ಯಲಹಂಕ : ಯಲಹಂಕ ತಾಲ್ಲೂಕು ಜಾಲ ಹೋಬಳಿಯ ಕಟ್ಟಿಗೇನಹಳ್ಳಿ ಗ್ರಾಮದ ಸ.ನಂ.28ರಲ್ಲಿ ಸುಮಾರು ಏಳೆಂಟು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದ 17 ಮನೆಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಏಕಾಏಕಿ ತೆರವು ಗೊಳಿಸಿದ್ದು, 17 ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ(ಕೆಂಪು ಸೇನೆ)ಯ ನೂರಾರು ಕಾರ್ಯಕರ್ತರು ಯಲಹಂಕ ಮಿನಿ ವಿಧಾನ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 11 ಗಂಟೆಗೆ ಮಿನಿವಿಧಾನ ಸೌಧದ ಮುಂದೆ ಜಮಾಯಿಸಿದ ದ.ಸಂ.ಸ. ಕೆಂಪು ಸೇನೆಯ ನೂರಾರು ಕಾರ್ಯಕರ್ತರು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ 17 ಕುಟುಂಬಗಳು ಏಳೆಂಟು ವರ್ಷಗಳ ಹಿಂದೆ ಯಲಹಂಕ ರೈಲ್ವೆ ನಿಲ್ದಾಣದ ಸಮೀಪ ವಾಸವಾಗಿದ್ದು, ಅವರನ್ನು ಬದಲಿ ಜಾಗ ನೀಡಿ ಕಟ್ಟಿಗೇನಹಳ್ಳಿಯ ಸ.ನಂ‌.28ರ ಪ್ರಸಕ್ತ ಜಾಗದಲ್ಲಿ ಪುನರ್ವಸತಿ ಕಲ್ಪಿಸಿ ಸ್ಥಳಾಂತರ ಮಾಡಿದ್ದರು. ಆದರೆ ಇದೀಗ ಈ 17 ಕುಟುಂಬ ಗಳನ್ನು ಏಕಾಏಕಿ ಇಲ್ಲಿಂದ ತೆರವು ಗೊಳಿಸಿ ಒಕ್ಜಲೆಬ್ಬಿಸಲಾಗಿದೆ. ಸರ್ಕಾರದ ಆದೇಶದಂತೆಯೇ ಅಕ್ರಮ-ಸಕ್ರಮದ ಅಡಿಯಲ್ಲಿ ಸಕ್ರಮ ಮಾಡಲು 94ಸಿಸಿ ಅಡಿ ಯಲ್ಲಿ ಎಲ್ಲಾ 17 ಕುಟುಂಬಗಳು ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಆದರೆ ಇವರ ಅರ್ಜಿಯನ್ನು ಪರಿಶೀಲಿಸಿ, ಪುರಸ್ಕರಿಸಬೇಕಿದ್ದ ಕಂದಾಯ ಅಧಿಕಾರಿಗಳು ಅದನ್ನು ಮಾಡದೆ ಏಕಾಏಕಿಯಾಗಿ ಜೆಸಿಬಿ ಗಳಿಂದ ಮನೆ ತೆರವುಗೊಳಿಸಿ, ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಈ 17 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಶೇಷ ತಹಸೀಲ್ದಾರ್ ಶಿವಕುಮಾರ್ ಪ್ರತಿಭಟನಾ ಕಾರರಿಂದ ಅವರ ಅಹವಾಲು ಪತ್ರ ಸ್ವೀಕರಿಸಿ, ಉನ್ನತ ಅಧಿಕಾರಿ ಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ(ಕೆಂಪುಸೇನೆ)ಯ ರಾಜ್ಯ ಕಾರ್ಯಾದ್ಯಕ್ಷ ಜಿ.ಗುರುಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಶ್ರೀನಿವಾಸ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಎಂ.ಮುರಳಿ, ರಾಜ್ಯ ಕಾರ್ಯದರ್ಶಿ ಡಿ.ವಿ. ವೀರಭದ್ರೇಗೌಡ ಸೇರಿದಂತೆ ಸಂಘಟನೆಯ ನೂರಾರು ಕಾರ್ಯಕರ್ತರಿದ್ದರು.

ಈ ನಡುವೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಗಳಿಗೂ ಸಹ ಈ ಕುರಿತು ಮನವಿ ಸಲ್ಲಿಸಿದ್ದು, ಪುನರ್ವಸತಿಯ ನಿರೀಕ್ಷೆಯಲ್ಲಿ ಈ 17 ಕುಟುಂಬ ಗಳು ಕಾಲ ನೂಕುವಂತಾಗಿದೆ.

Leave a Reply

Your email address will not be published. Required fields are marked *