.

ಅಶ್ವಿನಿ ಪುನಿತ್ ರಾಜ್ ಕುಮಾರ್ ರವರಿಂದ ಪುನೀತ್ ರಾಜ್ಕುಮಾರ್ ರವರ ಕಂಚಿನ ಪ್ರತಿಮೆ ಅನಾವರಣ :
ಯಲಹಂಕ : ಪುನೀತ್ ರಾಜ್ಕುಮಾರ್ ನಾಡು ಕಂಡ ಅಪ್ರತಿಮ ನಟ ಎಂಬುದಕ್ಕಿಂತ ಅವರೊಬ್ಬ ದೇಶ ಕಂಡ ಸರ್ವಶ್ರೇಷ್ಠ ಸಮಾಜ ಸೇವಕರು ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಯಲಹಂಕ ಹಳೇನಗರದ ಹೊಸಬೀದಿಯಲ್ಲಿ ಪುನೀತ್ ರಾಜ್ಕುಮಾರ್ ರವರ 9 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ‘ಬಾಲನಟನಾಗಿ ನಟಿಸಿ ಆ ವೇಳೆಯಲ್ಲೇ ರಾಷ್ಟ್ರಪ್ರಶಸ್ತಿ ಪಡೆಯುವ ಮೂಲಕ ಅದ್ಭುತ ನಟ ಎಂಬುದನ್ನು ನಿರೂಪಿಸಿದ್ದರು. ಯೌವನಾವಸ್ತೆಯಲ್ಲಿ ಹತ್ತಾರು ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಅವುಗಳನ್ನು ಸೂಪರ್ ಹಿಟ್ ಗೊಳಿಸಿದ್ದ ಅವರು, ಬದುಕಿನ ಕೊನೆಯವರೆಗೂ ತಾವು ಮಾಡಿದ ನೂರಾರು ಸಮಾಜ ಸೇವಾ ಕಾರ್ಯಗಳ ಬಗ್ಗೆ ಯಾರಿಗೂ ತಿಳಿಯದಂತೆ ಇದ್ದ ಅವರ ಗಂಭೀರ ನಡೆ ನಿಜಕ್ಕೂ ಇಡೀ ದೇಶಕ್ಕೆ ಮಾದರಿಯಾಗಿದೆ. ಎಲೆ ಮರೆಯ ಕಾಯಿಯಂತೆ ಅಸಂಖ್ಯಾತ ಬಡವರು, ಅನಾಥರಿಗೆ ದಾರಿ ದೀಪವಾಗಿದ್ದ ಪುನೀತ್ ರಾಜ್ಕುಮಾರ್ ರವರು ನಾಡಿನ ಮತ್ತು ದೇಶದ ಜನರ ಹೃನ್ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
ಅವರಿಗೆ ನಮ್ಮ ರಾಜ್ಯ, ದೇಶದಲ್ಲೇ ಅಲ್ಲದೆ ವಿದೇಶಗಳಲ್ಲೂ ಸಹ ಲಕ್ಷಾಂತರ ಅಭಿಮಾನಿಗಳಿ ರುವುದನ್ನು ಅಕ್ಕ ಸಮ್ಮೇಳನಕ್ಕೆ ಅವರೊಟ್ಟಿಗೆ ತೆರಳಿದ್ದಾಗ ನೋಡಿ ಹೆಮ್ಮೆ ಎನಿಸಿತು. ಅವರು ಹಾಕಿ ಕೊಟ್ಟಿರುವ ಸಮಾಜ ಸೇವೆಯ ಉದಿತ ಮಾರ್ಗದಲ್ಲಿ ನಾವು ನಡೆದರೆ ಅದೇ ಅವರಿಗೆ ನಾವು ಸಲ್ಲಿಸುವ ಗೌರವ, ಅಭಿಮಾನ. ಅವರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ, ಏಕೆಂದರೆ ಅವರು ನಮ್ಮೆಲ್ಲರ ಮನದಾಳದಲ್ಲಿ ಅದೃಶ್ಯವಾಗಿ ನೆಲೆಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ರವರು ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್ ರವರಿಗೆ ಜನ್ಮದಿನದ ಶುಭ ಕೋರಿದರು. ಇದೇ ಸಂದರ್ಭ ದಲ್ಲಿ ನಟ ಮುರಳಿ,ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್, ಬಿಜೆಪಿ ಮುಖಂಡರಾದ ವಿ.ವಿ.ರಾಮಮೂರ್ತಿ, ವೈ.ಎಸ್.ರಾಜ, ವೈ.ಸಿ.ವೆಂಕಟೇಶ್, ವೈ.ಜಿ.ಮೂರ್ತಿ, ಮಹಿಳಾ ಮುಖಂಡರಾದ ವಸುಧಾ ಸೇರಿದಂತೆ ಪುನೀತ್ ರಾಜ್ಕುಮಾರ್ ರವರ ಅಸಂಖ್ಯಾತ ಅಭಿಮಾನಿಗಳಿದ್ದರು. ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆ, ಗಣ್ಯರಿಗೆ ಸನ್ಮಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.