ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜು ಪ್ರೊಕ್ಯೂರ್ ಡೆಂಟಲ್ ಆಸ್ಪತ್ರೆ ಸಹಯೋಗ :
ಯಲಹಂಕ : ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನ ಎನ್ .ಎಸ್.ಎಸ್ ಘಟಕ ಹಾಗೂ ಪ್ರೊಕ್ಯೂರ್ ಡೆಂಟಲ್ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ “ಬಾಯಿ ಕ್ಯಾನ್ಸರ್” ಕುರಿತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಎನ್.ಎಸ್.ಎಸ್ ಪ್ರಾದೇಶಿಕ ನಿರ್ದೇಶಕ ಡಿ.ಕಾರ್ತಿಕೇಯನ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಇಂದಿನ ಯುವಪೀಳಿಗೆಯು ಧೂಮಪಾನ, ತಂಬಾಕು ಸೇವನೆಯಂ ತಹ ದುಷ್ಚಟಗಳಿಗೆ ದಾಸರಾಗಿ ಚಿಕ್ಕವಯಸ್ಸಿನಲ್ಲಿಯೇ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳೆವಣಿಗೆಯಾಗಿದೆ. ಈ ದಿಸೆಯಲ್ಲಿ ಬಾಯಿ ಕ್ಯಾನ್ಸರ್ ಲಕ್ಷಣಗಳು, ಹರಡುವಿಕೆ ಹಾಗೂ ತಡೆಗಟ್ಟುವ ವಿಧಾನಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಜಾಥಾ ಆಯೋಜಿಸಲಾಗಿದೆ ಎಂದರು.
ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎನ್.ವೆಂಕಟೇಶ್ ಮಾತನಾಡಿ ‘ಪ್ರಪಂಚದಲ್ಲಿ ಶೇ.23%ರಷ್ಟು ಯುವಕರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿಯಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಧೂಮಪಾನ ಮತ್ತು ತಂಬಾಕು ಸೇವೆನೆಯಿಂದ ಆಗುವ ಹಾನಿ, ತಡೆಗಟ್ಟುವ ವಿಧಾನಗಳ ಕುರಿತು ತಿಳಿದುಕೊಳ್ಳುವುದರ ಜೊತೆಗೆ ಕುಟುಂಬ ಸದಸ್ಯರು, ನೆರೆಹೊರೆಯವರು ಹಾಗೂ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ಕಾಯಿಲೆ ಬರದಂತೆ ತಡೆಗಟ್ಟಬೇಕು ಎಂದರು.
ಕಾಲೇಜಿನಿಂದ ಆರಂಭವಾದ ಜಾಗೃತಿ ಜಾಥಾ, ಉಪನಗರ ಪೊಲೀಸ್ ಠಾಣೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಮದರ್ ಡೈರಿ ವೃತ್ತ, ಉಪನಗರ ಬಸ್ ನಿಲ್ದಾಣ ಹಾಗೂ ಚಿಕ್ಕಬೊಮ್ಮಸಂದ್ರ ಕ್ರಾಸ್ ಸೇರಿದಂತೆ ಯಲಹಂಕ ಉಪನಗರದ ವಿವಿಧ ಬಡಾವಣೆಗಳ ಮೂಲಕ ಸಾಗಿತು.
ಜಾಥಾದಲ್ಲಿ ಸುಮಾರು 350 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಇದೇ ವೇಳೆ ವಿದ್ಯಾರ್ಥಿಗಳು, ಸಿಗರೇಟ್ ಹಾಗೂ ತಂಬಾಕು ಸೇವನೆ ಮಾಡುವುದಿಲ್ಲ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಜಾಥಾದಲ್ಲಿ ಪ್ರೊಕ್ಯೂರ್ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ.ಕೃಷ್ಣರಾಜ್, ಮುಖ್ಯ ಶಸ್ತ ಚಿಕಿತ್ಸಕ ಡಾ.ಆರ್.ವಿಜಯ್ ಆನಂದ್, ವ್ಯವಸ್ಥಾಪಕ ಜೋಯಲ್, ಎನ್.ಎಸ್.ಎಸ್ ಅಧಿಕಾರಿ ಕೆ.ಎಸ್.ನವೀನ್ ಕುಮಾರ್ ಸೇರಿದಂತೆ ಇನ್ನಿತರರಿದ್ದರು.

