ಪವರ್ ಗ್ರೀಡ್ ಸಂಸ್ಥೆಯಿಂದ ಸಿಂಗನಾಯಕನಹಳ್ಳಿಯಲ್ಲಿ ವಾಕಥಾನ್ :
ಯಲಹಂಕ : ಜಾಗೃತಿ ತಿಳುವಳಿಕೆ ಸಪ್ತಾಹ(ವಿಜಿಲೆನ್ಸ್ ಅವೇರ್ನೆಸ್ ಸಪ್ತಾಹ)ದ ಪ್ರಯುಕ್ತ ಸಿಂಗನಾಯಕನಹಳ್ಳಿಯ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯ ನೂರಾರು ಸಿಬ್ಬಂದಿಗಳು ಶನಿವಾರ ವಾಕಥಾನ್ ನಡೆಸಿ ಭ್ರಷ್ಟಾಚಾರದ ವಿರುದ್ಧ ಜನ ಜಾಗೃತಿ ಮೂಡಿಸಿದರು.
ಪವರ್ ಗ್ರೀಡ್ ಸಂಸ್ಥೆಯ ಕಚೇರಿ ಬಳಿಯಿಂದ ವಾಕಥಾನ್ ನಲ್ಲಿ ಸಾಗಿದ ಸಂಸ್ಥೆಯ ನೂರಾರು ಸಿಬ್ಬಂದಿಗಳು ಭ್ರಷ್ಟಾಚಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಸಿಂಗನಾಯಕನಹಳ್ಳಿಯ ವಿದ್ಯಾಪೀಠ ಶಾಲೆಯವರೆಗೂ ತೆರಳಿ ಜನ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯ ಕಾರ್ಯಪಾಲಕ ನಿರ್ದೇಶಕ ತರುಣ್ ಬಜಾಜ್ ಮಾತನಾಡಿ ‘ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಗುರಿ ಕೇವಲ ಪವರ್ ಗ್ರಿಡ್ ಸಂಸ್ಥೆಯದ್ದಾದರೆ ಸಾಲದು, ಪ್ರತಿ ಹಳ್ಳಿ, ಪ್ರತಿ ಗ್ರಾಮ ಪಂಚಾಯಿತಿ, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರ ಹೀಗೆ ಎಲ್ಲಾ ಹಂತದಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವಂತೆ ಆಗಬೇಕು. ವಿಶೇಷವಾಗಿ ಶಾಲಾ ಮಕ್ಕಳು, ಯುವಕರು, ನಾಗರೀಕರಿಗೆ ಭ್ರಷ್ಟಾಚಾರ ನಿರ್ಮೂಲನೆಯ ಸಂದೇಶ ಸಾರುವುದು ನಮ್ಮ ಜಾಗೃತಿ ಜಾಥಾದ ಮೂಲ ಉದ್ದೇಶವಾಗಿದ್ದು, ಪವರ್ ಗ್ರಿಡ್ ಸಂಸ್ಥೆಯ ದೇಶದ ಎಲ್ಲಾ ಶಾಖೆಗಳಲ್ಲಿ ಇಂದು ಏಕಕಾಲದಲ್ಲಿ ಭ್ರಷ್ಟಾಚಾರದ ವಿರುದ್ಧದ ಈ ಜಾಗೃತಿ ಜಾಥಾ ಹಮ್ಮಿಕೊಳ್ಳ ಲಾಗಿದೆ. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯಾದರೆ, ದೇಶದ ಪ್ರಗತಿ, ಘನತೆ, ಗೌರವ ಇನ್ನೂ ಹೆಚ್ಚಾಗಲಿದೆ ಎಂದರು.
