ಯಲಹಂಕ : ಯಲಹಂಕ ನಗರದ ಕೆಂಪೇಗೌಡ ವಾರ್ಡ್ 1ರ ವ್ಯಾಪ್ತಿಯ ವೆಂಕಟಾಲದ ಶ್ರೀ ಅಭಯ ಮಹಾಗಣಪತಿ  ದೇವಾಲಯದ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಎರಡು ದಿನಗಳ ಕಡಲೆಕಾಯಿ ಪರಿಷೆ ಮಳೆಯ ನಡುವೆಯೂ ಅಸಂಖ್ಯಾತ ಜನರ ಪಾಲ್ಗೊಳ್ಳುವಿಕೆಯಿಂದ ಭಾನುವಾರ ಸಂಜೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಬಿಬಿಎಂಪಿ ಮಾಜಿ ಸದಸ್ಯರು, ಯಲಹಂಕ ನಗರಸಭೆ ಮಾಜಿ ಅಧ್ಯಕ್ಷರಾದ ಕೆಂಪೇಗೌಡರ ನೇತೃತ್ವದಲ್ಲಿ, ಭಕ್ತಾದಿಗಳ ಸಹಕಾರದೊಂದಿಗೆ ಕಳೆದ 9 ವರ್ಷಗಳಿಂದ  ನಡೆಯುತ್ತಿರುವ ಈ ಕಡಲೆಕಾಯಿ ಪರಿಷೆ ಬೆಂಗಳೂರು ಉತ್ತರ ಭಾಗದಲ್ಲಿ ಬಸವನಗುಡಿಯ ಕಡಲೆಕಾಯಿ ಪರಿಷೆಯಷ್ಟೇ ಮಹತ್ವ ಪಡೆದುಕೊಂಡಿದೆ.

ಶನಿವಾರ ಮತ್ತು ಭಾನುವಾರ ನಡೆದ ವೆಂಕಟಾಲ ಕಡಲೆಕಾಯಿ ಪರಿಷೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂ ಗ್ರಾಮಾಂತರ, ಜಾವಗಲ್, ಪಾವಘಡ, ಆಂಧ್ರದ ಕದಿರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರರಾಜ್ಯ ಗಳಿಂದ  ಆಗಮಿಸಿದ್ದ ನೂರಾರು ಕಡಲೆಕಾಯಿ ವ್ಯಾಪಾರಿಗಳು ಪರಿಷೆಯಲ್ಲಿ ಹಸನ್ಮುಖರಾಗಿ ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡು ಬಂತು, ಪರಿಷೆಗೆ ಆಗಮಿಸಿದ ಎಲ್ಲಾ ವ್ಯಾಪಾರಿಗಳಿಗೆ ಉಚಿತ ಊಟ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸುವುದರ ಜತೆಗೆ ಪ್ರೋತ್ಸಾಹ ಧನ ನೀಡಿರುವುದು ಈ ಪರಿಷೆಯ ವಿಶೇಷತೆಯಾಗಿದೆ.

ಪರಿಷೆಯಲ್ಲಿ  ವಿಭಿನ್ನ ತಳಿಗಳ ಕಡಲೆಕಾಯಿಗಳ ಮಾರಾಟ, ವಿಭಿನ್ನ ರೀತಿಯ ಆಟೋಪಕರಣ ಗಳ ಅಸಂಖ್ಯಾತ ಮಳಿಗೆಗಳು, ಮಕ್ಕಳ ಮನರಂಜನೆಗೆ ಅಗತ್ಯವಿರುವ ಆಟೋಟಗಳ ಹಲವು ಯಂತ್ರೋಪಕರಣಗಳ ಅಳವಡಿಕೆ ಹೀಗ ಹಲವು ವಿಶೇಷತೆಗಳಿಂದಾಗಿ ವೆಂಕಟಾಲ ಕಡಲೆಕಾಯಿ ಪರಿಷೆ  ಕಳೆ ಕಟ್ಟುವಂತಿತ್ತು. ಮಕ್ಕಳು ಆಟೋಟಗಳ ಯಂತ್ರದಲ್ಲಿ ಕುಳಿತು ಮನರಂಜನೆಯ ಸವಿಯುಂಡು ಅಪರಿಮಿತ ಸಂತೋಷ ವ್ಯಕ್ತಪಡಿಸಿದರು.

ಕಡಲೆಕಾಯಿ ಪರಿಷೆ ಕುರಿತು ಪರಿಷೆಯ ಮುಖ್ಯ ಆಯೋಜಕ ರಾದ ಕೆಂಪೇಗೌಡ ರವರು ಮಾತನಾಡಿ ‘ಅಭಯ ಮಹಾಗಣಪತಿಯ ಕೃಪೆ ಮತ್ತು ಜನರ ಸಹಕಾರದಿಂದ ಕಳೆದ 9 ವರ್ಷಗಳಿಂದ ಸಾಂಗೋಪಾಂಗ ವಾಗಿ ನೆರವೇರುತ್ತಾ ಬಂದಿರುವ ಕಡಲೆಕಾಯಿ ಪರಿಷೆ 10ನೇ ವರ್ಷ ಇನ್ನೂ ಹೆಚ್ಚಿನ ವಿಜೃಂಭಣೆಗೆ ಸಾಕ್ಷಿಯಾಗಿದೆ. ಪರಿಷೆ ವರ್ಷ ಕಳೆದಂತೆ ತನ್ನ ಮೆರಗನ್ನು ಹೆಚ್ಚಿಸಿಕೊಳ್ಳುತ್ತಾ ಬರುತ್ತಿರುವುದು ಸಂತೋಷದ ಸಂಗತಿ ಎಂದರು.

Leave a Reply

Your email address will not be published. Required fields are marked *