ಹಿಂದಿನ ಕಾಲದಲ್ಲಿ ಮಕ್ಕಳು ಬಳಪದಿಂದ ಬರೆಯಲು ಉಪಯೋಗಿಸುತ್ತಿದ್ದ ಸ್ಲೇಟು ಒಂದು ರೀತಿಯ ಮೃದು ಕಲ್ಲಿನ ಹಲಗೆಯಾಗಿರುತ್ತಿತ್ತು. ಅದಕ್ಕೆ ಮೃದು ಮರದ ಚೌಕಟ್ಟಿರುತ್ತಿತ್ತು. ಅಕಸ್ಮಾತ್ ಅದು ಕೆಳಗೆ ಬಿದ್ದು ಒಡೆದು ಹೋದರೆ, ಮತ್ತೆ ಅಂಟಿಸಲಾಗುತ್ತಿರಲಿಲ್ಲ. ಹಾಗೆ ಒಡೆದ ಹಲಗೆಯನ್ನು ಅಂಟಿಸಲು ಪ್ರಯತ್ನಪಟ್ಟು ಆಯಾಸಪಡುವ ಮಗುವಿನಂತೆ, ಆ ಪರಮಾತ್ಮನೂ ಸಹ ಒಂದೇ ಆಗಿದ್ದ ತಾನು ಹಲವಾಗಿ , ಅದನ್ನೆಲ್ಲ ಮತ್ತೆ ಒಟ್ಟಿಗೆ ಅಂಟಿಸಲು ಮಾಡುವ ಪ್ರಯತ್ನದಲ್ಲಿ ತಲ್ಲೀನನಾಗಿದ್ದಾನೋ ಎಂದು ಒಂದು ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.