ಕೃಷಿ ಕ್ಷೇತ್ರದಲ್ಲಿ ಸಸ್ಯ ಸಂವೃದ್ಧಿ ಉತ್ತೇಜಕಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಕರೆ :

ಯಲಹಂಕ : ಕೃಷಿ ಕ್ಷೇತ್ರದಲ್ಲಿ ರಾಸಾಯನಿಕಗಳ ಬಳಕೆಯನ್ನು ತಗ್ಗಿಸಿ, ಪರಿಸರ ಸಂರಕ್ಷಣೆಯ ಜತೆಗೆ ಹೆಚ್ಚುತ್ತಿರುವ ಆಹಾರದ ಭದ್ರತೆಯನ್ನು ಪೂರೈಸುವ ನಿಟ್ಟಿನಲ್ಲಿ ಏಷಿಯನ್ ಪಿಜಿಪಿಆರ್ ಸಂಘಟನೆ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಬಾಗಲಕೋಟ ಇವರ ಸಹಯೋಗದೊಂದಿಗೆ ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಸಸ್ಯ ಸಂವೃದ್ಧಿ ಉತ್ತೇಜಕಗಳ ಬಳಕೆಯ ಬಗೆಗಿನ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಬೆಂಗಳೂರು ಕೃಷಿ ವಿ.ವಿ. ಕುಲಪತಿ ಡಾ.ಎಸ್ ವಿ ಸುರೇಶ್ ಉದ್ಘಾಟಿಸಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ ‘ಪ್ರಸ್ತುತ ಸನ್ನಿವೇಶದಲ್ಲಿ ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಸಾವಯವ ಕೃಷಿಯ ಭವಿಷ್ಯದ ವಿಷಯದಲ್ಲಿ ಸಸ್ಯ ಸಂವೃದ್ಧಿ ಉತ್ತೇಜಕ ರೈಜೋ ಬ್ಯಾಕ್ಟೀರಿಯಾ ಗಳ ಬಳಕೆ ಪ್ರಮುಖ ಪಾತ್ರ ವಹಿಸಲಿದ್ದು, ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಸಸ್ಯ ಸಂವೃದ್ಧಿ ಉತ್ತೇಜಕ ಬ್ಯಾಕ್ಟಿರಿಯಾ ಗಳ ಸಂಶೋಧನೆ ಮತ್ತು ಅದರ ವಿಸ್ತರಣೆ ಕುರಿತು ಹೆಚ್ಚು ಕಾರ್ಯೋನ್ಮುಖರಾಗಬೇಕಿದೆ.  ಸಸ್ಯ ಸಂವೃದ್ಧಿ ಉತ್ತೇಜಕಗಳ (ಪಿಜಿಪಿಆರ್) ಬಳಕೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿ ಪಿಜಿಪಿಆರ್ ಗೆ ಸಂಬಂಧಪಟ್ಟಂತೆ ಪ್ರತ್ಯೇಕ ಮಳಿಗೆಗಳನ್ನು ಸ್ಥಾಪಿಸಿ ಜಾಗೃತಿ ಮೂಡಿಸಲು ಪೂರಕವಾಗಿ ಸ್ಪಂದಿಸಲಿದ್ದೇವೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಏಷಿಯನ್ ಪಿಜಿಪಿಆರ್ ಸಂಘಟನೆಯ ಅಧ್ಯಕ್ಷ, ಅಮೇರಿಕಾದ ಅಬಮ್ ವಿ.ವಿ.ಯ ಪ್ರಾಧ್ಯಾಪಕ ಪ್ರೊ.ಎಂ.ಎಸ್.ರೆಡ್ಡಿ ಮಾತನಾಡಿ ‘ಸಸ್ಯ ಸಂವೃದ್ಧಿ ಉತ್ತೇಜಕ ರೈಜೋ ಬ್ಯಾಕ್ಟೀರಿಯಾ ಗಳ ಬಳಕೆ ಕುರಿತ 8ನೇ ಸಮ್ಮೇಳನ ವನ್ನು ಬೆಂಗಳೂರು ನಗರದಲ್ಲಿ ಆಯೋಜಿಸಿರುವುದು ನಿಜಕ್ಕೂ ಸಂತೋಷ ಉಂಟು ಮಾಡಿದೆ. ಇಲ್ಲಿ ಕೃಷಿ ಮತ್ತು ತೋಟಗಾರಿಕೆ ಕುರಿತ ಹಲವು ವಿಶ್ವವಿದ್ಯಾಲಯ ಗಳಿವೆ, ಸಂಶೋಧನಾ ಕೇಂದ್ರಗಳಿವೆ, ಉತ್ಪಾಧನಾ ಘಟಕಗಳಿವೆ, ಇದರಿಂದ ಹೆಚ್ಚಿನ ಕೃಷಿ ವಿಜ್ಞಾನಿಗಳು, ಕೃಷಿಕರು ಹಾಗೂ ಕೃಷಿ ಕ್ಷೇತ್ರದ ಇತರೆ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಪಿಜಿಪಿಆರ್ ಸಮ್ಮೇಳದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಜತೆಗೆ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಿಜಿಪಿಆರ್ ನ ಕಳೆದ 7 ಅಂತಾರಾಷ್ಟ್ರೀಯ ಸಮ್ಮೇಳನಗಳ ಅಂಶಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಪಿಜಿಪಿಆರ್ ಕುರಿತು ಸಂಶೋಧನೆಯಲ್ಲಿ ನಿರತರಾಗಿರುವ ಸಂಶೋಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರಿಕಾ ವಿಜ್ಞಾನಿಗಳ ವಿ.ವಿ. ಬಾಗಲಕೋಟ ದ ಕುಲಪತಿ ಪ್ರೊ.ಎನ್.ಕೆ.ಹೆಗಡೆ ವಹಿಸಿದ್ದು, ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ವಿ.ವಿ.ಕುಲಪತಿ ಡಾ.ಎಂ.ಹನುಮಂತಪ್ಪ, ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ವಿ.ವಿ.ಕುಲಪತಿ ಡಾ.ಆರ್.ಸಿ.ಜಗದೀಶ್, ತೋಟಗಾರಿಕೆ ಇಲಾಖೆಯ ನಿವೃತ್ತ ಡಿಡಿಜಿ ಡಾ.ಎನ್.ಕೆ.ಕೃಷ್ಣಕುಮಾರ್, ತೋಟಗಾರಿಕಾ ವಿ.ವಿ.ಬೆಂಗಳೂರಿನ ಡೀನ್ ಡಾ.ಎಂ.ಕೆ.ಹೊನ್ನಬೈರಯ್ಯ, ಪಿಜಿಪಿಆರ್  ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ವಿ.ದೇವಪ್ಪ, ತೋಟಗಾರಿಕಾ ವಿಜ್ಞಾನಗಳ ವಿ.ವಿ.ಬಾಗಲಕೋಟ ದ ಸಂಶೋಧನಾ ನಿರ್ದೇಶಕ ಡಾ.ಮಹೇಶ್ವರಪ್ಪ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *