ರೈತ ಮೋರ್ಚಾದಿಂದ ರಾಜ್ಯವ್ಯಾಪಿ ಪ್ರತಿಭಟನೆಯ ಎಚ್ಚರಿಕೆ :

ಯಲಹಂಕ : ರೈತರು ಇನ್ನು ಮುಂದೆ ತಮ್ಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಪಡೆಯ ಬೇಕಾದರೆ ಸ್ವಂತ ಖರ್ಚಿನಲ್ಲಿ ಟ್ರಾನ್ಸ್ ಫಾರ್ಮರ್, ಕಂಬ, ತಂತಿ ಸೇರಿದಂತೆ ವಿದ್ಯುತ್ ಗೆ ಸಂಬಂಧ ಪಟ್ಟ ಎಲ್ಲಾ ಪರಿಕರಗಳನ್ನು ರೈತನೇ ಖರೀದಿಸಬೇಕೆಂದು ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ರಾಜ್ಯ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಖಂಡನೆ ವ್ಯಕ್ತಪಡಿಸಿದರು.
ಈ ಕುರಿತು ಸೋಮವಾರ ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ರೈತ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತೀಶ್ ಕಡತನಮಲೆ ಮಾತನಾಡಿ ‘ಬರಗಾಲ, ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದ ಕಂಗಾಲಾಗಿರುವ ರಾಜ್ಯದ ರೈತರಿಗೆ ತಮ್ಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಪಡೆಯ ಬೇಕಾದರೆ ಸ್ವಂತ ಖರ್ಚಿನಲ್ಲಿ ಟ್ರಾನ್ಸ್ ಫಾರ್ಮರ್, ಕಂಬ, ತಂತಿ ಸೇರಿದಂತೆ ವಿದ್ಯುತ್ ಗೆ ಸಂಬಂಧ ಪಟ್ಟ ಎಲ್ಲಾ ಪರಿಕರ ಗಳನ್ನು ಖರೀದಿಸಬೇಕೆಂದು ರಾಜ್ಯ ಸರ್ಕಾರ ಹೊರಡಿರುವ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಹಿಂದೆ ಪ್ರತಿ ನೀರಾವರಿ ಪಂಪ್ ಸೆಟ್ ಗಳಿಗೆ ಕೇವಲ 24 ಸಾವಿರ ರು.ಶುಲ್ಕ ನಿಗದಿಪಡಿಸಲಾಗಿತ್ತು, ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಹೊರಡಿಸಿರುವ ಆದೇಶ ರೈತರನ್ನು ಅತ್ಯಂತ ಸಂಕಷ್ಟಕ್ಕೆ ನೂಕುವಂತಹ ಆದೇಶವಾಗಿದ್ದು, ಒಂದು ಪಂಪ್ ಸೆಟ್ ಅಳವಡಿಸಲು ಇದೀಗ ಒಬ್ಬ ರೈತ ಕನಿಷ್ಟ 2 ಲಕ್ಷದಿಂದ 5. ಲಕ್ಷದವರೆಗೆ ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಡಿಯಾಗಿದೆ. ಈಗಾಗಲೇ ಬರದಿಂದ ಕಂಗಾಲಾಗುರುವ ರೈತನಿಗೆ ಸರ್ಕಾರದ ಈ ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರ ಕೂಡಲೇ ಈ ರೈತ ವಿರೋಧಿ ಆದೇಶವನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ರಾಜ್ಯ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯದಲ್ಲಿ ಪಂಪ್ ಸೆಟ್ ನೆರವಿನಿಂದ ವ್ಯವಸಾಯ ಮಾಡುತ್ತಿರುವ 32 ಲಕ್ಷ ರೈತರನ್ನು ಒಗ್ಗೂಡಿಸಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕೇಶ್ ಗೌಡ, ಹಿರಿಯ ಬಿಜೆಪಿ ಮುಖಂಡ ಎಸ್ ಎನ್ ರಾಜಣ್ಣ ರಾಜ್ಯ ಸರ್ಕಾರದ ರೈತ ವಿರೋಧಿ ಕ್ರಮಗಳ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹೆಚ್.ಬಿ.ಹನುಮಯ್ಯ, ಅರಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಸಿಎಲ್ ಎನ್ ಗೌಡ, ನಾಗೇಶ್, ಯಲಹಂಕ ಗ್ರಾ.ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೇರಿದಂತೆ ಇನ್ನಿತರರಿದ್ದರು.