11. /12/2023. ಇಂದ ಚಿಕ್ಕಬಳ್ಳಾಪುರದಿಂದ ರಾಜಧಾನಿಗೆ ರೈಲು ಪ್ರಯಾಣ ಸುಲಭ
4 ಹೆಚ್ಚುವರಿಯಾಗಿ ರೈಲುಗಳ ಸಂಚಾರ- ಪ್ರಯಾಣಿಕರಿಗೆ ಅನುಕೂಲ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರಕ್ಕೆ ಈವರೆಗೂ ಇದ್ದ 2 ರೈಲುಗಳ ಜೊತೆಗೆ ಹೆಚ್ಚುವರಿಯಾಗಿ 4 ರೈಲುಗಳನ್ನು ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ಮೂಲಕ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ.
ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಹೆಚ್ಚುವರಿ ರೈಲ್ವೆ ಸಂಪರ್ಕ ನೀಡಲು ರೈಲ್ವೇ ಪ್ರಯಾಣಿಕರ ಸೌಲಭ್ಯ ಸಮಿತಿ ಸದಸ್ಯ ಡಾ.ಜಿ.ವಿ.ಮಂಜುನಾಥ್ ಹಲವು ಬಾರಿ ಮನವಿ ಸಲ್ಲಿಸಿದ್ದು, ಕೇಂದ್ರ ರೈಲ್ವೇ ಸಮಿತಿ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇವರ ಮನವಿಯನ್ನು ಪುರಸ್ಕರಿಸಿರುವ ಕೇಂದ್ರ ರೈಲ್ವೇ ಸಮಿತಿ ಚಿಕ್ಕಬಳ್ಳಾಪುರಕ್ಕೆ ಹೆಚ್ಚುವರಿ ರೈಲುಗಳನ್ನು ಮಂಜೂರು ಮಾಡಿದೆ.
ಯಾವ ಸಮಯಕ್ಕೆ?: ಬೆಂಗಳೂರಿನಿಂದ ಈಗಾಗಲೇ ಸಂಚರಿಸುತ್ತಿರುವ ಎರಡು ರೈಲುಗಳ ಜೊತೆಗೆ ಹೆಚ್ಚುವರಿಯಾಗಿ ಮಂಜೂರಾಗಿರುವ 4 ರೈಲುಗಳು ಡಿ.11 ರಿಂದ ಸಂಚಾರ ಆರಂಭವಾಗಲಿದೆ. ಈ ರೈಲುಗಳು ಪ್ರತಿ ಗಂಟೆಗೆ ಒಮ್ಮೆ ಬೆಂಗಳೂರಿನಿಂದ ಆಗಮಿಸುವುದು, ಪ್ರತಿ ಗಂಟೆಗೊಮ್ಮೆ ಬೆಂಗಳೂರಿಗೆ ಸಂಚರಿಸಲಿವೆ.
ಇದರಿಂದ ಚಿಕ್ಕಬಳ್ಳಾಪುರ ದಿಂದ ಬೆಂಗಳೂರಿಗೆ ನಾನಾ ಕೆಲಸಗಳ ನಿಮಿತ್ತ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗಾಗಿ ಈಗಾಗಲೇ ಎರಡು ರೈಲುಗಳು ತಲಾ ಒಂದು ಬಾರಿ ಚಿಕ್ಕಬಳ್ಳಾಪುರ ಬಂದು ಕೋಲಾರದ ವರೆಗೆ ಹೋಗಿ ವಾಪಸ್ಸು ಬೆಂಗಳೂರಿಗೆ ಸಂಚರಿಸುತ್ತಿವೆ. ಹೆಚ್ಚುವರಿ ರೈಲುಗಳ ಮಂಜೂರಾತಿಯಿಂದ ರೈಲ್ವೇ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ತಪ್ಪಿದ ಸಂಚಾರ ಕಿರಿಕಿರಿ: ನಿಗಧಿತ ಸಮಯಕ್ಕೆ ಬೆಂಗಳೂರಿಗೆ ರೈಲು ಇಲ್ಲದಿರುವುದು, ಇರುವ ರೈಲುಗಳಲ್ಲಿ ಪ್ರಯಾಣಿಕರು ಹೆಚ್ಚಾಗಿ ನಿಲ್ಲಲು ಸಾಧ್ಯವಾಗದಷ್ಟು ಜನಸಂದಣಿಯಿಂದ ಕೂಡಿರುವುದು ಮುಂತಾದ ಸಮಸ್ಯೆಗಳಿಂದ ಹೆಚ್ಚು ಜನರು ರೈಲಿನಲ್ಲಿ ಪ್ರಯಾಣಿಸಲು ಆಸಕ್ತಿ ವಹಿಸಿದರೂ ಅನಿವಾರ್ಯವಾಗಿ ಬಸ್ ಪ್ರಯಾಣಕ್ಕಾಗಿ ಮೊರೆ ಹೋಗಬೇಕಿತ್ತು.
