ಬಂಗಾರಪೇಟೆ :ಪಶುಗಳ ರಕ್ಷಣೆ ಹಾಗೂ ರೈತರ ಬದುಕಿಗೆ ದಾರಿ ದೀಪವಾಗಬೇಕಾಗಿದ್ದ ಪಶು ವೈದ್ಯ ಇಲಾಖೆಯ ಉಪನಿರ್ದೇಶಕರು ಮತ್ತು ವೈದ್ಯಾಧಿಕಾರಿಗಳು ಪಶು ಪಾಲನ ಯೋಜನೆಯ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ಗಂಭೀರ ಆರೋಪ ಮಾಡಿದರು.
ಪಟ್ಟಣದ ಡಾ: ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಎಷ್ಟೇ ಮನವಿ ಪತ್ರಗಳು ನೀಡಿದರು ಸಹ ನಮ್ಮ ಮನವಿಗಳಿಗೆ ಅಧಿಕಾರಿಗಳು ಯಾವುದೇ ಕಾನೂನು ರೀತಿ ಕ್ರಮ ಕೈಗೊಳ್ಳದ ಕಾರಣ ಅಂತಿಮವಾಗಿ ಸೆಪ್ಟೆಂಬರ್ 28ರಂದು ಜಿಲ್ಲಾ ಪಂಚಾಯಿತಿ ಎದುರು ಅನಿರ್ದಿಷ್ಟ ಅವಧಿ ಪ್ರತಿಭಟನೆ ಹಮ್ಮಿಕೊಂಡು, ಪಶು ವೈದ್ಯ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಬಯಲುಗೆಳೆದು ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವ ತನಕ ಅನಿರ್ದಿಷ್ಟಾವಧಿ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು.
ಪಶು ವೈದ್ಯ ಇಲಾಖೆ ರೈತರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ ಕುರಿ, ಹಂದಿ, ಹಸು,ಕೋಳಿ ಸಾಕಾಣಿಕೆ ಮತ್ತು ಗೋಶಾಲೆಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಸರ್ಕಾರ ಬಿಡುಗಡೆಗೊಳಿಸಿದೆ ಆದರೆ ಭ್ರಷ್ಟ ಅಧಿಕಾರಿಗಳು ಬಂದ ಹಣವನ್ನು ಲೂಟಿ ಮಾಡಿ ರೈತರ ಬದುಕಿಗೆ ಕಂಟಕ ಪ್ರಾಯವಾಗಿದ್ದಾರೆ.
ರೈತರ ಬಡವರ ಹಣವನ್ನು ನುಂಗಿ ನೀರು ಕುಡಿದ ಅಧಿಕಾರಿ ವರ್ಗ ಕೋಲಾರ ಜಿಲ್ಲೆಯ ಪಶು ವೈದ್ಯ ಇಲಾಖೆಯಲ್ಲಿ,ಗ್ರಾಮ ಪಂಚಾಯಿತಿಯಲ್ಲಿ ಹಾಗೂ ಮುಳುಬಾಗಿಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸರ್ವೇಶ್ ರವರ ಮಾತೃ ಇಲಾಖೆ ಪಶು ವೈದ್ಯ ಇಲಾಖೆ ಆದರೆ ರಾಜಕಾರಣಿಗಳಿಗೆ ಲಂಚವನ್ನು ನೀಡಿ ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಈಗಾಗಲೇ ಪಶುವೈದ್ಯ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ಮಾಡಿದ್ದಾರೆ ಅದರ ಬಗ್ಗೆ ತನಿಖೆ ಆಗಬೇಕು ಹಾಗೂ ಅವರು ಪಶುವೈದ್ಯ ಇಲಾಖೆಗೆ ವರ್ಗಾವಣೆಯಾಗಬೇಕು ಎಂದರು.
ಇವರ ಜೊತೆಗೆ ಕೋಲಾರದ ಪಶುವೈದ್ಯಾಧಿಕಾರಿ ಉಪನಿರ್ದೇಶಕರಾಗಿ ಕಾರ್ಯನಿರ್ಶಿಸುತ್ತಿರುವ ಗಂಗಾ ತುಳಸಿ ರಾಮ್ ಅಧಿಕಾರಿ ಸಹ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿ ಕೋಟ್ಯಾಂತರ ರೂಪಾಯಿಗಳು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯುವ ಘಟಕ. (ಚಿಂಟು)ಆರ್ಟ್ಸ್.ರಾಮಚಂದ್ರ, ಜಿಲ್ಲಾ ಕಾರ್ಮಿಕ ಘಟಕದ ಕಾರ್ಯದರ್ಶಿ ಅಂಬರೀಶ್, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಕೆವಿ ಶ್ರೀನಾಥ್ ಇದ್ದರು.