ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ 2 ದಿನಗಳ ಅಂತಾರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನಕ್ಕೆ ಚಾಲನೆ :

ಯಲಹಂಕ : ಕೆಲವೇ ವರ್ಷಗಳ ಹಿಂದೆ ಕೈಗಾರಿಕೆ ಮತ್ತು ತಂತ್ರಜ್ಞಾನಕ್ಕೆ ಅಗತ್ಯವಿರುವ ಸಾಮಗ್ರಿಗಳಿಗಾಗಿ ವಿದೇಶಗಳನ್ನೇ ಅವಲಂಬಿಸಿದ್ದ ಭಾರತ ಅಲ್ಪಾವಧಿಯಲ್ಲೇ ಅದೇ ತಾಂತ್ರಿಕ ಸಾಮಗ್ರಿಗಳನ್ನು ಜಗತ್ತಿನ ಬಹತೇಕ ರಾಷ್ಟ್ರಗಳಿಗೆ ರಪ್ತು ಮಾಡುವ ಮೂಲಕ ಜಗತ್ತು ಭಾರತದತ್ತ ಕೌತುಕದಿಂದ ನೋಡುವಂತೆ ಮಾಡುವಲ್ಲಿ ನಮ್ಮ ದೇಶದ ಯುವ ತಂತ್ರಜ್ಞರ ಕೊಡುಗೆ, ಪರಿಶ್ರಮ ಅಪಾರವಾದುದು ಎಂದು ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ, ಡಿಆರ್ ಡಿಓ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಜಿ.ಸತೀಶ್ ರೆಡ್ಡಿ ದೇಶದ ಯುವ ತಂತ್ರಜ್ಞರ ಸಾಧನೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಸಿವಿಲ್, ಏರೋನಾಟಿಕ್ಸ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನವೀನ ಅನ್ವೇಷಣೆಗಳ ಕುರಿತಾದ ಎರಡು ದಿನಗಳ ‘ಎರ್ಕ್ಯಾಮ್-2023’ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ ‘ನಮ್ಮ ದೇಶದ ಯುವ ತಂತ್ರಜ್ಞರು ತಾವು ಕಲಿತ ವೈಜ್ಞಾನಿಕ ಜ್ಞಾನವನ್ನು ಇನ್ನೂ ಹೆಚ್ಚಿನ ಅಧ್ಯಯನದೊಂದಿಗೆ ಸಂಶೋಧಾನಾತ್ಮಕವಾಗಿ ಪರಿವರ್ತಿಸುತ್ತಿದ್ದು, ಹೊಸ ಅನ್ವೇಷಣೆಯಲ್ಲಿ ತೊಡಗಿಕೊಳ್ಳುವ ಮೂಲಕ ಜಗತ್ತಿಗೆ ಕೊಡುಗೆಗಳನ್ನು ನೀಡುವತ್ತ ತಮ್ಮ ಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳು ತ್ತಿರುವ ಬಗ್ಗೆ ಹೆಮ್ಮೆ ಇದೆ.

ನಮ್ಮ ದೇಶದ ತಂತ್ರಜ್ಞರು ತಮ್ಮ ಕ್ಷೇತ್ರದಲ್ಲಿ ಸಾಗುತ್ತಿರುವ ವೇಗ, ಹೊಸ ಜಾಗತಿಕ ಅನ್ವೇಷಣೆಗಳ ಕೊಡುಗೆಯನ್ನು ಗಮನಿಸಿದರೆ ಮುಂಬರುವ ಐದು ವರ್ಷಗಳಲ್ಲಿ
ಗುಣಮಟ್ಟದ ವೈಜ್ಞಾನಿಕ ಸಲಕರಣೆಗಳು, ಯುದ್ಧ ವಿಮಾನಗಳು, ಡ್ರೋನ್ ಗಳು ಮುಂತಾದ ತಾಂತ್ರಿಕ ಸಲಕರಣೆಗಳನ್ನು ಜಗತ್ತಿನ ಬಹುತೇಕ ದೇಶಗಳಿಗೆ ಯಥೇಚ್ಛವಾಗಿ ರಪ್ತು ಮಾಡುವ ಮೂಲಕ ಭಾರತವನ್ನು ವಿಶ್ವಗುರು ವಾಗಿಸುವತ್ತ ಕೊಂಡೊಯ್ಯುವಲ್ಲಿ ಸಂಶಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎನ್ ಆರ್ ಶೆಟ್ಟಿ ‘ಕೌಶಲ್ಯಾಧಾರಿತ ಕಲಿಕೆ, ಹೊಸ ಅನ್ವೇಷಣೆಗಳ ಬಗೆಗಿನ ತೀವ್ರ ಆಸಕ್ತಿ, ಕಲಿತದ್ದನ್ನು ಕಾರ್ಯ ರೂಪಕ್ಕೆ ತರುವಂತಹ ಉತ್ಕಟ ಇಚ್ಛಾಶಕ್ತಿ, ಇವುಗಳು ನಮ್ಮ ಯುವ ತಂತ್ರಜ್ಞರನ್ನು ಜಾಗತಿಕ ಮಟ್ಟಕ್ಕೆ ಬೆಳೆಸಬಲ್ಲವು ಎಂದು ತಮ್ಮ ಸಂದೇಶದ ಮೂಲಕ ತಿಳಿಸಿದರು.

ಕಾರ್ಯಕ್ರಮದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಸೆಟ್ ಮ್ಯಾನೇಜ್ಮೆಂಟ್ ನ ಅಧ್ಯಕ್ಷ ಡಾ.ನವಿಲ್ ಶೆಟ್ಟಿ, ಸೈನ್ಟಿಫಿಕ್ ಇನೋವೇಷನ್ ಅಂಡ್ ರೀಸರ್ಚ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಹಾಗೂ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಮಾಜಿ ಮಹಾ ನಿರ್ದೇಶಕ ಪ್ರೊ.ಯು.ಚಂದ್ರ ಶೇಖರ್, ಟ್ರೈನ್ ಟೆಕ್ನಾಲಜೀಸ್ ನ ಡಾ.ಅತುಲ್ ಸಿಂಘಾಲ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾ ವಿದ್ಯಾಲಯ ದ ಪ್ರಾಂಶುಪಾಲ ಡಾ.ಎಚ್.ಸಿ.ನಾಗರಾಜ್, ನಿಟ್ಟೆ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ.ವಿ.ಶ್ರೀಧರ್, ಪ್ರಾಧ್ಯಾಪಕರಾದ ಡಾ.ವೆಂಕಟ ಕೃಷ್ಣನ್, ಡಾ.ಪ್ರಹ್ಲಾದ್ ತೆಂಗಳಿ, ಡಾ.ಜಿ.ರಾಘವ, ಡಾ.ವಿ.ನಾಗೇಂದ್ರ, ಡಾ.ಕಪಿಲನ್, ಡಾ.ಶ್ರೀಕಾಂತ್, ಡಾ.ಸುಧೀರ್ ರೆಡ್ಡಿ ಸೇರಿದಂತೆ ದೇಶ-ವಿದೇಶಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ತಂತ್ರಜ್ಞರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *