ್ತರಲ್ಲಿ ಕೋರಲಾಗಿದೆ ಎಂದು ತಿಳಿಸಿದರು.
5ನೇ ವಾರ್ಡಿನ ನಗರಸಭಾ ಸದಸ್ಯ ಜೆ. ನಾಗರಾಜ್ ಮಾತನಾಡಿ, ಈ ಹಿಂದೆ ಪಿತೃಪಕ್ಷಗಳ ಸಮಯದಲ್ಲಿ ಮಾತ್ರ ಸ್ಮಶಾನಗಳ ಸ್ವಚ್ಛತೆ ಮಾಡಲಾಗುತ್ತಿತ್ತು. ವರ್ಷಕ್ಕೊಮ್ಮೆ ಸ್ವಚ್ಛ ಮಾಡುವುದರಿಂದ ಸ್ಮಶಾನಗಳು ನಿರ್ವಹಣೆ ಇಲ್ಲದೆ ಗಿಡ ಗಂಟಿಗಳು ಬೆಳೆದು ಕಾಲಿಡಲೂ ಸಾಧ್ಯವಾಗದ ಸ್ಥಿತಿಗೆ ತಲುಪಿವೆ. ಹಾಗಾಗಿ ನಗರಸಭೆ ವತಿಯಿಂದ ಪ್ರತಿ ತಿಂಗಳೂ ಸ್ಮಶಾನಗಳ ಸ್ವಚ್ಛತೆ ಮಾಡಲು ಗಮನ ಹರಿಸಬೇಕೆಂದು ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ
ಎಂದರು.ಮನುಷ್ಯ ಎಷ್ಟೇ ಬದುಕಿದ್ದರೂ ಚಿರಶಾಂತಿಧಾಮದಲ್ಲಿ ಮಾತ್ರ ಶಾಶ್ವತ ಜಾಗ ಸಂಪಾದಿಸಲಿದ್ದು,ಇಂತಹ ಜಾಗದಲ್ಲಿ ಸ್ವಚ್ಛತೆಯ ಜೊತೆಗೆಅಗತ್ಯವಿರುವಷ್ಟು ಜಾಗವನ್ನು ನೀಡಲು ಸಂಬಂಧಪಟ್ಟ ಶಾಸಕರಿಗೂ ಮನವಿ ಮಾಡಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಮಂಜುನಾಥ್, ರಾಮಣ್ಣ, ಶಶಿ ಶೇಖರ್, ತರಕಾರಿ ವೆಂಕಟೇಶ್, ಡಿಎಸ್ಎಸ್ ಮುನಿವೆಂಕಟಸ್ವಾಮಿ, ನಾರಾಯಣ, ಶ್ರೀನಿವಾಸ್, ಮುರಳಿ ಮೋಹನ್, ಮಹದೇವಪ್ಪ, ವೆಂಕಟೇಶ್, ನಗರಸಭಾ ಸದಸ್ಯರಾದ ಗಜೇಂದ್ರ ಮತ್ತು ಮಹಾಕಾಳಿ ಬಾಬು ಸೇರಿದಂತೆ ಮತ್ತು ಇತರರು ಉಫಸ್ಥಿತರಿದ್ದರು.