ಬಸ್ನಲ್ಲಿ ಸಂಚರಿಸುವ ಪ್ರಯಾಣಿಕರು ಬೆಂಗಳೂರು ನಗರದಲ್ಲಿ ತೀವ್ರವಾದ ಸಂಚಾರ ವಾಹನ ದಟ್ಟಣೆಯಿಂದಾಗಿ ನಿಗಧಿತ ಸಮಯಕ್ಕೆ ಕಚೇರಿಗಳಿಗೆ ಹೋಗಲಾಗದೆ ಪರದಾಡುವಂತಾಗಿತ್ತು. ಅದೇ ರೀತಿಯಲ್ಲಿ ಸಂಜೆಯ ವೇಳೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸುವ ಪ್ರಯಾಣಿಕರಿಗೂ ಅದೇ ಸ್ಥಿತಿ ಎದುರಾಗಿತ್ತು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಪ್ರಮುಖ ಸ್ಥಳಗಳಿಗೆ ತೆರಳಲು ಬಳ್ಳಾರಿ ರಸ್ತೆಯನ್ನೇ ಅಲವಂಭಿಸಬೇಕಿದ್ದು, ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪ್ರಯಾಣಿಕರು ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ ಡಿ.11 ರಿಂದ 6 ರೈಲುಗಳು ಪ್ರತಿನಿತ್ಯ ಪ್ರತಿ ಗಂಟೆಗೊಮ್ಮೆ ರಾಜಧಾನಿಗೆ ಸಂಚರಿಸಲಿರುವ ಹಿನ್ನಲೆಯಲ್ಲಿ ಬೆಂಗಳೂರಿಗೆ ಹೋಗುವ ಮತ್ತು ಬರುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಕೋಲಾರಕ್ಕೂ ವಿಸ್ತರಣೆ: ಪ್ರಸ್ತುತ ಹೆಚ್ಚುವರಿಯಾಗಿ ಮಂಜೂರು ಮಾಡಿರುವ 4 ರೈಲುಗಳು ಚಿಕ್ಕಬಳ್ಳಾಪುರದಿಂದಲೇ ವಾಪಸ್ಸಾಗಲಿದ್ದು, ಬಾಕಿಯಿರುವ ವಿದ್ಯುತ್ ಸಂಪರ್ಕ ಕಲ್ಪಿಸಿದ ನಂತರ 2 ರೈಲುಗಳು ಮುಂದಿನ ದಿನಗಳಲ್ಲಿ ಕೋಲಾರದವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ಹೆಚ್ಚುವರಿ ರೈಲುಗಳ ಮಂಜೂರಿನಿಂದಾಗಿ ಕೋಲಾರದತ್ತ ಪ್ರಯಾಣಿಸಬೇಕಾದ ಮತ್ತು ಬೆಂಗಳೂರಿಗೆ ತೆರಳುವವರಿಗೆ ಹೆಚ್ಚು ಅನುಕೂಲವಾಗಿದ್ದು, ಪ್ರತಿನಿತ್ಯ ರೈಲಿನಲ್ಲಿ ಸಂಚರಿಸುವ ಪ್ರಯಾನೀಕರು ರೈಲ್ವೇ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ಚಿಕ್ಕಬಳ್ಳಾಪುರಕ್ಕೆ ಹೆಚ್ಚುವರಿಯಾಗಿ 4 ರೈಲುಗಳು ಮಂಜೂರಾಗಿದ್ದು,ಇವು ಪ್ರತಿನಿತ್ಯ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದತ್ತ ಸಂಚರಿಸುವ ಕಾರಣ ಹೆಚ್ಚು ಪ್ರಯಾಣಿಕರನ್ನು ರೈಲ್ವೇ ಸೇವೆ ಆಕರ್ಷಿಸಲಿದೆ.ಇದರಿಂದ ಚಿಕ್ಕಬಳ್ಳಾಪುರ ಜನತೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ರೈಲ್ವೇ ಸಮಿತಿ ಸದಸ್ಯ, ಬಿಜೆಪಿ ಮಾಜಿ ಜಿಲ್ಲಾಧ್ಯಡಾ.ಜಿ.ವಿ.ಮಂಜುನಾಥ್,ತಿಳಿಸಿದ್ದಾರೆ.
