ಪಬ್ಲಿಕ್ ಪವರ್ ಬೆಂಗಳೂರು ತಲುಪಿದ ಮಹಿಳಾ ಪೋಲೀಸ್ ತಂಡಕ್ಕೆ ಸ್ವಾಗತ ಸನ್ಮಾನ :
ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಭಾಗಿ
ಯಲಹಂಕ : ಕೇಂದ್ರ ಸರ್ಕಾರದ ನಾರಿಶಕ್ತಿ, ಬೇಟಿ ಬಚಾವೋ ಬೇಟಿ ಪಡಾವೋ, ಮಹಿಳಾ ಸಬಲೀಕರಣ, ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆ ಕುರಿತು ದೇಶವ್ಯಾಪಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗ ದೊಂದಿಗೆ ಆಯೋಜಿಸಿರುವ ಸಿಆರ್ ಪಿಎಫ್ ಮಹಿಳಾ ಪೋಲಿಸ್ ಬೈಕ್ ಯಾತ್ರೆಯ ತಂಡ ಕನ್ಯಾಕುಮಾರಿ ಯಿಂದ ಬೆಂಗಳೂರು ತಲುಪಿರುವ ಹಿನ್ನೆಲೆಯಲ್ಲಿ ಮಹಿಳಾ ಬೈಕ್ ಯಾತ್ರಿಗಳಿಗೆ ಯಲಹಂಕ ಸಿಆರ್ ಪಿಎಫ್ ಕೇಂದ್ರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಯಲಹಂಕದ ಅಂಬೇಡ್ಕರ್ ಭವನದಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಸಿಆರ್ ಪಿಎಫ್ ಕರ್ನಾಟಕ ಕೇರಳ ವಿಭಾಗದ ಐಜಿಪಿ ಟಿ.ವಿಕ್ರಮ್ ಮಾತನಾಡಿ ‘ಕೇಂದ್ರ ಸರ್ಕಾರದ ನಾರಿಶಕ್ತಿ, ಬೇಟಿ ಬಚಾವೋ ಬೇಟಿ ಪಡಾವೋ, ಮಹಿಳಾ ಸಬಲೀಕರಣ, ರಾಷ್ಟ್ರೀಯ ಐಕ್ಯತೆ, ಸಮಗ್ರತೆ ಕಾರ್ಯಕ್ರಮಗಳ ಬಗ್ಗೆ ದೇಶವ್ಯಾಪಿ ಅರಿವು ಮೂಡಿಸುವುದು ಈ ಮಹಿಳಾ ಬೈಕ್ ಯಾತ್ರೆಯ ಪ್ರಮುಖ ಧ್ಯೇಯವಾಗಿದ್ದು, ಈ ದಿಸೆಯಲ್ಲಿ ದಕ್ಷಿಣದ ಕನ್ಯಾಕುಮಾರಿ, ಉತ್ತರದ ಶ್ರೀನಗರ, ಉತ್ತರ ಪೂರ್ವದ ಶಿಲ್ಲಾಂಗ್ ನಿಂದ ಪ್ರತಿ ವಿಭಾಗದಿಂದ 25ರಂತೆ ಒಟ್ಟು75 ಎನ್ ಫೀಲ್ಡ್ ಬುಲೆಟ್ ನಲ್ಲಿ ಸಹಸವಾರರು ಸೇರಿದಂತೆ ಒಟ್ಟು 150 ಸಿಆರ್ ಪಿಎಫ್ ನ ಮಹಿಳಾ ಪೋಲೀಸರು ಅಕ್ಟೋಬರ್ 3ರಂದು ಮಹಿಳಾ ಶಕ್ತಿ ಜಾಗೃತಿ ಯಾತ್ರೆ ಕೈಗೊಂಡಿದ್ದು, ಈ ಯಾತ್ರೆ 15 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಒಟ್ಟು 10 ಸಾವಿರ ಕಿ.ಮೀ.ದೂರ ಕ್ರಮಿಸಿ, ಅಕ್ಟೋಬರ್ 31ರಂದು ಗುಜರಾತ್ ನಲ್ಲಿರುವ ಸರದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಯ ಬಳಿ ತಲುಪುವ ಮೂಲಕ ಮಹಿಳಾ ಶಕ್ತಿ ಜಾಗೃತಿ ಯಾತ್ರೆಯನ್ನು ಅಂತ್ಯಗೊಳಿಸ ಲಿದ್ದಾರೆ. ಇಂದು ದಕ್ಷಿಣ ವಿಭಾಗದ ಮಹಿಳಾ ಬೈಕ್ ಯಾತ್ರಿಗಳು ಕನ್ಯಾಕುಮಾರಿಯಿಂದ ಬೆಂಗಳೂರು ತಲುಪಿರುವ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಿ ಸನ್ಮಾಸುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಎಂ.ಎಸ್. ಅರ್ಚನ, ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾಪಟು ಟಿ.ಎಸ್.ದಿವ್ಯ ಕಾರ್ಯಕ್ರಮದಲ್ಲಿ ನಾರಿಶಕ್ತಿ, ಮಹಿಳಾ ಸಬಲೀಕರಣ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿಆರ್ ಪಿಎಫ್ ಯಲಹಂಕ ಕೇಂದ್ರದ ಡಿಐಜಿ ಇಮಾನ್ಷುಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದರಾಮಣ್ಣ, ಹಿರಿಯ ಸಹಾಯಕ ನಿರ್ದೇಶಕ ವಿಜಯಕುಮಾರ್ ಎನ್. ಬೆಂಗಳೂರು ಉತ್ತರ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶಶಿಧರ್ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದು, ಸಿಆರ್ ಪಿಎಫ್ ಮಹಿಳಾ ಪೋಲಿಸ್ ಬೈಕ್ ಯಾತ್ರಿಗಳಿಗೆ ಶುಭ ಹಾರೈಸಿದರು.

