ಪಾಲನಹಳ್ಳಿಯ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ರಕ್ಷಣಾ ವೇದಿಕೆ ವತಿಯಿಂದ 9ನೇ ವರ್ಷದ ವಾಲ್ಮೀಕಿ ಜಯಂತ್ಯೋತ್ಸವ :
ಬ್ಯಾಟರಾಯನಪುರ : ಕಾಡಿನಲ್ಲಿ ಹುಟ್ಟಿ, ಬೆಳದರೂ ಸಹ ಮಹರ್ಷಿ ವಾಲ್ಮೀಕಿ ಯವರು ಅಪರಿಮಿತ ಜ್ಞಾನ ಗಳಿಸಿ, ಮಹಾನ್ ಕೃತಿ ರಚಿಸಿ ದೇಶಕ್ಕೆ ಆದರ್ಶದ ನೀತಿಯನ್ನು ಬೋಧಿಸುವ ಮೂಲಕ ಸರ್ವಕಾಲಕ್ಕೂ ಸ್ಮರಣೀಯ ರೆನಿಸಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ವಾಲ್ಮೀಕಿ ಮಹರ್ಷಿಗಳ ಜ್ಞಾನ ಸಾಧನೆ ಕುರಿತು ಗುಣಗಾನ ಮಾಡಿದರು.
ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಗ್ರಾಮದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ 9ನೇ ವರ್ಷದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಹುಟ್ಟು ಅಥವಾ ಹಣ ಗಳಿಕೆಯಿಂದ ಯಾರೂ ಸಹ ಶ್ರೇಷ್ಟರಾಗಲು ಸಾಧ್ಯವಿಲ್ಲ. ಜ್ಞಾನ ಮತ್ತು ಆದರ್ಶಗಳನ್ನು ಬೆಳೆಸಿಕೊಳ್ಳುವ ಎಲ್ಲರಿಗೂ ಶ್ರೇಷ್ಠ ರೆನಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ ನಿದರ್ಶನವಾಗಿ ಮಹರ್ಷಿ ವಾಲ್ಮೀಕಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮ ದೇಶದಲ್ಲಿ ಜನಜನಿತರಾಗಿದ್ದಾರೆ.
ವಾಲ್ಮೀಕಿ ಮಹರ್ಷಿಗಳು ಸಹಸ್ರಾರು ವರ್ಷಗಳ ಹಿಂದೆ ಬರೆದ ರಾಮಾಯಣ ಕೃತಿಯಲ್ಲಿ ಸರ್ವಕಾಲದಲ್ಲೂ ಸ್ಮರಣೀಯವಾದ ಆದರ್ಶವಿದೆ. ಅಂತಹ ಉನ್ನತ ಆದರ್ಶವನ್ನು ನಮಗೆ ನೀಡಿರುವ ವಾಲ್ಮೀಕಿ ಮಹರ್ಷಿಗಳ ದೂರದರ್ಶಿತ್ವ ನಿಜಕ್ಕೂ ಪ್ರಶಂಸನೀಯ. ದೇಶದ ಮಹೋನ್ನತ ಮಹರ್ಷಿಗಳಲ್ಲಿ ವಾಲ್ಮೀಕಿ ಯವರು ಅಂಗ್ರಪಂಕ್ತಿ ಯಲ್ಲಿ ನಿಲ್ಲುತ್ತಾರೆ. ಜಾತಿಯಿಂದ ಅಥವಾ ಶ್ರೀಮಂತಿಕೆಯಿಂದ ಯಾರೂ ಶ್ರೇಷ್ಟರಾಗಲು ಸಾಧ್ಯವಿಲ್ಲ, ನಾವು ಗಳಿಸುವ ಜ್ಞಾನ ಮತ್ತು ಆದರ್ಶಗಳಿಂದ ಮಾತ್ರ ಶ್ರೇಷ್ಟರಾಗಬಹುದು ಎಂಬುದಕ್ಕೆ ವಾಲ್ಮೀಕಿ ಮಹರ್ಷಿಗಳಿಗಿಂತ ಬೇರೆ ನಿದರ್ಶನ ಬೇಕಿಲ್ಲ.
ಕಳೆದ 9 ವರ್ಷಗಳಿಂದ ಪಾಲನಹಳ್ಳಿಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ರಕ್ಷಣಾ ವೇದಿಕೆ ವತಿಯಿಂದ ವಿಜೃಂಭಣೆಯಿಂದ ಮಹರ್ಷಿ ವಾಲ್ಮೀಕಿ ಯವರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಸಂತೋಷ ವಿಷಯ, ಇಂತಹ ಪ್ರಾತಃ ಸ್ಮರಣೀಯರ ಜಯಂತಿ ಆಚರಿಸುವುದರಿಂದ ನಮ್ಮಲ್ಲಿನ ದುಷ್ಟಗುಣಗಳು ನಶಿಸಿ ಸದ್ಗುಣಗಳು ಮೈಗೂಡುತ್ತವೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಚಿವ ಕೃಷ್ಣಬೈರೇಗೌಡರಿಗೆ ಗೌರವ ಸನ್ಮಾನ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಗೋಪಾಲ್, ಕಾಂಗ್ರೆಸ್ ಮುಖಂಡರಾದ
ವೆಂಕಟರಮಣ ರೆಡ್ಡಿ
ಗೋಕುಲ್ ರೆಡ್ಡಿ, ಶ್ರೀನಿವಾಸಯ್ಯ, ಶಿವಕುಮಾರ್, ಮಂಜುನಾಥ್ ಎ, ಈರಪ್ಪ, ಮುನಿನಾರಾಯಣ,
ಮುನಿತಾಯಪ್ಪ, ನಾಗೇಂದ್ರ ಕುಮಾರ್, ಕೋಗಿಲು
ಮುನಿನಾಗಪ್ಪ, ತಿರುಮೇನಹಳ್ಳಿ
ರಾಜಣ್ಣ ಸೇರಿದಂತೆ ವಾಲ್ಮೀಕಿ ನಾಯಕ ಸಮುದಾಯದ ಕುಲ ಬಾಂಧವರು ಹಾಗೂ ಗ್ರಾಮಸ್ಥರಿದ್ದರು.




