ಕೋಲಾರ : ನಾಡು ಮತ್ತು ನುಡಿಯ ರಕ್ಷಣೆಗಾಗಿ ಜಾತಿ ಮತ್ತು ಧರ್ಮವನ್ನು ಬಿಟ್ಟು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು,
ತಾಲೂಕಿನ ನರಸಾಪುರ ಗ್ರಾಮದಲ್ಲಿ ಕನ್ನಡ ಸೇನೆ ವತಿಯಿಂದ ಕನ್ನಡ ಸೇನೆಯ ಕೋಲಾರ ತಾಲೂಕು ಅಧ್ಯಕ್ಷ ಎನ್ ಸಿ ಶಿವಚಂದ್ರಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ 68ನೇ ಅದ್ಧೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿ ನಮ್ಮಲ್ಲಿ ಭಾಷಾ ಸ್ವಾಭಿಮಾನ ಬಹಳ ಕಡಿಮೆ ಇರುವುದರಿಂದ ಪ್ರತಿಯೊಬ್ಬರು ಭಾಷೆಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು, ಕನ್ನಡ ಭಾಷೆಗೆ ಹಲವಾರು ವರ್ಷಗಳ ಇತಿಹಾಸವಿದ್ದು, ಯಾವ ಭಾಷೆಗೂ ಸಿಗದಷ್ಟು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಭಾಷೆಗೆ ಸಿಕ್ಕಿದೆ,ಕನ್ನಡ ರಾಜ್ಯೋತ್ಸವ ನವೆಂಬರ್ ಒಂದನೇ ತಾರೀಖಿನಂದು ಮಾತ್ರ ಸೀಮಿತ ಅಲ್ಲ, ಪ್ರತಿದಿನ ಪ್ರತಿ ಮನೆಯ ಹಬ್ಬ ಆಗಬೇಕು, ಬೇರೆ ಭಾಷಿಕರು ಅವರ ಭಾಷೆಗೆ ಕೊಡುವ ಮಹತ್ವವನ್ನು ಕನ್ನಡಿಗರಾದ ನಾವು ನಮ್ಮ ಭಾಷೆಗೆ ಅಷ್ಟೇ ಮಹತ್ವವನ್ನು ಕೊಡಬೇಕು ಎಂದರು.
ಇಲ್ಲಿನ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಸಿಗುವಂತೆ ಮಾಡುತ್ತೇನೆ, ನರಸಾಪುರ ಗ್ರಾಮದಲ್ಲಿ ಅಂಬೇಡ್ಕರ್ ಭವನ ಕಟ್ಟಿಸಬೇಕೆಂದು ನಮ್ಮ ಗಮನಕ್ಕೆ ಬಂದಿದ್ದು ಆದಷ್ಟು ಬೇಗ ಶೀಘ್ರದಲ್ಲೇ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ನಂತರ ಕೋಲಾರ ತಾಲೂಕು ಕನ್ನಡ ಸೇನೆಯ ತಾಲೂಕು ಅಧ್ಯಕ್ಷ ಎನ್ ಸಿ. ಶಿವ ಚಂದ್ರಯ್ಯ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸ್ಥಿತಿಗತಿ ಬದಲಾಗಿದೆ, ಕನ್ನಡದ ಮೇಲೆ ಇತರೆ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ, ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ, ಇಂತಹ ಸಮಯದಲ್ಲಿ ಕನ್ನಡದ ಆಸ್ತಿ ಗಾಗಿ ಎಲ್ಲರೂ ಹೋರಾಡಬೇಕಾಗಿದೆ, ಕನ್ನಡ ನಮ್ಮ ಉಸಿರಾಗಿರಬೇಕು, ಎಂತಹ ಸಂದರ್ಭದಲ್ಲಿ ಕನ್ನಡವನ್ನು ಬಿಟ್ಟು ಕೊಡಬಾರದು, ಬೇರೆ ಭಾಷೆಗಳನ್ನು ಕಲಿತು ಕನ್ನಡ ಮರೆಯೋದು ತಪ್ಪು ಕನ್ನಡದ ಉಳಿವಿಗಾಗಿ ಪಣತೊಡಬೇಕಾಗಿದೆ, ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ ಪುತ್ತಳಿಗೆ ಕೋಲಾರ ಜನಪ್ರಿಯ ಶಾಸಕರಾದ ಕೊತ್ತೂರು ಜಿ ಮಂಜುನಾಥ್ ರವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು ಹಾಗೂ ಶ್ರೀ ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ನಂತರ ಕನ್ನಡ ಬಾವುಟದ ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಯಿತು ಹಾಗೂ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಿತು ಜೊತೆಗೆ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಎಂ ಎಲ್ ಸಿ ಅನಿಲ್ ಕುಮಾರ್, ಕುಷ್ಠರೋಗ ನಿವಾರಣಾ ಅಧಿಕಾರಿ ಡಾ ಎನ್ ಸಿ ನಾರಾಯಣಸ್ವಾಮಿ, ನರಸಾಪುರ ಗ್ರಾ. ಪಂ.ಅಧ್ಯಕ್ಷ ಕೃಷ್ಣಪ್ಪ, ನರಸಾಪುರ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಖಾಜಿ ಕಲ್ಲಹಳ್ಳಿ ಮುನಿರಾಜು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪೆಮ್ಮಶೆಟ್ಟಿ ಹಳ್ಳಿ ಸುರೇಶ್, ಎಸ್ ಡಿ ಎಂ ಸಿ ಅಧ್ಯಕ್ಷ ಎಂ ಟಿ ಬಿ ಶ್ರೀನಿವಾಸ್, ಹೂಡಿ ನಾರಾಯಣಸ್ವಾಮಿ, ಕನ್ನಡ ಸೇನೆಯ ತಾಲೂಕು ಉಪಾಧ್ಯಕ್ಷ ಅನಿಲ್ ಕುಮಾರ್, ಹೋಬಳಿ ಘಟಕದ ಅಧ್ಯಕ್ಷ ಚಳ್ಳಳ್ಳಿ ನಾಗರಾಜ್,ಶಿಕ್ಷಕ ಯಲ್ಲಪ್ಪ, ಎನ್ ಸಿ ಚಂದ್ರ ಮೋಹನ್, ವಕೀಲ ಎನ್ ಡಿ ಶ್ರೀನಿವಾಸ್, ಎನ್ ಎಂ ನಾಗೇಶ್, ವಿಜೇಂದ್ರ ಕುಮಾರ್, ಖಾಜಿ ಕಲ್ಲಹಳ್ಳಿ ವೆಂಕಟೇಶ್, ಶಾಂತಮ್ಮ, ಅಪ್ರೋಜ್ ಬಾನು, ಕನ್ನಡ ಸೇನೆಯ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
