ಯಲಹಂಕ : 18 ಗ್ರಾಮಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಚಿಸಲ್ಪಟ್ಟಿರುವ ಕೇಂದ್ರ ಗ್ರಾಮಾಭಿವೃದ್ಧಿ ಮಂಡಳಿಯ ‘ಪೀಪಲ್ ಟ್ರಸ್ಟ್ ಸೇವಾ ಕೇಂದ್ರ ಶ್ರೀರಾಮನಹಳ್ಳಿ’ ಮತ್ತು ರೋಟರಿ ಕ್ಲಬ್ ಇವರ ಸಹಯೋಗದೊಂದಿಗೆ ಯಲಹಂಕ ಕ್ಷೇತ್ರದ ರಾಜಾನುಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಟಿಟಿಡಿ ಆಡಳಿತ ಮಂಡಳಿ ನಿರ್ದೇಶಕ,ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ‘ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಪೀಟರ್ ಟ್ರಸ್ಟ್ ಸೇವಾ ಕೇಂದ್ರ ಶ್ರೀರಾಮನಹಳ್ಳಿ ಹಾಗೂ ರೋಟರಿ ಕ್ಲಬ್ ಇವರ ಸಹಯೋಗದೊಂದಿಗೆ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಇದರಲ್ಲಿ ಅಕ್ಸೆಂಚರ್, ಹೆಚ್.ಪಿ, ಕ್ರೋಮ, ಟೈಟಾನ್, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳು ಪಾಲ್ಹೊಂಡಿವೆ. ಸ್ಥಳದಲ್ಲೇ ಯುವಕರನ್ನು ಸಂದರ್ಶನ ಮಾಡಿ ಅವರ ವ್ಯಾಸಂಗಕ್ಕೆ ಅನುಗುಣವಾಗಿ ಉದ್ಯೋಗ ನೀಡುವ ಭರವಸೆ ಯೊಂದಿಗೆ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿವೆ. ನಿರುದ್ಯೋಗ ಸಮಸ್ಯೆ ತಾಂಡವ ವಾಡುತ್ತಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಈ ರೀತಿಯ ಉದ್ಯೋಗ ಮೇಳ ಆಯೋಜಿಸುವ ಮೂಲಕ ಯುವಕರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಕಲ್ಪಿಸುವುದು ಈ ಉದ್ಯೋಗ ಮೇಳದ ಗುರಿಯಾಗಿದೆ. ಈ ಮೂಲಕವಾದರೂ ಯುವಕರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ತಕ್ಕ ಮಟ್ಟಿಗಾದರೂ ಹೋಗಲಾಡಿಸಬೇಕು ಎಂಬುದು ನಮ್ಮ ಉದ್ದೇಶ, ಹೆಚ್ಚಿನ ಯುವಕರು ಈ ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಂಡರೆ ಆಯೋಜಕರ ಪ್ರಯತ್ನ ಸಾರ್ಥಕವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಅಂಬಿಕಾ ರಾಜೇಂದ್ರಕುಮಾರ್, ಉಪಾಧ್ಯಕ್ಷ ಎ.ವೆಂಕಟೇಶ್, ಜಿ.ಪಂ.ಮಾಜಿ ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್, ಮಾಜಿ ಗ್ರಾ.ಪಂ.ಅಧ್ಯಕ್ಷ ಎಸ್ ಜಿ ನರಸಿಂಹಮೂರ್ತಿ(ಎಸ್ ಟಿ ಡಿ ಮೂರ್ತಿ), ಪಿಡಿಓ ನಾಗರಾಜ್, ಗ್ರಾ.ಪಂ.ಸದಸ್ಯರಾದ ಸಾದೇನಹಳ್ಳಿ ಚಿಕ್ಕಣ್ಣ, ಪ್ರಕಾಶ್, ಹನುಮೇಗೌಡ, ಸುಜಾತಮ್ಮ, ಮಮತಾ, ಮುತ್ತುವೇಣು, ಬಾಲಾಜಿ, ರೋಟರಿ ಸಂಸ್ಥೆಯ ದಿನೇಶ್ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳಿದ್ದರು.
