ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿ ಹಾಗೂ ಬಿಜೆಪಿ ಮುಖಂಡ ಎ.ರವಿ ಇವರ ಸಹಯೋಗದಲ್ಲಿ ಇಲ್ಲಿನ ಎನ್ ಟಿ ಐ ಮೈದಾನದಲ್ಲಿ ಡಿಸೆಂಬರ್ 6 ರಿಂದ 17ರವರೆಗೆ 11 ದಿನಗಳ ಶ್ರೀ ವಿಶ್ವ ಮಹಾಕಾಳೀ ಯಾಗ ಏರ್ಪಡಿಸಲಾಗಿದೆ.

ವಿದ್ಯಾಭಿವೃದ್ಧಿ, ವಶೀಕರಣ, ಸರ್ವವಶೀಕರಣ, ಸರ್ವ ಶತೃನಾಶ, ಸರ್ವರೋಗ ನಿವಾರಣೆ, ಸರ್ವ ಕಾರ್ಯವಿಜಯ, ಕುಲದೋಷ ನಿವಾರಣೆ, ಗ್ರಹದೋಷ ನಿವಾರಣೆ, ಸರ್ವ ಬಾಧೆಗಳ ನಿವಾರಣೆ, ಸರ್ಪದೋಷ ನಿವೃತ್ತಿ, ಸೌಭಾಗ್ಯದೋಷ ನಿವಾರಣೆ, ಪಿತೃ ದೋಷ ನಿವಾರಣೆ, ಸಂತಾನ ಪ್ರಾಪ್ತಿ, ಸ್ವಯಂವರ ಶಾಂತಿ, ಪಂಚಭೂತ ಶಾಂತಿ ಹಾಗೂ ಲೋಕ ಶಾಂತಿಗಾಗಿ ಈ ವಿಶ್ವ ಮಹಾಕಾಳೀ ಯಾಗವನ್ನು ಏರ್ಪಡಿಸಲಾಗಿದೆ.

ಮಹಾಕಾಳೀ ಯಾಗದ ಪ್ರಯುಕ್ತ ಬದರೀನಾಥ ಆಶ್ರಮದ ಕೇರಳ ತಾಂತ್ರಿಕ ಪ್ರಮುಖರು, ಯಾಗ ಗುರು ಶಾಂತಿದಾಸನ್ ಸ್ವಾಮೀಜಿ ರವರ ನೇತೃತ್ವದಲ್ಲಿ ವಿಶೇಷ ಕಾಳೀ ಯಾಗ, ನವಕಾಳೀ ಹೋಮ, ಮಹಾ ಚಂಡಿಕಾ ಹೋಮ, ಮಹಾ ಲಕ್ಷ್ಮೀ ಹೋಮ, ಮಹಾ ಸರಸ್ವತೀ ಹೋಮ, ಮಹಾ ಸುದರ್ಶನ ಹೋಮ, ಮಹಾ ಗಾಯತ್ರೀ ಹೋಮ, ಮಹಾ ಅಗ್ನಿ ಹೋತ್ರ, ಅಘೋರ ಹೋಮ, ವೀರಭದ್ರ ಹೋಮ, ಮಹಾ ಗಣಪತಿ ಹೋಮ, ಮಹಾದುರ್ಗಾ ಹೋಮ, ನವಗ್ರಹ ಹೋಮ, ಸರ್ಪಬಲಿ, ಮಹಾ ಪ್ರತ್ಯಂಗಿರಾ ಹೋಮ ಮತ್ತು ಮಹಾ ವಾರ್ತಾಳೀ ಹೋಮ ಇತ್ಯಾದಿ ಹೋಮ-ಹವನಾದಿ ಕಾರ್ಯಗಳು ನೆರವೇರಲಿವೆ.

ಮಹಾಕಾಳೀ ಯಾಗವನ್ನು ಕುರಿತು ಬಿಜೆಪಿ ಮುಖಂಡ ಎ.ರವಿ ಮಾತನಾಡಿ ‘ಸಾವಿರಾರು ದೇವಾಲಯಗಳಿಗೆ ಭೇಟಿ ನೀಡುವುದಕ್ಕಿಂತ ಒಂದು ಯಾಗ ಶಾಲೆಗೆ ಭೇಟಿ ನೀಡುವುದು ಉತ್ತಮ ಎನ್ನುವುದು ಉಪನಿಷತ್ತಿನ ವ್ಯಾಖ್ಯಾನವಾಗಿದ್ದು, ದೇಶದ ಸುಭೀಕ್ಷತೆ ಮತ್ತು ನಾಡಿನ ಏಳಿಗೆಯನ್ನು ಕೋರಿ ಈ ಯಾಗವನ್ನು ನಡೆಸಲಾಗುತ್ತಿದೆ. ಮಹಾಕಾಳಿಯ ಕೃಪೆಗೆ ಪಾತ್ರರಾಗಲಿಚ್ಛಿಸುವವರು ಈ ಯಾಗಕ್ಕೆ ಭೇಟಿ ನೀಡಬಹುದು. ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಆರ್.ವಸಂತ್ ಕುಮಾರ್ ಶಾಸ್ತ್ರಿ ಯವರ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಯಾಗವು ಹಲವು ವಿಶೇಷತೆಗಳಿಂದ ಕೂಡಿದ್ದು, ಮನುಕುಲಕ್ಕೆ ಒಳಿತಾಗಲಿದೆ. ಆಸಕ್ತರು ಯಾಗದಲ್ಲಿ ಪಾಲ್ಗೊಂಡು ತಮ್ಮ ಸಂಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *