




ಪರಿಷೆಗೆ ಶಾಸಕರಾದ ಎಸ್ ಆರ್ ವಿಶ್ವನಾಥ್ ಧೀರಜ್ ಮುನಿರಾಜು ವಿ.ಪ.ಸದಸ್ಯ ನಾಗರಾಜ್ ಯಾದವ್ ಭೇಟಿ :
ಯಲಹಂಕ : ಯಲಹಂಕ ನಗರದ ಕೆಂಪೇಗೌಡ ವಾರ್ಡ್ 1ರ ವ್ಯಾಪ್ತಿಯ ವೆಂಕಟಾಲದ ಶ್ರೀ ಅಭಯ ಟಮಹಾಗಣಪತಿ ದೇವಾಲಯದ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಎರಡು ದಿನಗಳ ಕಡಲೆಕಾಯಿ ಪರಿಷೆ ಮಳೆಯ ನಡುವೆಯೂ ಅಸಂಖ್ಯಾತ ಜನರ ಪಾಲ್ಗೊಳ್ಳುವಿಕೆಯಿಂದ ಭಾನುವಾರ ಸಂಜೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಬಿಬಿಎಂಪಿ ಮಾಜಿ ಸದಸ್ಯರು, ಯಲಹಂಕ ನಗರಸಭೆ ಮಾಜಿ ಅಧ್ಯಕ್ಷರಾದ ಕೆಂಪೇಗೌಡರ ನೇತೃತ್ವದಲ್ಲಿ, ಭಕ್ತಾದಿಗಳ ಸಹಕಾರದೊಂದಿಗೆ ಏರ್ಪಡಿಸಿದ್ದ ಕಡಲೆ ಕಾಯಿ ಪರಿಷೆಗೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ವಾಣಿಶ್ರೀ ವಿಶ್ವನಾಥ್, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಭೇಟಿ ನೀಡಿ ಕಡಲೆಕಾಯಿ ವ್ಯಾಪಾರಿಗಳ ಕುಷಲೋಪರಿ ವಿಚಾರಿಸಿದರು.
ಎರಡು ದಿನಗಳ ಕಾಲ ನಡೆದ ವೆಂಕಟಾಲ ಕಡಲೆಕಾಯಿ ಪರಿಷೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂ ಗ್ರಾಮಾಂತರ, ಜಾವಗಲ್, ಪಾವಘಡ, ಆಂಧ್ರದ ಕದಿರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರರಾಜ್ಯ ಗಳಿಂದ ಆಗಮಿಸಿದ್ದ ನೂರಾರು ಕಡಲೆಕಾಯಿ ವ್ಯಾಪಾರಿಗಳು ಪರಿಷೆಯಲ್ಲಿ ಹಸನ್ಮುಖರಾಗಿ ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ಕಡಲೆಕಾಯಿ ಪರಿಷೆ ಕುರಿತು ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿ, ರೈತರು ಬೆಳೆ ಬೆಳೆಯುವುದೇ ದುಸ್ತರವಾಗಿರುವ ಇಂತಹ ವಿಷಮ ಪರಿಸ್ಥಿತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಡಲೆಕಾಯಿ ಬೆಳೆದ ರೈತರು ಯಲಹಂಕದ ವೆಂಕಟಾಲ ಕಡಲೆಕಾಯಿ ಪರಿಷೆಗೆ ಬಂದು ವ್ಯಾಪಾರ ಮಾಡುತ್ತಿರುವುದನ್ನು ಕಂಡು ನೋವಿನ ನಡುವೆಯೂ ಸಂತೋಷವಾಗಿದೆ, ರೈತರ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅಭಯ ಮಹಾಗಣಪತಿ ಕರುಣಿಸುವಂತಾಗಲಿ ಎಂದು ಹಾರೈಸಿದರು.
ಪರಿಷೆಯ ಮುಖ್ಯ ಆಯೋಜಕ ರಾದ ಕೆಂಪೇಗೌಡರು ಮಾತನಾಡಿ ‘ಅಭಯ ಮಹಾಗಣಪತಿಯ ಕೃಪೆ ಮತ್ತು ಜನರ ಸಹಕಾರದಿಂದ ಕಳೆದ 9 ವರ್ಷಗಳಿಂದ ಸಾಂಗೋಪಾಂಗ ವಾಗಿ ನೆರವೇರುತ್ತಾ ಬಂದಿರುವ ಕಡಲೆಕಾಯಿ ಪರಿಷೆ 10ನೇ ವರ್ಷ ಇನ್ನೂ ಹೆಚ್ಚಿನ ವಿಜೃಂಭಣೆಗೆ ಸಾಕ್ಷಿಯಾಗಿರುವುದು ಸಂತೋಷ ಉಂಟು ಮಾಡಿದೆ. ಯಲಹಂಕ ಶಾಸಕರು, ಟಿಟಿಡಿ ಆಡಳಿತ ಮಂಡಳಿಯ ನಿರ್ದೇಶಕರಾದ ಎಸ್ ಆರ್ ವಿಶ್ವನಾಥ್, ದೊಡ್ಡಬಳ್ಳಾಪುರದ ಯುವ ಶಾಸಕ ಧೀರಜ್ ಮುನಿರಾಜು, ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್ ಕಡಲೆಕಾಯಿ ಪರಿಷೆಗೆ ಆಗಮಿಸಿ ಪರಿಷೆಯ ಅಂದ ಹೆಚ್ಚಿಸಿದ್ದಾರೆ ಪರಿಷೆಯ ಆಯೋಜನಾ ಮಂಡಳಿ ಮತ್ತು ವೆಂಕಟಾಲದ ಸಮಸ್ತ ನಾಗರೀಕರ ಪರವಾಗಿ ಅವರಿಗೆ ಧನ್ಯವಾದ ತಿಳಿಸಲಿಚ್ಚಿಸುತ್ತೇನೆ ಎಂದರು.